My Blog List

Thursday, October 16, 2008

ಗೋಕಾಕ ಪ್ರವಾಸ...

ವಿನೋದನ ಮದುವೆ

ವಿನೋದ weds ರೀನಾ

ದಿನಾಂಕ: ೪-೧೨-೨೦೦೭

ಸ್ಥಳ: ಸಮುದಾಯ ಭವನ, ಗೋಕಾಕ

ಗುಂಪು-೧: ನಾಗರಾಜ, ಸಂಧ್ಯಾ(ಶ್ರೀಮತಿ ನಾಗರಾಜ), ರಾಘು, ಶರತ್, ಪ್ರವೀಣ(ಟಿಂಕು) ಮತ್ತು ನಾನು(ಅನಿಲ್).

ಗುಂಪು-೨: ಶಂಕರ, ಮಾನಸ (ಶ್ರೀಮತಿ ಶಂಕರ), ಸಂತೋಷ, ಮಯೂರಿ (ಶ್ರೀಮತಿ ಸಂತೋಷ), ರಾಮ, ಅಶೋಕ.

ದಿನಾಂಕ: ೩೦-೧೧-೨೦೦೭

ವಿನೋದನಿಗೆ ಅವನ ಮದುವೆ ಎರಡು ದಿನದ ಕಾರ್ಯಕ್ರಮವಾದರೆ, ನಮಗೆ (ಅಂದರೆ ಗುಂಪು - ೧) ನಾಲ್ಕು ದಿನದ ಸುಧೀರ್ಘ ಹಾಗೂ ಹೆಕ್ಟಿಕ್ ಪ್ರೊಗ್ರಾಮ್.

ಮೊದಲೇ ನಿರ್ಧರಿಸಿದಂತೆ ನಾವುಗಳು (ಸಂಧ್ಯಾ ಅವರನ್ನು ಹೊರತುಪಡಿಸಿ) ದಿನಾಂಕ ೩೦-೧೧-೨೦೦೭, ಅಂದರೆ, ಶುಕ್ರವಾರದಂದು ಬೆಂಗಳೂರಿನಿಂದ ಧಾರವಾಡಕ್ಕೆ ೨೧:೧೫ ರ ರಾಣಿ ಚೆನ್ನಮ್ಮ ರೈಲನ್ನ್ನೇರಿದೆವು. ಮೂರನೇ ದರ್ಜೆಯ ಹವಾನಿಯಂತ್ರಿತ (೩ ಟಯರ್ ಎ ಸಿ) ಬೋಗಿಯಲ್ಲಿ ಸ್ಥಳವನ್ನು ಕಾದಿರಿಸಲಾಗಿತ್ತು (ಟಿಕೆಟ್ ಗಳ ಕೃಪೆ: ರಾಘು). ಸಂಧ್ಯಾ ಅವರು ಎರಡು ಮೂರು ದಿನ ಮೊದಲೇ ಸವದತ್ತಿಗೆ ಪ್ರಯಾಣ ಬೆಳೆಸಿ ಅವರ ತಾಯಿಯ ತವರು ಮನೆಯಲ್ಲಿ ತಂಗಿದ್ದರು. ನಾಗರಾಜ ನಮ್ಮ ಜೊತೆ ಇದ್ದಿದ್ದರಿಂದ ನಾವುಗಳು ಸವದತ್ತಿಗೆ ಹೋಗುವುದು ಅನಿವಾರ್ಯವಾಗಿತ್ತು Smiling. ರೈಲಿನಲ್ಲಿ ವಾತಾವರಣ ಆರಾಮದಯಕ. ಹರಟೆ, ಫೋಟೋ ಸೆಶನ್ ಮಾಡುತ್ತಾ ಕಾಲ ಕಳೆದದ್ದೆ ಗೊತ್ತಾಗಲಿಲ್ಲ. ನಾಗರಾಜರಿಗೆ ಹೊಟ್ಟೆ ಹಸಿವು (ಕೃಪೆ: ಹೆಂಡತಿ ಊರು ಸೇರಿದ್ದು), ಹಾಗಾಗಿ ರೈಲು ತುಮಕೂರಿಗೆ ಬಂದಾಗ ಎಲ್ಲರಿಗೂ ಬಿಸಿ ಇಡ್ಲಿ ವಡೆ ತರಿಸಿದೆವು(ಕಂಪನಿ ಕೊಡದೆ ಇರಕ್ಕೆ ಆಗಲ್ಲ ನೋಡಿ)Smiling. ಸಮಯ ರಾತ್ರಿ ೧೦.೪೫. ಹೊಟ್ಟೆಗೆ ಬಿಸಿ ಬಿಸಿ ಇಡ್ಳಿ ವಡೆ ಬಿದ್ದ ಮೇಲೆ ಹರಟೆಗೆ ಹುರುಪು ಬಂದು ಚೆನ್ನಾಗಿ ಟೈಮ್ ಪಾಸ್ ಆಗ್ತಾ ಇತ್ತು. ಆದರೆ ೧೧.೩೦ ರ ಸುಮಾರಿಗೆ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ಮಹಾನುಭಾವರೊಬ್ಬರು, ಡಿಸ್ಟರ್ಬ್ ಆಗ್ತಾ ಇದೆ, ಲೈಟ್ ಆಫ್ ಮಾಡಿ ಮಲ್ಕೊಳ್ಳಿ ಅಂದಾಗ ಬೇರೆ ದಾರಿ ಕಾಣದೆ ನಾವೂ ಮಲಗಿದೆವು... Sad

ದಿನಾಂಕ: ೧-೧೨-೨೦೦೭

ರೈಲು ಧಾರವಾಡವನ್ನು ತಲುಪಿದಾಗ ಬೆಳಿಗ್ಗೆ ಸುಮಾರು ೬:೧೫ ರ ಸಮಯ... ಸಂಧ್ಯಾ ಅವರು ನಮ್ಮನ್ನು ಸವದತ್ತಿಗೆ ಕರೆತರಲು ಕಳುಹಿಸಿದ್ದ ಟೆಂಪೋ ಕ್ರೂಸರ್ (cruiser)ನ ಡ್ರೈವರ್ ಖಸೀಮ (ಖಾಸಿಮ್) ನಮಗಾಗಿ ಕಾಯುತ್ತಿದ್ದ. ನಾವು ಕ್ರೂಸರ್ ನಲ್ಲಿ ಹತ್ತಿ ಸವದತ್ತಿ ಕಡೆಗೆ ಹೊರೆಟೆವು... ದಾರಿಯಲ್ಲಿ ಬಿಸಿ ಬಿಸಿ ಚಹಾ ಕುಡಿದು ಬೆಳಗ್ಗಿನ ಸುರ್ಯೋದಯದ ಫೋಟೋ ತೆಗೆದುಕೊಂಡೆವು. ಸೂರ್ಯೋದಯ...

ಖಾಸೀಮನ ಡ್ರೈವಿಂಗ್ ಸ್ಕಿಲ್ಸ್ ಬಗ್ಗೆ ಹೇಳಲೇ ಬೇಕು. Always One Leg on the Accelerator & Do Not Hit Below 100km... ಅದು ನಿಜವಾಗಿಯೂ ಕ್ರೂಸರ್ Smiling. ನಾವು ಸವದತ್ತಿಯಲ್ಲಿ ಸಂಧ್ಯಾ ಅವರ ಅಜ್ಜಿ ಮನೆಯನ್ನು ತಲುಪಿದಾಗ ಸಮಯ ೭:೩೦. ಈ ಮಧ್ಯ ಕೆಲ ದಿನಗಳಿಂದ ದೂರವಿದ್ದ ಸಂಧ್ಯಾ ನಾಗರಾಜ ದಂಪತಿಗಳ ಮುಖದಲ್ಲಿ ಒಂದು ತರಹದ ಕಳೆ ಎದ್ದು ಕಾಣುತ್ತಿತ್ತು. ಮತ್ತೆ ಅವರ ಮನೆಯಲ್ಲಿ ಚಹಾ /ಕಾಫಿ ಕುಡಿದೆವು. ಅಂದು ಅವರ ಮನೆಯಲ್ಲಿ ಸಂತರು ಬರುವ ಕಾರ್ಯಕ್ರಮ ಇದ್ದುದರಿಂದ ಮನೆಯವರೆಲ್ಲ ಅದಕ್ಕಾಗಿ ತಯಾರಿ ನಡೆಸಿದ್ದರು. ನಮಗೆ ಹೋಟೆಲ್ ಶಿವಾನಿಯಲ್ಲಿ ಸ್ನಾನದ ವ್ಯವಸ್ಥೆ ಮಾಡಲಾಗಿತ್ತು.

ನಾವು ಸ್ನಾನ ಮುಗಿಸಿ ೯.೩೦ ರ ಸುಮಾರಿಗೆ ಸಂಧ್ಯಾರವರ ಅಜ್ಜಿ ಮನೆಗೆ ಬಂದೆವು. ಎಲ್ಲರೂ ಸಂತರ ಆಗಮನಕ್ಕಾಗಿ ಕಾಯುತ್ತಿದ್ದರು. ಮನೆಗೆ ಬಂದ ಅಳಿಯ ನಾಗರಾಜರಿಗೆ ಸ್ಪೆಷಲ್ ಡ್ರೆಸ್ ಹಾಕುವಂತೆ ಪತ್ನಿಯಿಂದ ಇಂದ ಆದೇಶ. ಹೆಂಡತಿ ಆದೇಶ ಪಾಲಿಸಲೇಬೇಕಲ್ವೇ. ಮೀರುವುದಕ್ಕೆ ಆಗುತ್ಯೇ? ಅದರಂತೆ ನಾಗರಾಜ ಟಿಪಿಕಲ್ ನಾರ್ತ್ ಕರ್ನಾಟಕ ಶೈಲಿಯಲ್ಲಿ, ತಲೆ ಮೇಲೆ ಟೋಪಿ ಇಟ್ಕೊಂಡು ಪಂಚೆ ಕಟ್ಟಿಕೊಂಡರು. ನಂತರ ಸಂತರ ಆಗಮನ. ಮನೆಯವರೆಲ್ಲರೂ ಸೇರಿ ಪೂಜೆ ಮಾಡಲಾರಂಭಿಸಿದರು. ಸಂಧ್ಯಾ-ನಾಗರಾಜ ಕೂಡ ಕೈ ಜೋಡಿಸಿದರು. ನಂತರ ಸಂತರಿಂದ ಭಜನೆ ಕಾರ್ಯಕ್ರಮ ಇದ್ದುದರಿಂದ ನಾವು ಸವದತ್ತಿ ಎಲ್ಲಮ್ಮ ಗುಡ್ಡ ನೋಡಿಬರಲು ಹೊರಟೆವು.

ಶನಿವಾರ ಆದ್ದರಿಂದ ಎಲ್ಲಮ್ಮನ ಗುಡ್ಡದಲ್ಲಿ ಜನ ಜಂಗುಳಿ ಇರಲಿಲ್ಲ (ಮಂಗಳವಾರ ಮತ್ತು ಶುಕ್ರವಾರದಂದು ವಿಪರೀತ ಜನ ಇರುತ್ತಾರಂತೆ). ಎಲ್ಲಮ್ಮನ ದರ್ಶನ ಪಡೆದು ಕೆಲ ಛಾಯಾಚಿತ್ರಗಳನ್ನು ತೆಗೆದುಕೊಂಡು ಪರ್ಯಾಯ ಮಾರ್ಗವಾಗಿ ಮನೆ ಕಡೆ ಹೊರಟೆವು. ದಾರಿಯಲ್ಲಿ ಬೆಟ್ಟದ ಮೇಲಿಂದ ಮಲಪ್ರಭಾ ಡ್ಯಾಮ್ ನ ಹಿನ್ನೀರಿನ ದೃಶ್ಯವನ್ನು ನೋಡಿ, ಸ್ವಲ್ಪ ಸಮಯ ಅಲ್ಲಿ ಕಾಲ ಕಳೆದು ಮನೆಗೆ ಬರುವ ಹೊತ್ತಿಗೆ ೧೧:೩೦ ಆಗಿತ್ತು. ನಂತರ ಉಪ್ಪಿಟ್ಟು ತಿಂದು ಬೇಗನೆ ಬಾದಾಮಿಗೆ ಹೊರಡುವ ತರಾತುರಿ. ಆದರೆ ಅಳಿಯ ನಾಗರಾಜ ಮತ್ತು ಮೊಮ್ಮಗಳು ಸಂಧ್ಯಾ ಎಲ್ಲರಿಗೂ (ಬಗ್ಗಿ) ನಮಸ್ಕಾರ ಮಾಡಿ ಹೊರಡುವ ಹೊತ್ತಿಗೆ ೧:೦೦ ಘಂಟೆ. ಸಂಧ್ಯಾಳ ಅಮ್ಮ ಮತ್ತು ತಮ್ಮ ನಮ್ಮ ಜೊತೆ ಜೀಪನ್ನೆರಿದರು (ಕ್ರೂಸರ್). ಅವರು ದಾರಿಯಲ್ಲಿ ಇಳಿದು ಬಾಗಲಕೊಟೆಗೆ ಹೋಗುವರಿದ್ದರು...

ಬಾಗಲಕೋಟೆ ಇಂದ ಬಾದಾಮಿಗೆ ಸುಮಾರಾಗಿ ೯೦ ಕಿ.ಮೀ. ದೂರ. ಅಷ್ಟೇನೂ ಉತ್ತಮವಲ್ಲದ ರಸ್ತೆ ಆದ್ದರಿಂದ ನಾವು ಸುಮಾರು ೩:೦೦ ರ ಹೊತ್ತಿಗೆ ಬಾದಾಮಿ ತಲುಪ ಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಡ್ರೈವ್ ಮಾಡುತ್ತಿದ್ದುದು ಯಾರು??? ಖಾಸಿಮ್. ಹಾಗಾಗಿ ೨.೦೦ ರ ಹೊತ್ತಿಗೆ ನಾವು ಬಾದಾಮಿ ತಲುಪಿದೆವು. ಬಾದಾಮಿಯಲ್ಲಿ ಗುಹಾಂತರ ದೇವಾಲಯ ನೋಡಲು ನಾಗರಾಜ ಟಿಕೆಟ್ ತೆಗೆದುಕೊಂಡು ಬಂದರು... ಇಮ್ಮಡಿ ಪುಲಿಕೇಶಿಯ ಕಾಲದ ಈ ಗುಹಾಂತರ ದೇವಾಲಯಗಳನ್ನು ನೋಡಿ ಆಶ್ಚರ್ಯ ಚಕಿತರಾಗದವರಿಲ್ಲ ... ಒಂದೇ ಒಂದು ಪದದಲ್ಲಿ ಹೇಳುವದಾದರೆ "ಅದ್ಭುತ". ಬಾದಾಮಿ

ಈ ಗುಹಾಂತರ ದೇವಾಲಯವು ಕಲ್ಲಿನ ಒಂದು ಬೆಟ್ಟದಲ್ಲಿ ಕಡೆಯಲ್ಪಟ್ಟಿದೆ.. ಈ ದೇವಾಲಯವಿರುವ ಗುಡ್ಡದ ಪಕ್ಕದಲ್ಲೇ (ಕೆಳಗೆ) ಒಂದು ಕೆರೆ ಇದೆ. ಬಾದಾಮಿ

ಎಲ್ಲರೂ, ಎಲ್ಲಾ ರೀತಿಯ (ಸೋಲೋ, ಗ್ರೂಪ್, ಕಪಲ್ etc) ಫೋಟೊಗಳಿಗೆ ಪೋಸ್ ನೀಡಿದರು .... ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡು ಕೆಳಗೆ ಬರುವ ಹೊತ್ತಿಗೆ ೩:೩೦ .. ನಂತರ ಖಾನಾವಳಿಯಲ್ಲಿ ಸಕ್ಕತ್ ಖಾರದ ಊಟ. ಸಂಧ್ಯಾರವರು ಸಜ್ಜಿ ರೊಟ್ಟಿ ಊಟ ಗಡದ್ ಆಗಿ ಹೊಡೆದರು. ಊಟ ಮುಗಿಸಿ ಹೊರಗೆ ಬಂದಾಗ ಕಣ್ಣಿಗೆ ಬಿದ್ದಿದ್ದು ಎಳನೀರು... ಖಾರ ಕಡಿಮೆ ಮಾಡಲು ಎಳನೀರಿನ ಸೇವನೆ.

ಬಾದಾಮಿ ಇಂದ ೫ ಕಿ ಮೀ ದೂರವಿರುವ ಬನಶಂಕರಿಗೆ ಪ್ರಯಾಣ. ದೇವಸ್ಥಾನದಲ್ಲಿ ಅಮ್ಮನವರ ದರ್ಶನ ಮಾಡಿ ೪.೩೦ ರ ಹೊತ್ತಿಗೆ ೧೦ ಕಿ ಮೀ ದೂರದ ಮಹಾಕೂಟಕ್ಕೆ ಹೊರಟೆವು.. ಮಹಾಕೂಟ ಒಂದು ತಂಪಾದ ಸ್ಥಳ.. ಇಲ್ಲಿ ಬೆಟ್ಟದ ನಡುವೆ ಒಂದು ದೇವಸ್ಥಾನವಿದ್ದು, ದೇವಸ್ಥಾನದ ಪಕ್ಕದಲ್ಲಿ ಒಂದು ಕೊಳ (ಕಲ್ಯಾಣಿ) ಇದೆ. ಕೊಳದ ತಳದಲ್ಲಿ ಒಂದು ರೀತಿಯ ದ್ವಾರವಿದ್ದು ಅಲ್ಲಿಂದ ಒಂದು ಸಣ್ಣ ಲಿಂಗವಿರುವ ದೇವಾಲಯವನ್ನು ಪ್ರವೇಶಿಸಬಹುದು. ರಾಘು ಮತ್ತು ನಾಗರಾಜ ನೀರಿನಲ್ಲಿ ಮುಳುಗಿ ದೇವಸ್ಥಾನ ನೋಡಲು ಮುಂದಾದರು.. ಮಹಾಕೂಟ... ನಾಗರಾಜ ನೀರಿನಲ್ಲಿ ಮುಳುಗಿ ದ್ವಾರದ ಮೂಲಕ ದೇವಸ್ಥಾನ ಪ್ರವೇಶಿಸಿದರು . ರಾಘು ಕೂಡ ಸ್ವಲ್ಪ ಪ್ರಯಾಸಪಟ್ಟು ದೇವಸ್ಥಾನ ನೋಡಲು ಸಾಧ್ಯವಾಯಿತು. ಈ ನೀರಿನ ಕೊಳದ ತಳದಿಂದ ನೀರಿನ ಗುಳ್ಳೆಗಳು ಏಳುತ್ತಿದ್ದವು ಮತ್ತು ನೀರು ಬೆಚ್ಹಗಿತ್ತು. ಮಹಾಕೂಟದಿಂದ ಪಟ್ಟದಕಲ್ಲಿಗೆ ಹೋದೆವು. ಇಲ್ಲಿ ಉದ್ಯಾನದ ನಡುವೆ ಸುಂದರ ಸಣ್ಣ ಪುಟ್ಟ ದೇವಾಲಯಗಳಿವೆ. ಈ ದೇವಾಲಯಗಳು ಸುಮಾರು ೧೨೦೦ ವರ್ಷಗಳಷ್ಟು ಹಳೆಯವು. ದೇವಾಲಯಗಳು ಭಗ್ನಗೊಂಡಿದ್ದರೂ ನೋಡಲು ಸುಂದರವಾಗಿ, ಆಕರ್ಷಣೀಯ ವಾಗಿದೆ. ಪಟ್ಟದಕಲ್ಲಿನಿಂದ ಐಹೊಳೆ ಕಡೆಗೆ ಹೊರಟೆವು . ಆದರೆ ಸಮಯ ಆಗಲೇ ೬:೩೦ ಆದ್ದರಿಂದ ಐಹೊಳೆ ನೋಡಲು ಸಾಧ್ಯವಾಗಲಿಲ್ಲ. ನಮ್ಮ್ದಮುಂದಿನ ಲಕ್ಷ್ಯ ಬಾಗಲಕೋಟೆ. ಐಹೊಳೆ ಇಂದ ಸುಮಾರು ೪೦ ಕಿ ಮೀ ದೂರ... ಈ ದೂರವನ್ನು ಕ್ರಮಿಸಿ ಬಾಗಲಕೋಟೆ ತಲುಪುವ ಹೊತ್ತಿಗೆ ರಾತ್ರಿ ೭:೧೫ ಆಗಿತ್ತು.

ಬಾಗಲಕೋಟೆಯಲ್ಲಿ ಸಂಧ್ಯಾರವರ ದೊಡ್ಡಪ್ಪನ (ಕಾಕಾ & ಕಾಕೂ) ಮನೆಗೆ ಹೋದೆವು .ಆ ಸಮಯಕ್ಕೆ ಸವದತ್ತಿ ಇಂದ ನಮ್ಮ ಜೊತೆ ಹೊರಟಿದ್ದ ಸಂಧ್ಯಾಳ ತಾಯಿ ಮತ್ತು ತಮ್ಮ ಅಲ್ಲಿದ್ದರು. ನಾವು ಅವರ ಮನೆಯಲ್ಲಿ ಚಹಾ ಕುಡಿದು ಹೋಟೆಲ್ ದುರ್ಗಾವಿಹಾರ ದಲ್ಲಿ ಚೆಕ್ ಇನ್ ಮಾಡಿದೆವು. ಈ ಹೋಟೆಲ್ ಏನೋ ಹೇಳ್ತಾರಲ್ಲ , "ಹೊರಗೆಲ್ಲ ಥಳಕು, ಒಳಗೆ ಬರೀ ಹುಳುಕು" ಆ ತರಹ . ಅಲ್ಲಿ ಒಂದು ಗಂಟೆ ಕಾರ್ಡ್ಸ್ (judgement) ಆಡಿದೆವು.. ಆಟ ಸ್ವಲ್ಪ ಹೊಸತು ಆದ್ದರಿಂದ ಎಲ್ಲರಿಗೂ ಅದನ್ನು ಕಲಿಯುವ್ದಕ್ಕೆ ಸ್ವಲ್ಪ ಸಮಯ ಹಿಡಿಯಿತು. ಸುಮಾರು ೯.೦೦ ರ ಹೊತ್ತಿಗೆ ಸಂಧ್ಯಾರವರ ದೊಡ್ಡಪ್ಪನ ಮನೆಗೆ ಹೋದೆವು.ಅಲ್ಲಿ ಊಟದ ಪ್ರೊಗ್ರಾಮ್. ರಾಯಲ್ ಊಟ, ಚಪಾತಿ, ಪಲ್ಯ, ಸಾರು ಮತ್ತು ಗುಲಾಬ್ ಜಾಮೂನ್.
ಎಲ್ಲರೂ ಸಕ್ಕತ್ತಾಗಿ ಬ್ಯಾಟಿಂಗ್ ಮಾಡಿದೆವು. ಸುಮಾರು ೧೦:೦೦ ರ ಹೊತ್ತಿಗೆ ಹೋಟೆಲ್ ಗೆ ಬಂದೆವು. ನಂತರ ಕಾರ್ಡ್ಸ್ ಆಟ ಶುರು... ಸುಮಾರು ೨:೦೦ ಗಂಟೆ ವರೆಗೂ ನಾನ್ ಸ್ಟಾಪ್ ಆಟ. ಪ್ರವೀಣ ಭರ್ಜರಿ ಆಟ ಆಡಿ ಎಲ್ಲರನ್ನೂ ಮೀರಿಸಿಬಿಟ್ಟ. ಶಬ್ಹಾಶ್ ಪ್ರವೀಣ (ಅಲಿಯಾಸ್ ಟಿಂಕು)....... ಈ ದಿನದ schedule, hectic ಆಗಿತ್ತು. ಅರ್ಧ ದಿನದಲ್ಲಿ ಸುಮಾರು ೧೫೦ ಕಿ ಮೀ ನಷ್ಟು ಸುತ್ತಾಟ... ಸಾಕಷ್ಟು ಜಾಗಗಳ ವೀಕ್ಷಣೆ... ಮಲಗಿದ ತಕ್ಷಣ ನಿದ್ರೆ...
ಎಚ್ಚರ ಆದಾಗ ಬೆಳಿಗ್ಗೆ ೭.೩೦.

ದಿನಾಂಕ : ೨-೧೨-೨೦೦೭

ಹಿಂದಿನ ದಿನ ಸಾಕಷ್ಟು ಸುತ್ತಾಟ ಆಗಿದ್ದರಿಂದ, ಆ ದಿನ ಆದಷ್ಟೂ relax ಮಾಡುವ ಪ್ಲಾನ್ ಇತ್ತು.

ನೋಡಬೇಕಾದ ಸ್ಥಳಗಳು ಎರಡೇ:

೧) ಕೂಡಲಸಂಗಮ.

೨)ಆಲಮಟ್ಟಿ.

ಒಟ್ಟು ದೂರ: ಸುಮಾರು ೧೦೦ ಕಿ. ಮೀ.

ಸಂಧ್ಯಾಳ ದೊಡ್ಡಪ್ಪನ ಮನೆಯವರು ಅವರ ಮನೆ ದೇವರನ್ನು ನೋಡಲು ಬೆಳಿಗ್ಗೆ ಬೇಗನೆ ಹೊರಡುವವರಿದ್ದರು. ನಾವುಗಳು ಸ್ನಾನ ಮುಗಿಸಿ ರೆಡಿ ಆಗುವ ಹೊತ್ತಿಗೆ ೮:೩೦. ಆ ಹೊತ್ತಿಗೆ ಸಂಧ್ಯಾ ನಮಗೆ ಮಧ್ಯಾನ್ಹದ ಊಟ ತಂದು ಕೊಟ್ಟು ಹೋದರು. ಬೆಳಿಗ್ಗೆ ಅಷ್ಟು ಹೊತ್ತಿಗೆ ಚಪಾತಿ,ಪಲ್ಯ, ಚಿತ್ರಾನ್ನ, ಮೊಸರನ್ನದ ಊಟ ರೆಡಿ ಮಾಡಿ, ಕಟ್ಟಿ (pack maadi) ಕಳುಹಿಸಿದ್ದರು.

ನಾವು ೮.೩೦ ರ ಹೊತ್ತಿಗೆ ಬಾಗಲಕೋಟೆ ಇಂದ ಕೂಡಲಸಂಗಮ ದತ್ತ ಹೊರಟೆವು. ಬಾಗಲಕೋಟೆಯ ನವನಗರದ ಹೋಟೆಲೊಂದರಲ್ಲಿ ಭರ್ಜರಿ ಬ್ರೇಕ್ ಫಾಸ್ಟ್.. ಕೂಡಲಸಂಗಮ ಸುಮಾರು ೪೫ ಕಿ ಮೀ ದೂರ. ದಾರಿಯಲ್ಲಿ ಸುಂದರ ಸೂರ್ಯಕಾಂತಿ ಹೊಲಗಳು... ಫೋಟೋ ಸೆಶನ್ ಬಗ್ಗೆ ಹೇಳಬೇಕಿಲ್ಲ.... Eye-wink.

ಸುಮಾರು ೧೦.೧೫ ರ ಹೊತ್ತಿಗೆ ಕೂಡಲ ಸಂಗಮ ತಲುಪಿದೆವು.

ಕೂಡಲಸಂಗಮದಲ್ಲಿ...

ಇದು ೩ ನದಿಗಳ ಸಂಗಮ ಸ್ಥಳ (ಕೃಷ್ಣ, ಮಲಪ್ರಭ ಹಾಗೂ ಘಟಪ್ರಭಾ) ಹಾಗೂ ಬಸವಣ್ಣನವರು ಐಕ್ಯವಾದ ಸ್ಥಳ. ಐಕ್ಯ ಸ್ಥಳ (ಲಿಂಗ)ವು ನೀರಿನ ಮಧ್ಯದಲ್ಲಿದೆ. ಅದನ್ನು ನೋಡಲು ಅನುಕೂಲವಾಗುವಂತೆ ಒಂದು ಸುಂದರ ಸೇತುವೆ ನಿರ್ಮಿಸಿದ್ದಾರೆ. ಸೇತುವೆ ದಾಟಿ , ಮೆಟ್ಟಿಲುಗಳ ಮೂಲಕ ಕೆಳಗಿಳಿದು ಲಿಂಗ ನೋಡಲು ಹೋಗಬೇಕು. ಅದೇ ಸ್ಥಳದಲ್ಲಿ ಮೇಲೆ ನಿಂತು ನೋಡಿದರೆ ಅಪಾರ ಜಲರಾಶಿ... ಪ್ರವೀಣನಿಗೆ ಶಿವನಸಮುದ್ರ. ಅವನು ಯಾಕೆ ಆ ರೀತಿ ಹೇಳ್ದ ಅಂತ ಇನ್ನೂ ಅರ್ಥ ಆಗಿಲ್ಲ... Laughing out loud

ಲಿಂಗದ ದರ್ಶನ ಪಡೆದು , auditorium ಗೆ ಹೋದೆವು. ವಿಶಾಲವಾದ ಇದರಲ್ಲಿ ಸುಮಾರು ೩೫೦೦ ಜನ ಕೂಡ ಬಹುದಾಗಿದೆ. ನಂತರ ೨೫ ಕಿ ಮೀ ದೂರದ ಆಲಮಟ್ಟಿಗೆ ಪ್ರಯಾಣ. ಶರತ್ ೨೨ ವರ್ಷಗಳ ಹಿಂದೆ ಇದ್ದ ಮನ, ಕಲಿತ ಶಾಲೆ ನೋಡಿ ಅವನಿಗೆ "ಏನೋ ಒಂಥರಾ ....... ",ಅಲ್ಲಿ ಅವನ ಕಪ್ಪು ಬಿಳುಪು ಫೋಟೋ ಶೂಟ್.

ಆಲಮಟ್ಟಿಯಲ್ಲಿ ಶರತ್...

ಸಮಯ ಸುಮಾರು ೧.೦೦. ನಂತರ ಆಲಮಟ್ಟಿ ಡ್ಯಾಮ್ ಹಾಗೂ ಪಾರ್ಕ್ ನೋಡುವ ಸಮಯ.. ಸ್ವಲ್ಪ ಹೊತ್ತು ಪಾರ್ಕಿನಲ್ಲಿ ಸುತ್ತಾಟ... ಆಲಮಟ್ಟಿ

ಮಧ್ಯಾಹ್ನ ೨:೦೦ ರ ಹೊತ್ತಿಗೆ ಊಟಕ್ಕೆ ಕೂತೆವು.. ಹೊಟ್ಟೆ ಬಿರಿಯುವಷ್ಟು ತಿಂದರೂ ಡಬ್ಬಿಗಳು ಖಾಲಿ ಆಗಲಿಲ್ಲ.. ಹಾಗೂ ಹೀಗೂ ಊಟ ಮುಗಿಸಿ ಮತ್ತಷ್ಟು ಸುತ್ತಾಡಿ, ಪುನಃ ಬಾಗಲಕೋಟೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಧ್ಯಾ ಅವರ ಕಾಕಾ, ತಮ್ಮ, ಅಪ್ಪ, ಅಮ್ಮ, ಹಾಗು ಉಳಿದವರು ಆಲಮಟ್ಟಿ ಡ್ಯಾಮ್ ನೋಡಲು ಬಂದರು (ಮನೆ ದೇವರ ದರ್ಶನ ಮುಗಿಸಿ).

ಆಲಮಟ್ಟಿ...

ಅವರನ್ನು ಸ್ವಲ್ಪ ಮಾತಾಡಿಸಿ ಬಾಗಲಕೋಟೆಗೆ ಹೊರಟು ಸುಮಾರು ೪.೩೦ ರ ಹೊತ್ತಿಗೆ ದುರ್ಗಾ ವಿಹಾರಕ್ಕೆ ಬಂದೆವು. ಸಂಜೆ ಹಾಗೇ ಬಾಗಲಕೋಟೆ ಸುತ್ತಾಡಿ, ಚಹಾ/ಕಾಫಿ ಕುಡಿದು ೭.೦೦ ರ ಹೊತ್ತಿಗೆ ಕಾರ್ಡ್ಸ್ ಆಡಲು ಕುಳಿತೆವು.... ಯಥಾ ಪ್ರಕಾರ ಪ್ರವೀಣನ ವಿಜಯೋತ್ಸವ ಮುಂದುವರೆದಿತ್ತು. ಒಂದು ಕಾರ್ಡ್ ಬಿಟ್ಟ, ರಾಘು ಅನಲೈಜ್ ಮಾಡ್.... ಆಗಲೇ ಗೊತ್ತಾಗಿದ್ದು ಸತ್ಯ... Smiling ಮುಂದಿನ ಆಟಗಳಲ್ಲಿ ಪ್ರವೀಣ ಕಾರ್ಡ್ ಡ್ರಾಪ್ ಮಾಡಿದಾಗಲೆಲ್ಲ ಎಲ್ಲಾರೂ ಅವನನ್ನ ಗುರಾಯಿಸಿ ಪ್ರಶ್ನೆ ಕೇಳುವುದು ಮಾಮೂಲಿ ಅಯಿತು.. ಜೊತೆಗೆ ಹೊಟ್ಟೆ ಬಿರಿಯುವಷ್ಟು ನಗು...

ಸುಮಾರು ೨೧:೦೦ ರ ಹೊತ್ತಿಗೆ ಮತ್ತೆ ಊಟದ ಕಾರ್ಯಕ್ರಮ... ಭರ್ಜರಿ ಊಟ ಮಾಡಿ ಹೋಟೆಲಿಗೆ ವಾಪಸ್ ಬಂದು ಕಾರ್ಡ್ಸ್ ಆಡಲು ಶುರು ಮಾಡಿದೆವು. ರಾತ್ರಿ ೨:೦೦ ರ ವರಗೆ ನಿಲ್ಲದ ಆಟ.. ಜೊತೆಗೆ ಪ್ರವೀಣನ ಕಾರ್ಡ್ಸ್ ಕಾಮಿಡಿ Smiling
ಈ ನಡುವೆ ಹಿಂದಿನ ದಿನ ರಾತ್ರಿ ನಾಗರಾಜ, ಸಂಧ್ಯಾಳ ದೊಡ್ಡಪ್ಪನ ಮನೇಲಿ ಇರೋದ್ ಬಿಟ್ಟು , ನಮ್ಮ ಜೊತೆ ಹೋಟೆಲ್ನಲ್ಲೇ ಮಲಗಿದ್ದರು.... ಆದ್ದರಿಂದ ಸಂಧ್ಯಾಗೆ ಸಿಟ್ಟು ಬಂದಿತ್ತು.... ಅದನ್ನ ಕಡಿಮೆ ಮಾಡೋಕೆ ನಾಗರಾಜ ಆ ದಿನ ರಾತ್ರಿ ಅವರ ದೊಡ್ಡಪ್ಪನ ಮನೆಯಲ್ಲಿ ಮಲಗುವಂತೆ ಅಯಿತು.... ಗಂಡ ಹೆಂಡಿರ ಜಗಳ ಉಂಡು ಮಲಗೊತನಕ ಅಲ್ವೇ?

ಈ ವೇಳೆಗೆ ಬೆಂಗಳೂರಿನಿಂದ ವಿನೋದ ಮತ್ತು ಅವನ ಮನೆಯವರು ಗೊಕಾಕ್ ಗೆ ಬರಲು ೯:೧೫ ರ ರಾಣಿ ಚೆನ್ನಮ್ಮ ರೈಲನ್ನು ಹಿಡಿದಿದ್ದರು... ಲಾಸ್ಟ್ ಮಿನಿಟ್ ಅಡ್ಜಸ್ಟ್ ಮೆಂಟ್ ಮಾಡಿದ ಮದುವೆ ಗಂಡು ವಿನೋದ ವೈಟಿಂಗ್ ಲಿಸ್ಟ್ ನಲ್ಲಿ Sad ... ಅವನಿಗೆ ಬರ್ತ್ ಖಾಯಂ ಆಗಿ ಅವನು ಮಲಗುವ ಹೊತ್ತಿಗೆ ರಾತ್ರಿ ೧೨:೦೦, ಪಾಪ ಮದುವೆಯಾಗುವ ಮೊದಲೂ ನೆಮ್ಮದಿಯ ನಿದ್ದೆ ಇಲ್ಲ. Eye-wink... ಮಾರನೆಯ ದಿನ ಬೆಳಿಗ್ಗೆ ಸುಮಾರು ೧೧:೦೦ ರ ಹೊತ್ತಿಗೆ ಗೋಕಾಕ ತಲುಪಿದ...

ದಿನಾಂಕ : ೩-೧೨-೨೦೦೭ (ಮದುವೆಯ ಹಿಂದಿನ ದಿನ)

ಈ ದಿನ ನಾವು ಬಾಗಲಕೋಟೆಯಿಂದ ಗೋಕಾಕಿಗೆ ಹೊರಟು ಮದುವೆ ಮನೆ ಸೇರುವ ಕಾರ್ಯಕ್ರಮ....ಅದರಂತೆ ನಾವು ಬೆಳಿಗ್ಗೆ ೮.೩೦ ರ ಹೊತ್ತಿಗೆ ರೆಡಿ ಆಗಿ ಸಂಧ್ಯಾರವರ ದೊಡ್ಡಪ್ಪನ ಮನೆಗೆ ಹೋಗಿ ಅಲ್ಲಿ ತಿಂಡಿ ತಿಂದು, ಹೋಟೆಲಿಗೆ ಬಂದು ಚೆಕ್ ಔಟ್ ಮಾಡಿದೆವು... ಸುಮಾರು ೯:೩೦ ರ ಹೊತ್ತಿಗೆ ಗೋಕಾಕಿಗೆ ಹೋಗಲು, ಬಸ್ ಹಿಡಿಯುವ ಸಲುವಾಗಿ ಬಾಗಲಕೋಟೆ ರೈಲು ನಿಲ್ದಾಣದ ಬಳಿ ಬಂದೆವು.. ಅಲ್ಲಿಂದ ಯರಗಟ್ಟಿಗೆ ಹೋಗುವ ಬೆಳಗಾವಿ ಬಸ್ಸನ್ನು ಹತ್ತಿ ಸುಮಾರು ೧೧:೦೦ ರ ಹೊತ್ತಿಗೆ ಯರಗಟ್ಟಿ ತಲುಪಿದೆವು... ಬಸ್ ಸೂಪರ್ ಫಾಸ್ಟ್... ರೋಡ್ hump ಬಂದರೂ ಸ್ಪೀಡ್ ನಲ್ಲಿ ಯಾವುದೇ ರೀತಿಯ ಇಳಿಕೆ ಇಲ್ಲ.... ಯರಗಟ್ಟಿ ಇಂದ ಗೋಕಾಕ (ಬೆಂಗಳೂರು ಟು ಗೋಕಾಕ) ಬಸ್ ಹಿಡಿದು ಸುಮಾರು ೧೨:೦೦ ರ ಹೊತ್ತಿಗೆ ಗೋಕಾಕ ಬಸ್ ನಿಲ್ದಾಣದಲ್ಲಿ ಇಳಿದಾಗ, ನಮ್ಮನ್ನು ಸ್ವಾಗತಿಸಲು ವಿನೋದ (ಮದುವೆ ಗಂಡು) ಅಲ್ಲಿ ಹಾಜರ್...

ಹೋಟೆಲ್ ಅನಮೊಲ ದಲ್ಲಿ ನಮಗಾಗಿ ೨ ಕೋಣೆಗಳನ್ನು ರಿಸರ್ವ್ ಮಾಡಿದ್ದ ವಿನೋದ... ಅಲ್ಲಿ ಹೋಗಿ ಚೆಕ್ ಇನ್, ಉತ್ತಮವಾದ ರೂಮ್ ಗಳು, ಬಾಗಲಕೋಟೆಗೆ ಹೋಲಿಸಿದರೆ ಇದು ಪಂಚ ತಾರಾ ಹೋಟೆಲ್... ನಂತರ ಅನಮೊಲ ರೆಷ್ಟೊರಂಟ ದಲ್ಲಿ ಊಟ... ಊಟ ಮುಗಿಸಿ ಸೆಟಲ್ ಆಗುವ ಹೊತ್ತಿಗೆ ೩:೦೦ ರ ಸಮಯ .. ಆನಂತರ ಗೋಕಾಕ ಜಲಪಾತ ನೋಡಲು ಹೊರಟೆವು... ಗೋಕಾಕ ಜಲಪಾತಮಳೆಗಾಲದಲ್ಲಾಗಿದ್ದರೆ ಜಲಪಾತ ಬಹಳ ಸುಂದರವಂತೆ... ನೀರಿಲ್ಲದ ಕಾರಣ ಜಲಪಾತ ಅಷ್ಟೇನೂ ಸೊಗಸು ಅನಿಸಲಿಲ್ಲ. ಹೀಗಾಗಿಯೂ ನದಿ ದಾಟಲು ನಿರ್ಮಿಸಿರುವ ತೂಗು ಸೇತುವೆ ಹಾಗೂ ಅಗಲವಾದ, ಕಲ್ಲು ಬಂಡೆಗಳಿಂದ ಕೂಡಿರುವ ನದೀ ಮಾತ್ರ ಸುಂದರವಾಗಿದೆ.... ನಾವು ತೂಗು ಸೇತುವೆ ದಾಟಿ, ಜಲಪಾತದ ಹತ್ತಿರ ಹೋಗಿ, ಬಹಳಷ್ಟು ಫೋಟೋ ತೆಗೆದು ಕೊಂಡೆವು..

ಸುಮಾರು ೪:೩೦ ರ ಹೊತ್ತಿಗೆ ಹೋಟೆಲಿಗೆ ಹೊರಟೆವು.. ಸಾಕಷ್ಟು ಸಮಯ ಇದ್ದುದರಿಂದ ಸಂಜೆ ಯಾವುದಾದರೊಂದು ಸಿನಿಮಾ ನೋಡುವ ಪ್ಲಾನ್ ಮಾಡಿದೆವು... ಆದರೆ ಹಾಗಾಗದೇ, ಸುಮಾರು ೭:೩೦ ರ ಹೊತ್ತಿಗೆ ಮದುವೆ ಮಂಟಪಕ್ಕೆ (ಸಮುದಾಯ ಭವನ) ಹೋದೆವು.. ಅಲ್ಲಿ ಮದುವೆ ಗಂಡನ್ನು ಎದುರುಗೊಳ್ಳುವ (ಹೆಣ್ಣಿನವರು ವಿನೋದನನ್ನು ಬರಮಾಡಿಕೊಳ್ಳುವ) ಕಾರ್ಯಕ್ರಮ... ಅದರ ನಂತರ ಗಂಡು, ಹೆಣ್ಣಿಗೆ ಅರಿಶಿನ ಹಚ್ಚುವ ಕಾರ್ಯಕ್ರಮ... ಎಲ್ಲರೂ ಮದುವೆ ಗಂಡಿಗೆ ಅರಿಶಿನ ಹಚ್ಚಿದ್ದೋ ಹಚ್ಚಿದ್ದು..... ಬ್ಲೀಚ್ ಮಾಡಿಸಿಕೊಂಡ ಅವನ ಮುಖ ಹಳದಿಯಾಗಿತ್ತು... ನಂತರ ಆಂಟಿಯೊಬ್ಬರು ಎಲ್ಲರನ್ನೂ ಓಡಾಡಿಸಿಕೊಂಡು ಅರಿಶಿನ ಹಚ್ಚುತ್ತಿದ್ದನ್ನು ಕಂಡು ಶರತ್ ಮತ್ತು ನಾನು ಅಲ್ಲಿಂದ Escape...
ಶರತ್ ಮತ್ತು ನನ್ನನ್ನು ಬಿಟ್ಟು ಗುಂಪು ೧ ರ ಎಲ್ಲರಿಗೂ ಅರಿಶಿನದ ಲೇಪನ.. ಸ್ವಲ್ಪ ಹೊತ್ತಿನ ನಂತರ ಗಂಡು ಹೆಣ್ಣಿಗೆ ಸ್ನಾನದ ಪ್ರೊಗ್ರಾಮ್... ಹೊರಗಡೆ ಮಣೆ ಹಾಕಿ ತಲೆ ಮೇಲೆ ನೀರು ಸುರಿಯುವುದು... ನಾವು ಒಂದು ಪ್ಯಾಕ್ ಐಸ್ ಅನ್ನು ವಿನೋದನ ಶರ್ಟ್ ಒಳಗೆ ಸುರಿದಾಗ.... ಅವನಿಗೆ "ಚಳಿ ಚಳಿ ತಾಳೆನು ಈ ಚಳಿಯ" ಹಾಡು ಜ್ಞಾಪಕ ಬಂತು ಅಂತ ಆಮೇಲೆ ಹೇಳ್ದ.

ಎಲ್ಲ ಕಾರ್ಯಕ್ರಮ ಮುಗಿದು ಊಟ ಮಾಡುವ ಹೊತ್ತಿಗೆ ೧೦:೦೦ ರ ಸಮಯ.. ನಂತರ ಹೋಟೆಲಿಗೆ ಹೋಗಿ ಮಲಗುವ ಕಾರ್ಯಕ್ರಮ... ಆದರೆ ಶಾಸ್ತ್ರದ ಪ್ರಕಾರ ವಿನೋದ ಮದುವೆ ಮಂಟಪದಲ್ಲೇ ಮಲಗಬೇಕು ಎಂದಾಗ ಅವನ ಮುಖ ಬಾಡಿ ಹೋಗಿತ್ತು.. ನಾಗರಾಜ, ಸಂಧ್ಯಾ ಹಾಗೂ ಪ್ರವೀಣ ಟಾಟಾ indica ಹತ್ತಿ ಹೋಟೆಲ್ ಸೇರಿದರು.. ಶರತ್, ರಾಘು ಹಾಗೂ ನಾನು ಹೋಟೆಲಿಗೆ ಹೋಗಲು ಕಾರ್ ಗಾಗಿ ಕಾಯಿತ್ತಿದ್ದೆವು... ಆಗ ಪ್ರವೀಣನಿಗೆ ಬಿಸ್ಕೆಟ್ ಹಾಕುವ ಸಲುವಾಗಿ ಅವನಿಗೆ ಫೋನ್ ಮಾಡಿ "ನಾವು ಹೋಟೆಲಿಗೆ ಬರಲು ಆಗ್ತ ಇಲ್ಲ , ವಿನೋದನಿಗೆ ಕಂಪನಿ ಕೊಡಲು ಇಲ್ಲೇ ಮಲಗುತ್ತೇವೆ... ನೀನು ನಾಗರಾಜರ ರೂಮ್ ಅಲ್ಲಿ ಅಡ್ಜಸ್ಟ್ ಮಾಡ್ಕೋ" ಅಂತ ಅಂದಾಗ ಪ್ರವೀಣ ಫುಲ್ ರೈಸ್ ಆದ. ಆ ಕಡೆ ಇಂದ ಫೋನ್ ಮಾಡಿದ ಅವನ fiancee ಗೆ ಬೈದೆ ಬಿಟ್ಟ. ಯಾಕೆ ರೈಸ್ ಆದ ಅಂತ ಅರ್ಥ ಆಗ್ಲಿಲ್ಲ. ಪ್ರವೀಣ್ ರೈಸ್ ಆಗಿ ನಾಗರಾಜರ ರೂಮ್ ಗೆ ಹೋಗಿ ಅಲ್ಲಿ ಬಾಗಿಲು ತಟ್ಟಿದಾಗ, ಸಂಧ್ಯಾ ಅವರು ನಾಗರಾಜರಿಗೆ ತಗುಲಿಕೊಂಡರು. ಹಾಕಿದ ಬಿಸ್ಕಿಟ್ ಸೂಪರ್ ಆಗಿ ಕೆಲ್ಸ ಮಾಡಿತ್ತು.

ನಂತರ ನಾವು ಕಾರ್ ಹತ್ತಿ , ಹೋಟೆಲಿಗೆ ಹೋದಾಗ ೨೩:೩೦. ಪ್ರವೀಣನನ್ನು ಕೂಲ್ ಮಾಡಿ... ಶರತ್, ರಾಘು, ನಾನು, ಪ್ರವೀಣ ಕಾರ್ಡ್ಸ್ ಆಡಲು ಕುಳಿತೆವು.. ಬೆಂಡ್ ಎತ್ತಿಸಿಕೊಂಡ ನಾಗರಾಜ same day ಮಲಗುವಂತೆ ಅಯಿತು. ನಮ್ಮ ಕಾರ್ಡ್ಸ್ ಆಟ ಮುಂದುವರೆದಿತ್ತು... ಅಷ್ಟಾಗಿ ಮೂಡ್ನಲ್ಲಿ ಇಲ್ಲದ ಪ್ರವೀಣ ಮಲಗುವ ಯೋಚನೆ ಮಾಡಿದ. ನಡೆದದ್ದನ್ನೆಲ್ಲ ನೆನೆಸಿಕೊಂಡು ಶರತ್, ರಾಘು ಮತ್ತೆ ನಾನು ಹೊಟ್ಟೆ ನೋಯುವಷ್ಟು ನಕ್ಕಿದ್ದೆ ನಕ್ಕಿದ್ದು.. Laughing out loud

ಸಾಕಷ್ಟು ಬಿಸ್ಕಿಟ್ ತಿಂದು ರೈಸ್ ಆಗೊಗಿದ್ದ ಪ್ರವೀಣ ಸ್ವಲ್ಪ ಸಮಯದಲ್ಲೇ ನಿದ್ದೆಗೆ ಜಾರಿದ... ನಾವು ಆಟ ಮುಂದುವರೆಸಿ, ನಕ್ಕೂ ನಕ್ಕೂ ಮಲಗುವ ಹೊತ್ತಿಗೆ ಸಮಯ ೧:೩೦. ಮದುವೆ ಮಂಟಪ ದಲ್ಲಿ ಮಲಗಿದ್ದ ವಿನೋದನಿಗೆ ಸ್ವಾತಂತ್ರ್ಯದ ಕೊನೆಯ ರಾತ್ರಿ ಅಷ್ಟೇನೂ ಆರಾಮದಾಯಕವಾಗಿರಲಿಲ್ಲ...

ಈ ಹೊತ್ತಿಗೆ ಬೆಂಗಳೂರಿನಿಂದ ಗುಂಪು-೨ ಗೋಕಾಕಿಗೆ ಹೊರಟಿತ್ತು... ಅದೇ ರೈಲು... ೨೧:೧೫ ರ ರಾಣಿ ಚೆನ್ನಮ್ಮ..... ನವದಂಪತಿ ಶಂಕರ ಅಂಡ್ ಮಾನಸ, ೨ ಎ ಸಿ ನಲ್ಲಿ ಪ್ರತ್ಯೇಕ ಆಸನ ಕಾದಿರಿಸಿದ್ದರು..... privacy ಬೇಕು ನೋಡಿ.... ಉಳಿದವರೆಲ್ಲ ೩ ಎ ಸಿ ಅಲ್ಲಿ ಪ್ರಯಾಣ...

ದಿನಾಂಕ ೪-೧೨-೨೦೦೭ (ಮದುವೆಯ ದಿನ)

ವಿನೋದ ಕಷ್ಟ ಪಟ್ಟು ರಾತ್ರಿ ಕಳೆದಿದ್ದ... ಬೆಳಿಗ್ಗೆ ಎದ್ದು ತರಾತುರಿಯಲ್ಲಿ ಮದುವೆಗೆ ಸಿದ್ಧನಾಗಿದ್ದ...
ನಾವು ಬೆಳಿಗ್ಗೆ ಎದ್ದು, ರೆಡಿ ಆಗುವ ಹೊತ್ತಿಗೆ ಸಮಯ ೯:೦೦... ಮಹೂರ್ತ ಸುಮಾರು ೯:೩೦ ರ ಸುಮಾರಿಗೆ... ಗುಂಪು-೨ ಸುಮಾರು ೧೧:೦೦ ರ ಹೊತ್ತಿಗೆ ಗೋಕಾಕ ತಲುಪುವ ನಿರೀಕ್ಷೆಯಿತ್ತು.... ನಾವುಗಳು ೯:೧೫ ರ ಸುಮಾರಿಗೆ ಮದುವೆ ಮಂಟಪಕ್ಕೆ ಹೋದವು... ವಿನೋದನ ಸ್ವಾತಂತ್ರ್ಯ ಅಪಹರಣಕ್ಕೆ ವೇದಿಕೆ ಸಿದ್ಧ ವಾಗಿತ್ತು.. ನಾವು ಮದುವೆ ಮಂಟಪ ತಲುಪುತ್ತಲೇ ಮಾಂಗಲ್ಯ ಧಾರಣೆ ನಡೆಯಿತು. ಮೂರು ಗಂಟು ಹಾಕಿದ ವಿನೋದನು ಸ್ವಾತಂತ್ರ್ಯ ಕಳೆದು ಕೊಂಡಿದ್ದ.. Smiling

ದಿನಾಂಕ ೪-೧೨-೨೦೦೭ ಸಮಯ ೯:೩೦..... ಆದರೂ ಮುಖದಲ್ಲಿ ಒಂದು ರೀತಿಯ ಖಳೆ... ಹಿಂದಿನ ದಿನ ಹಚ್ಚಿದ ಅರಿಶಿನದ ಹೊಳಪು ಕಡಿಮೆ ಮಾಡಲು ಮುಖ ತಿಕ್ಕಿ ತಿಕ್ಕಿ ತೊಳೆದ ಪರಿಣಾಮವೋ ಏನೋ? ಬಹಳ ದಿನಗಳ ನಿರೀಕ್ಷೆಯಲ್ಲಿದ್ದ ವಿನೋದನ ಮದುವೆ ಆಗೇ ಹೊಗಿತ್ತು!!!

ಈ ಮಧ್ಯೆ, ೨ ಎ ಸಿ ಯಲ್ಲಿ ಪ್ರಯಾಣ ಮಾಡುತ್ತಿದ್ದ ಶಂಕರ, ಗೋಕಾಕಿಗೆ ಬಂದ ಮೇಲೆ ರೂಮ್ ಹಂಚಿಕೊಳ್ಳುವ ವಿಷಯಕ್ಕೆ ತುಂಬ ತಲೆ ಕೆಡಿಸಿ ಕೊಂಡಿದ್ದ... ಮದುವೆಗೆ ಮುಂಚೆ ಡೈನಾಮಿಕ್ ಅಂಡ್ ರನ್ ಟೈಮ್ ಡಿಶಿಷನ್ ಮೇಕರ್ ಆಗಿದ್ದ ಹುಡುಗ ಹೇಗಾಗೋದ. ಗುಂಪು-೨ ಗೋಕಾಕ ತಲುಪಿ, ಹೋಟೆಲಿಗೆ ಹೋಗಿ ರೆಡಿ ಆಗಿ ಮದುವೆ ಮಂಟಪ್ಪಕ್ಕೆ ಬರುವ ಹೊತ್ತಿಗೆ ೧೨:೦೦ ಹೊಡೆದಿತ್ತು...

ಹರಸಲು ಹೋಗಿದ್ದೆವು ನಾವೆಲ್ಲರೂ

ಎಲ್ಲರೂ ಸೇರಿ ನವವಧುವರರಿಗೆ ಶುಭಾಶಯ ಹೇಳಿದೆವು. ನಂತರ ಊಟದ ಕಾರ್ಯಕ್ರಮ... ಮತ್ತೆ ಖಾರವಾದ ಊಟ Smiling ಮುಗಿಸುವ ಹೊತ್ತಿಗೆ ಸಮಯ ಸುಮಾರು ೨.೩೦... ವಧು-ವರರಿಗೆ ಮತ್ತೊಮ್ಮೆ ಶುಭಾಶಯ ಕೋರಿ ನಡೆದುಕೊಂಡೇ ಹೋಟೆಲಿಗೆ ಹೊರೆಟೆವು... ದಾರಿಯಲ್ಲಿ ಎಲ್ಲರೂ ಪಾಚಕ್ (ಜಲ ಜೀರ) ಹಾಗೂ ಲಿಂಬೂ ಸೋಡಾ ಕುಡಿದು.. ಹೋಟೆಲ್ ಮುಟ್ಟಿದೆವು.. ಸಂಜೆ ೫.೪೫ ರ ಬೆಂಗಳೂರು ರೈಲು ಹಿಡಿಯಲು ೫.೦೦ ಕ್ಕೆ ಹೋಟೆಲ್ ಚೆಕ್ ಔಟ್ ಮಾಡುವ ಪ್ಲಾನ್... ಹಾಗಾಗಿ ಸ್ವಲ್ಪ ಹೊತ್ತು ಕಾರ್ಡ್ಸ್ ಆಟ...೪.೪೫ ರ ಹೊತ್ತಿಗೆ ಎಲ್ಲರೂ ರೈಲು ನಿಲ್ದಾಣಕ್ಕೆ ಹೊರಡಲು ರೆಡಿ ಆದರು...

ಹೊರಡುವ ಮುನ್ನ ಕರದಂಟು ಹಾಗೂ ಕುಂದ ಖರೀದಿಸಿದೆವು...

ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲೇ ಗೋಕಾಕ ಜಲಪಾತ ಸಿಗುತ್ತದೆ, ಒಂದು ೫ ನಿಮಿಷ ಸಮಯ ಇದ್ದರಿಂದ ಗುಂಪು-೨ ರ ಮಂದಿ, ಜಲಪಾತದ ಒಂದು ದೃಶ್ಯ ನೋಡಲು ಬಯಸಿದರು... ೫ ನಿಮಿಷದ ನಂತರ ಎಲ್ಲರೂ ಹಿಂತಿರುಗಿ ಬಂದರು...ಜೀಪ್ (ಟವೇರ) ರೈಲು ನಿಲ್ದಾಣದತ್ತ ಹೊರಟಿತು... ಜಲಪಾತದಿಂದ ಹಿಂದಿರುಗಿದ ಶಂಕರ ಯಾಕೋ ಕೊಪಿಸಿಕೊಂಡಿದ್ದ... (ಸೇತುವೆ ದಾಟಲು ಆತನ ಹೆಂಡತಿ ಮಾನಸ ಹೆದರಿದ್ದರಿಂದ ಇರಬೇಕು.. ೫:೩೫ ರ ಹೊತ್ತಿಗೆ ರೈಲು ನಿಲ್ದಾಣ ತಲುಪಿ... ೫:೪೫ ರೈಲು ಹಿಡಿದೆವು... ಗುಂಪು-೧ ೩ ನೆ ಸ್ಲೀಪೆರ್ ಬೋಗಿಯಲ್ಲಿ, ಕಬೀರ ದಂಪತಿಗಳು ೨ ನೆ ಎ ಸಿ, ಮತ್ತು ಉಳಿದವರು ೩ ನೆ ಎ ಸಿ ಯಲ್ಲಿ... ಮತ್ತೆ ಕಾರ್ಡ್ಸ್ ಆಟ, ಹಾಗೆಯೇ ಟೈಮ್ ಪಾಸ್.... ಬೆಳಗಾವಿ ತಲುಪಿದ ನಂತರ...ಶಂಕರ ದಂಪತಿಗಳನ್ನು ಆಗಾಗ ಮಾತಾಡಿಸಲು ಎಲ್ಲರೂ ಸರದಿಯಲ್ಲಿ ಹೋಗಿ ಬಂದರು(Privacy ಹಾಳು ಮಾಡಲು) Eye-wink ಏನೋ ಸ್ವಲ್ಪ ತಿಂದು ರಾತ್ರಿ ೧೦:೦೦ ರ ಹೊತ್ತಿಗೆ ಮಲಗಿದೆವು... ಬಹಳ ಚಳಿಯಿತ್ತು...

ಹಾಗೂ ಹೀಗೂ ರೈಲು ಬೆಂಗಳೂರನ್ನು ತಲುಪಿದಾಗ ಸಮಯ ಬೆಳಿಗ್ಗೆ ೭.೪೫...

ಬಹು ದಿನದ ನಿರೀಕ್ಷೆಯ ವಿನೋದನ ಮದುವೆ, ಮಜಾ ಹಾಗೂ ಧೀರ್ಘ ಪ್ರವಾಸದೊಂದಿಗೆ ಶುಭಂ ಅಯಿತು...