My Blog List

Thursday, May 28, 2009

ಬೋಳು ಮರ ಮತ್ತು ನಾನು.

ಮೇ ೨ ರಂದು ಸಿದ್ಧರಬೆಟ್ಟಕ್ಕೆ ಹೋಗಿದ್ದಾಗ ನನ್ನ ಕ್ಯಾಮೆರಾದಲ್ಲಿ ಸ್ನೇಹಿತ ಸೆರೆಹಿಡಿದ ಚಿತ್ರ ಇದು. 
ಚಿತ್ರದಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ಹೊಳೆಯುವ ಕಥೆ/ಕವನ/ಚುಟುಕ ಏನಾದರೂ ಬರೆಯಿರಿ. 

Monday, May 25, 2009

ಸಿದ್ಧರ ಬೆಟ್ಟದಲ್ಲಿ ಒಂದು ದಿನ.

ಮೇ ೨ ೨೦೦೯ ರಂದು ಸಿದ್ಧರಬೆಟ್ಟಕ್ಕೆ ಹೋಗಿದ್ದೆವು.

ಅಲ್ಲಿ ಸೆರೆಹಿಡಿದ ಹಲವು ಚಿತ್ರಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇನೆ.

ಸಿದ್ಧರ ಬೆಟ್ಟದಿಂದ ಕಾಣುವ ದೃಶ್ಯ ೧

ಸಿದ್ಧರ ಬೆಟ್ಟದಿಂದ ಕಾಣುವ ದೃಶ್ಯ ೨

ಹಸಿರು ತೋರಣ


Saturday, May 16, 2009

ಜಿಗಣೆ

ಜಿಗಣೆ...

ಸಾಮಾನ್ಯವಾಗಿ ಜಿಗಣೆಗಳು ರಕ್ತ ಹೀರಿ ಬದುಕುವ ಕೀಟಗಳು.

ಈ ಜಿಗಣೆಗಳು ಸಾಮಾನ್ಯವಾಗಿ ಪಾಚಿ ಇರುವ ಕಡೆ ಹೆಚ್ಚಾಗಿ ಕಾಣಿಸುತ್ತದೆ. ಜಲಪಾತದ ಹತ್ತಿರದ ಬಂಡೆಗಳ ಮೇಲೆ ಹೆಚ್ಚಾಗಿ ಇವು ಇರುತ್ತವೆ.

ಇವು ಮನುಷ್ಯರ ರಕ್ತ ಮತ್ತು ಪ್ರಾಣಿಗಳ ಹೀರಿ ಬದುಕುತ್ತವೆ.

ಇದು ಸಾಮಾನ್ಯವಾಗಿ ಕಾಲಿಗೆ ಅಂಟಿಕೊಳ್ಳುತ್ತವೆ. ಇವು ಕಡಿಯುವುದು ತಿಳಿಯುವುದೇ ಇಲ್ಲ. ಕಡಿದ ನಂತರವೇ ರಕ್ತ ಹೀರಲು ಶುರು ಮಾಡುತ್ತವೆ. ರಕ್ತ ಹೀರುವಾಗ ಇದರ ಮೈ ದೊಡ್ಡದಾಗುತ್ತದೆ. ಹಾಗೇ ಇವು ತಮ್ಮ ದೇಹದ ತೂಕವನ್ನು ತಡೆಯಲಾರದೇ ಕೆಳಗೆ ಬೀಳುತ್ತವೆ.

ಇವು ಕಡಿದ ಭಾಗದಲ್ಲಿ ತುರಿಕೆಯುಂಟಾಗುತ್ತದೆ. ಸ್ವಲ್ಪ ಸಮಯದ ಬಳಿಕ ಸರಿಹೋಗುತ್ತದೆ.

ಈ ಜಿಗಣೆಗಳನ್ನು ಸಕ್ಕರೆ ಖಾಯಿಲೆಯಿಂದ ಉಂಟಾದ ಗ್ಯಾಂಗ್ರೀನ್‌ಅನ್ನು ತಡೆಯಲು ಬಳಸಿರುವುದನ್ನು ಎಲ್ಲೋ ನೋಡಿದ ನೆನಪು.

ಜಿಗಣೆಗಳ ಬಗ್ಗೆ ಇನ್ನಷ್ಟು ಮಾಹಿತಿಯಿದ್ದರೆ ಹಂಚಿಕೊಳ್ಳಿರಿ.

Monday, May 04, 2009

ಸೂರ್ಯಮೂರ್ತೇ ನಮೋಸ್ತುತೇ!

ಸೂರ್ಯಮೂರ್ತೇ ನಮೋಸ್ತುತೇ!

ಶನಿವಾರ ಬೆಳಿಗ್ಗೆ ರವಿಯು ಉದಯಿಸುತ್ತಿರುವಾಗ ನಮ್ಮ ಮನೆಯ ಮಹಡಿಯಿಂದ ಹೀಗೆ ಕಾಣಿಸಿದ. ಆಗ ಸೆರೆಹಿಡಿದ ಚಿತ್ರ.

ಉದಯರವಿ


ರವಿಯನ್ನು ನೋಡಿದಾಗ ನೆನಪಾದದ್ದು, ಮುತ್ತುಸ್ವಾಮಿ ದೀಕ್ಷಿತರ ಕೃತಿ ’ಸೂರ್ಯಮೂರ್ತೇ ನಮೋಸ್ತುತೇ!’
ಇದು ಸೌರಾಷ್ಟ್ರ ರಾಗದಲ್ಲಿದ್ದು, ಧೃವತಾಳದಲ್ಲಿದೆ.

ಆ ಕೃತಿ ಇಲ್ಲಿದೆ. ಹಾಗೇ ಇದರ ತಾತ್ಪರ್ಯವನ್ನು ಬರೆದಿದ್ದೇನೆ.
ತಪ್ಪಿದ್ದರೆ ತಿದ್ದಿರಿ.

ಪಲ್ಲವಿ:
||ಸೂರ್ಯಮೂರ್ತೇ ನಮೋಸ್ತುತೇ, ಸುಂದರಚ್ಛಾಯಾಧಿಪತೇ|| (ಸೂರ್ಯ ಮೂರ್ತೇ)

ಅನುಪಲ್ಲವಿ:
||ಕಾರ್ಯಕಾರಣಾತ್ಮಕ ಜಗತ್ಪ್ರಕಾಶಕ, ಸಿಂಹರಾಶ್ಯಾಧಿಪತೇ||
||ಆರ್ಯವಿನುತ ತೇಜಸ್ಫೂರ್ತೇ, ಆರೋಗ್ಯಾದಿ ಫಲ ಕೀರ್ತೇ||

ಚರಣ:
||ಸಾರಸಮಿತ್ರ ಮಿತ್ರಭಾನೋ, ಸಹಸ್ರ ಕಿರಣ ಕರ್ಣಸೂನೋ||
||ಕ್ರೂರ ಪಾಪಹರ ಕೃಶಾನೋ, ಗುರುಗುಹ ಮೋದಿತ ಸ್ವಭಾನೋ||
||ಸೂರಿ ಜನೇಡಿತ ಸುದಿನಮಣೇ, ಸೋಮಾದಿಗ್ರಹ ಶಿಖಾಮಣೇ||
||ಧೀರಾರ್ಚಿತ ಕರ್ಮಸಾಕ್ಷಿಣೇ, ದಿವ್ಯತರ ಸಪ್ತಾಶ್ವರಥಿನೇ||
||ಸೌರಾಷ್ಟ್ರರ್ಣ ಮಂತ್ರಾತ್ಮನೇ, ಸ್ವರ್ಣ ಸ್ವರೂಪಾತ್ಮನೇ||
||ಭಾರತೀಶ ಹರಿಹರಾತ್ಮನೇ, ಭಕ್ತಿ ಮುಕ್ತಿ ವಿತರಣಾತ್ಮನೇ||

ತಾತ್ಪರ್ಯ:
ಸೌಂದರ್ಯ ಮೂರ್ತಿಯೂ ಛಾಯಾದೇವಿಯ ಪತಿಯೂ ಆದ ಸೂರ್ಯಸೇವ! ನಿನಗೆ ನಮಸ್ಕಾರ! ಕಾರ್ಯ ಕಾರಣ ಸ್ವರೂಪದ ಜಗತ್ತನ್ನು ಬೆಳಗುವವನು ನೀನೇ! ಸಿಂಹರಾಶಿಯ ಅಧಿಪತಿಯಾದ ನಿನ್ನನ್ನು ಪೂಜ್ಯರೂ, ಉತ್ತಮರೂ ಸ್ತುತಿಸುವರು. ಲೋಕಕ್ಕೆಲ್ಲಾ ಆರೋಗ್ಯ ಭಾಗ್ಯವನ್ನು ಕರುಣಿಸುವವನು ನೀನೇ! ನಿನಗೆ ಪ್ರಣಾಮ! ದಾನಶೂರ ಕರ್ಣನ ತಂದೆಯೂ, ಕಮಲ ಪುಷ್ಪದ ಮಿತ್ರನೂ, ಸಹಸ್ರ ಕಿರಣಗಳಿಂದ ಪ್ರಕಾಶಿಸುವವನೂ ಆದ ನೀನೇ ನಮ್ಮ ಪಾಪಗಳನ್ನೆಲ್ಲಾ ಹೋಗಲಾಡಿಸುವವನು. ಗುರುಗುಹನ ಸಂತೋಷಕ್ಕೆ ಸ್ವಭಾನುವೂ, ಪ್ರಾಜ್ಞರಿಂದ ಪೂಜಿಸಲ್ಪಡುವ ದಿನಮಣಿಯೂ ಆದ ನಿನಗೆ ನಮಸ್ಕಾರ! ಹೇ ದಿವಾಕರ! ಚಂದ್ರಾದಿಗ್ರಹಗಳಿಗೆಲ್ಲಾ ನೀನೇ ಅಧಿಪತಿ. ಶೂರಾಧಿಶೂರರಿಂದೆಲ್ಲ ಪೂಜಿಸಲ್ಪಡುವ ನೀನು ಲೋಕದ ಚರಾಚರ ವಸ್ತುಗಳಿಗೂ ಸಾಕ್ಷಿಭೂತನಾಗಿದ್ದೀಯೆ. ಸಪ್ತಾಶ್ವಗಳ ರಥದ ಮೇಲೆ ಚಲಿಸುವ ನೀನು ಸೌರಾಷ್ಟ್ರಾರ್ಣ ಮಂತ್ರ ಸ್ವರೂಪನಾಗಿರುವೆ. ದೀಪ್ಯಮಾನವಾಗಿ ಪ್ರಕಾಶಿಸುವ ಸ್ವರ್ಣ ಸ್ವರೂಪನೂ ನೀನೇ. ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪನೂ, ಯೋಗಮೋಕ್ಷದಾಯಕನೂ ಆದ ಸೂರ್ಯಮೂರ್ತಿ! ನಿನಗೆ ನಮಸ್ಕರಿಸುವೆ.

ಮಾನಸ ಸರೋವರ ಯಾತ್ರೆ

ಮಾನಸ ಸರೋವರ ಯಾತ್ರೆ

ಎಲ್ಲಿದೆ?
ಮಾನಸ ಸರೋವರ ಭಾರತ - ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು ೧೪,೯೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಹೋಗುವುದು ಜೀವನದ ಅತಿ ಮುಖ್ಯ ಕರ್ತವ್ಯ ಎಂಬುದು ನಂಬಿಕೆ.

ಮಾನಸ ಸರೋವರ


ಮಾನಸ ಸರೋವರ ವಿಶೇಷ.
ಕೈಲಾಸ ಪರ್ವತ ಶಿಖರವು ಪ್ರಪಂಚದ ಅತಿ ಎತ್ತರದ ಶಿಖರಗಳಲ್ಲಿ (ಸುಮಾರು ೨೩,೦೦೦ ಅಡಿಗಳು) ಒಂದು. ಇದಕ್ಕೆ ಅನೇಕ ಹೆಸರುಗಳಿವೆ. ಮೇರು, ಸುಮೇರು, ಸುಷುದ್ನು, ಹೇಮಾದ್ರಿ, ದೇವಪರ್ವತ, ಗಾನಪರ್ವತ, ರಜತಾದ್ರಿ, ರತ್ನ ಸ್ತಂಭ ಎಂಬ ಹೆಸರುಗಳೂ ಇವೆ. ಇದಕ್ಕೆ ರಾವಣ ಪರ್ವತ, ಹನುಮಾನ್ ಪರ್ವತ, ಪದ್ಮ ಸಂಭವ, ಮಂಜುಶ್ರೀ, ವಜ್ರಧರ, ಅವಲೋಕಿತೇಶ್ವರ ಎಂದೂ ಕರೆಯುತ್ತಾರೆ. ಇದು ಪಾರ್ವತಿ-ಪರಮೇಶ್ವರರ ಆವಾಸಸ್ಥಾನ. ಶಿವಶಕ್ತಿಯರು ಒಂದುಗೂಡಿದ ಜಾಗ. ಪ್ರಕೃತಿ ಪುರುಷರ ಮಿಲನ ಸ್ಥಾನ. ಜೀವಾತ್ಮ ಪರಮಾತ್ಮರ ಐಕ್ಯ ಸ್ಥಾನ. ವಿಶ್ವದ ರಚನೆ, ಸ್ಥಿತಿ, ಲಯಗಳಿಗೆ ಕಾರಣೀಭೂತವಾದ ಕೇಂದ್ರಬಿಂದು (Pillar of the Universe) ಮುಂತಾದವು. ಇದು ವರ್ಷದ ಎಲ್ಲಾ ಕಾಲವೂ ಹಿಮಾಚ್ಛಾದಿತವಾಗಿರುವುದು. ಈ ಸ್ಥಳವನ್ನು ದೂರದಿಂದ ದರ್ಶನ ಮಾಡಬಹುದೇ ಹೊರತು ಹತ್ತಲಾಗುವುದಿಲ್ಲ. ಇಚ್ಛೆಪಟ್ಟರೆ ಅದರ ಪರಿಕ್ರಮ ಮಾಡಬಹುದು. ಅದರ ಮಾರ್ಗ ೫೦ ಕಿ. ಮೀ. ಅದರಲ್ಲಿ ನಂದಿ ಗೊಂಫ್, ದಿರಾಚಕ್, ಗೌರಿಕುಂಡ, ಜಾನುಲಾ ಪಾರ್ಕ್ ಎಂಬ ಸ್ಥಳಗಳು ಬರುವುವು.

ಹೇಗೆ ಹೋಗಬೇಕು? ಯಾವಾಗ?
ಪ್ರತಿ ವರ್ಷದ ಜೂನ್ ತಿಂಗಳಿಂದ ಸೆಪ್ಟೆಂಬರ್ ಕೊನೆಯ ವಾರದವರೆಗೆ (ಹಿಮ ಕಡಿಮೆ ಇರುವ ತಿಂಗಳುಗಳನ್ನು ಪರಿಗಣಿಸಿ) ಮಾನಸ ಸರೋವರ ಯಾತ್ರೆ ಕೈಗೊಳ್ಳಬಹುದು. ಇದು ನಾವಿ ಇಚ್ಛಿಸಿದಂತೆ ಕೈಗೊಳ್ಳುವ ಯಾತ್ರೆಯಲ್ಲ. ಭಾರತದ ವಿದೇಶಾಂಗ ಮಂತ್ರಾಲಯ "ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್" (ಐ. ಟಿ. ಬಿ. ಪಿ) ನೇತೃತ್ವದಲ್ಲಿ ಈ ಯಾತ್ರೆಯನ್ನು ನೆರವೇರಿಸುತ್ತದೆ. ಹೋಗಲು ಬಯಸುವವರು ಈ ಐ. ಟಿ. ಬಿ. ಪಿ ಪರೀಕ್ಷೆ ಎದುರಿಸಬೇಕು. ಇದು ಯಾತ್ರಾಕಾಂಕ್ಷಿಗಳ ದೈಹಿಕ, ಮಾನಸಿಕ ದೃಢತೆ ಹಾಗೂ ಸಾಮರ್ಥ್ಯ ಪರಿಶೀಲಿಸಿ ಯಾತ್ರೆಯ ಸಮಯ ನಿಗದಿ ಪಡಿಸುತ್ತಾರೆ. ಯಾತ್ರೆಯ ಅವಧಿ ೨೮ ದಿನಗಳು. ಇದಕ್ಕಾಗಿ ೪೦ ಸದಸ್ಯರ ವಿವಿಧ ತಂಡಗಳನ್ನು ರಚಿಸಲಾಗುತ್ತದೆ. ಈ ತಂಡದಲ್ಲಿ ಯಾತ್ರಾರ್ಥಿಗಳಲ್ಲದೆ ಭದ್ರತಾ ಸಿಬ್ಬಂದಿ, ನುರಿತ ವೈದ್ಯರೂ ಇರುತ್ತಾರೆ. ಯಾವ ತಂಡದಲ್ಲಿ ಹೋಗಬೇಕು ಎಂಬ ವಿವರವನ್ನು ಯಾತ್ರಾರ್ಥಿಗಳಿಗೆ ಕನಿಷ್ಠ ಆರು ತಿಂಗಳು ಮೊದಲೇ ತಿಳಿಸಲಾಗುತ್ತದೆ.

ಯಾತ್ರೆಯ ಸಿದ್ಧತೆ.
ಮಾನಸ ಸರೋವರದ ಯಾತ್ರೆ ಉಳಿದ ತೀರ್ಥಯಾತ್ರೆಗಳಷ್ಟು ಸುಲಭವಾದದ್ದಲ್ಲ. ಇದಕ್ಕೆ ದಿನಕ್ಕೆ ಕನಿಷ್ಠ ೧೦ ಕಿ. ಮೀ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮಂಕಿಕ್ಯಾಪ್, ಸ್ವೆಟರ‍್, ಉಣ್ಣೆಯ ಕೈಕವಚ, ಥರ್ಮಲ್ ಬಟ್ಟೆಗಳು, ರೈನ್ ಕೋಟ್, ಹಿಮಪಾತ ತಡೆಯಬಲ್ಲ ಕೊಡೆ, ಸಣ್ಣ ಕತ್ತರಿ, ಚಾಕು, ಚಾರಣಕ್ಕೆ ಹೊಂದುವಂಥ ಬೂಟುಗಳು, ಹಿಮಪಾತವಾದರೆ ತಡೆಯಬಲ್ಲ ವಾಟರ್ ಪ್ರೂಫ್ ಬೂಟುಗಳು, ಮಂಜಿನ ಹೊಡೆತ ತಡೆಯಬಲ್ಲ ಕನ್ನಡಕ, ಧೂಳಿನಿಂದ ರಕ್ಷಿಸಬಲ್ಲ ಮುಖವಾಡ ಇವೆಲ್ಲ ಬೇಕೇಬೇಕು. ಅದು ನುರಿತರಿಂದ ಪರಿಶೀಲಿಸಲ್ಪಡುವುದು ಅನಿವಾರ್ಯ. ಇದರ ಜೊತೆಗೆ ಗ್ಲೂಕೋಸ್, ಚಾಕೊಲೇಟ್, ನೀರಿನ ಬಾಟಲಿಗಳು, ಪೋರ‍್ಟಬಲ್ ಆಕ್ಸಿಜೆನ್ ಸಿಲಿಂಡರ‍್ಗಳು, ಆಮ್ಲಜನಕ ಪರಿಮಾಣ ಹಾಗೂ ನಾಡಿ ಮಿಡಿತವನ್ನು ಏಕಕಾಲದಲ್ಲಿ ನೋಡಬಲ್ಲ ಪಲ್ಸ್ ಆಕ್ಸಿಮೀಟರ್ ಅವಶ್ಯವಾಗಿ ಬೇಕು.

ಯಾತ್ರೆಯ ವಿಧಾನ.
ವಿಮಾನ, ರೈಲು, ಬಸ್ ಹೀಗೆ ಯಾವ ಮಾರ್ಗದಿಂದಲಾದರೂ ನೇಪಾಳದ ರಾಜಧಾನಿಯಾದ ಕಠ್ಮಂಡು ತಲುಪಬಹುದು. ಅಲ್ಲಿಂದಲೇ ಯಾತ್ರೆ ಆರಂಭ. ಅಲ್ಲಿಂದ ಅಧಿಕೃತ ಬಸ್ ಮೂಲಕ ಕಡೋರಿಗೆ ಪ್ರಯಾಣ. ಇದು ಚೀನಾದ ಗಡಿ. ಇಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ನಂತರ ಮಾನಸ ಸರೋವರ ಯಾತ್ರೆಗೆ ಅನುಮತಿ ಇದೆ. ಇಲ್ಲಿಂದ ಸಿಂಕೋಲಾ ಎಂಬ ಹಳ್ಳಿಯವರೆಗೆ ಮಾತ್ರ ವಾಹನ ಸೌಲಭ್ಯವಿದೆ. ಚಾರಣ ಇಲ್ಲಿಂದಲೇ ಆರಂಭ. ೬ ಕಿ. ಮೀ. ಕ್ಲಿಷ್ಟಕರ ಹಾದಿಯಲ್ಲಿ ನಡೆದರೆ ’ಗಾಲಾ’ ಸಿಗುತ್ತದೆ. ಇದು ಬಹಳ ಸುಂದರವಾದ ಹಿಮನಗರಿ. ಕಾಳಿದಾಸನ ’ಮೇಘದೂತ’ದ ಕಾವ್ಯ ಕ್ಷೇತ್ರ ಇದೇ ಎಂದು ನಂಬಿಕೆ. ಇಲ್ಲಿಒಂದ ೪೦೦೦ ಅಡಿ ಇಳಿಯಬೇಕು. ಇದು ಅತಿ ದುರ್ಗಮವಾದ ಹಾದಿ. ಭೂಕುಸಿತ, ಹಿಮಪಾತ ಇಲ್ಲಿ ಸರ್ವೇಸಾಮಾನ್ಯ. ಯಾತ್ರಿಗಳು ಈ ಸವಾಲನ್ನು ಎದುರಿಸಿಕೊಂಡೇ ಸಾಗಬೇಕು. ಹೀಗೆ ಸಾಗಿದರೆ ’ಮಲ್ಪಾ’ ಸಿಗುತ್ತದೆ. ಅಲ್ಲಿಂದ ಕಿರಿದಾದ ಹಾದಿ ಮೂಲಕ ’ಬುಧಿ’ ಸೇರಬೇಕು. ನಂತರ ಎರಡು ಸಾವಿರ ಅಡಿ ಹತ್ತಿದರೆ ’ಅನ್ನಪೂರ್ಣೇಶ್ವರಿ’ ಪರ್ವತದ ಸಾಲು ಸಿಗುತ್ತದೆ. ಇಲ್ಲಿಂದ ಮುಂದೆ ಚಾರಣಕ್ಕೆ ’ಯಾಕ್’ ಪ್ರಾಣಿಗಳ ಅಥವಾ ಟಿಬೆಟಿಯನ್ ಗೈಡುಗಳ ಸಹಾಯ ಬೇಕೇಬೇಕು. ಸುಮಾರು ನಾಲ್ಕು ಕಿ.ಮೀ. ನಡೆದರೆ ’ಗುಂಜಿ’ ಸಿಗುತ್ತದೆ. ಇಲ್ಲಿ ಕಿರುಕೈಲಾಸ ಪರ್ವತ ಕಾಣಿಸುವುದು. ಈ ಸ್ಥಳದಲ್ಲಿ ಐ. ಟಿ. ಬಿ. ಪಿ ವೈದ್ಯರ ತಪಾಸಣೆ ಕಡ್ಡಾಯ. ಇದರಲ್ಲಿ ತೇರ್ಗಡೆಯಾದರೆ ಮಾತ್ರ ಮುಂದಿನ ಯಾತ್ರೆ, ಇಲ್ಲದಿದ್ದರೆ ಮಾನಸ ಸರೋವರ ಯಾತ್ರೆ ಇಲ್ಲಿಯೇ ಮೊಟಕುಗೊಳ್ಳುತ್ತದೆ.

ಮಾನಸ ಸರೋವರ

ಗುಂಜಿಯಿಂದ ’ಕಾಲಾಪಾನಿ’ವರೆಗೆ ೧೦ ಕಿ.ಮೀ. ಹಿಮಪರ್ವತದ ಹಾದಿ. ಮಂಜು ಮುಸುಕಿದ ಪರ್ವತದ ನಡುವಿನ ಈ ಪ್ರಯಾಣಕ್ಕೆ ಆಮ್ಲಜನಕದ ಸಿಲಿಂಡರುಗಳು ಅವಶ್ಯವಾಗಿ ಬೇಕು. ಮಧ್ಯದಲ್ಲಿ ವೈದ್ಯರ ಚಿಕಿತ್ಸೆ ಅವಶ್ಯವಾಗಬಹುದು. ಅದಕ್ಕೆ ವ್ಯವಸ್ಥೆ ಇರುತ್ತದೆ. ಉತ್ತರಾಂಚಲದ ಮಂಡಲ್ ವಿಕಾಸ್ ನಿಗಮ್ ಇಲ್ಲಿ ಅನೇಕ ಚಿಕಿತ್ಸಾ ಶಿಬಿರಗಳನ್ನು, ಆಹಾರ ವ್ಯವಸ್ಥೆ ನಿರ್ವಹಣಾ ತಾಣಗಳನ್ನು ನಿರ್ಮಿಸಿದೆ.

ದಾರಿಯಲ್ಲಿನ ಕೆಲವು ಗುಹೆಗಳಿಗೆ ’ವ್ಯಾಸಗುಹೆ’ ಎಂಬ ಹೆಸರಿದೆ. ಪುರಾಣದ ವ್ಯಾಸರು ಇಲ್ಲಿದ್ದರು ಎಂಬ ನಂಬಿಕೆ ಇದೆ. ಇಲ್ಲಿ ಕಾಳಿ ದೇವಾಲಯವೂ ಇದೆ. ಹೀಗೆ ೧೨,೦೦೦ ಅಡಿ ಹತ್ತಿದಾಗ ನಾಭಿದಂಗ್ ಪರ್ವತ ಶ್ರೇಣಿಗೆ ಯಾತ್ರಿಗಳು ತಲುಪುವರು. ಇಲ್ಲಿ ಮಂಜುಗಡ್ಡೆಗಳಿಂದ ಉಂಟಾದ ’ಓಂ’ ಎಂಬ ಸ್ವರೂಪ ಸ್ಪಷ್ಟವಾಗಿ ಕಾಣುತ್ತದೆ. ಈ ಪರ್ವತ ಶ್ರೇಣಿಯಲ್ಲಿ ಗಣಪತಿ-ಆಂಜನೇಯ ಮತ್ತು ಸಾಕ್ಷಾತ್ ಪರಶಿವನನ್ನೇ ಮಂಜುಗಡ್ಡೆಯ ಆಕೃತಿ ಮೂಲಕ ದರ್ಶನ ಮಾಡಿದ ಭಕ್ತಾದಿಗಳಿದ್ದಾರೆ. ನಾಭಿದಂಗಿನ ’ಹೋರೆ’ ಎಂಬ ಶಿಬಿರದಲ್ಲಿ ಯಾತ್ರಿಗಳು ತಂಗಬೇಕು. ಮಂದಾರ ಪರ್ವತ ಮತ್ತು ಕೈಲಾಸ ಪರ್ವತದ ನಡುವಿನ ಈ ಜಾಗದಲ್ಲಿ ಮಾನಸ ಸರೋವರದ ದಾರಿ ಸಿಗುತ್ತದೆ. ಮೊದಲು ರಾವಣ ಶಿವನನ್ನು ಕುರಿತು ತಪಸ್ಸು ಮಾಡಿದನೆಂದು ನಂಬಲಾದ ’ರಾಕ್ಷಸ ಸರೋವರ’ ಸಿಗುವುದು. ಇದನ್ನು ದಾಟಿದ ನಂತರ ಜದಿ ಶಿಬಿರ ಸಿಗುತ್ತದೆ.

ಮಾನಸ ಸರೋವರ ಪ್ರವೇಶ.
ಇಲ್ಲಿ ಅಧಿಕಾರಿಗಳು ಮಾನಸ ಸರೋವರ ಪ್ರವೇಶಕ್ಕೆ ಪ್ರಾಕೃತಿಕ ಅನುಕೂಲ ಹೇಗಿದೆ ಎಂಬುದನ್ನು ಪರಿಶೀಲಿಸಿ ಯಾತ್ರಿಗಳನ್ನು ಬಿಡುತ್ತಾರೆ. ಕೆಲವೊಮ್ಮೆ ೩-೪ ದಿನಗಳ ಕಾಲ ಯಾತ್ರಿಗಳು ಇಲ್ಲಿ ತಂಗಬೇಕಾಗುತ್ತದೆ. ಇಷ್ಟೆಲ್ಲಾ ಸಾಹಸದ ನಂತರ ಮಾನಸ ಸರೋವರದ ದರ್ಶನ. ಅದರ ದರ್ಶನ ಈ ಎಲ್ಲಾ ಶ್ರಮವನ್ನು ಮರೆಸಬಲ್ಲಷ್ಟು ರಮ್ಯವಾಗಿದೆ. ’ಬ್ರಹ್ಮನ ಮನಸ್ಸು’ ಎಂಬ ಕಲ್ಪನೆ ಇರುವ ಮಾನಸ ಸರೋವರದಲ್ಲಿ ಸೂರ್ಯ ರಶ್ಮಿ ಚಿನ್ನದ ರೇಖೆಯಂತೆ ಕಂಗೊಳಿಸುತ್ತದೆ. ಹಿಂಬದಿಯ ಕೈಲಾಸ ಪರ್ವತ ಭಕ್ತಿಭಾವ ಮೂಡಿಸುತ್ತದೆ. ರುದ್ರಾಭಿಷೇಕ, ರುದ್ರಯಾಗ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ಇಲ್ಲಿ ನಡೆಸಲು ಅವಕಾಶವಿದೆ. ಅಪರ ವಿಧಿಗಳನ್ನು ಮಾಡುವವರೂ ಇದ್ದಾರೆ.

ಇಲ್ಲಿಂದ ಮುಂದೆ ’ತಾಲ್ಜೆನ್’ ಎಂಬ ಜಾಗದಲ್ಲಿ ರಾತ್ರಿ ವಿರಮಿಸಿದ ನಂತರ ’ಕೈಲಾಸ ಪ್ರದಕ್ಷಿಣೆ’ ಆರಂಭವಾಗುತ್ತದೆ. ದಕ್ಷಿಣಾಮೂರ್ತಿ ಇಂದ ಆರಂಭವಾಗುವ ಇದು ಪಶ್ಚಿಮಕ್ಕೆ, ಉತ್ತರಕ್ಕೆ ತಿರುಗಿ ಕೊನೆಗೆ ’ತಾಲ್ಜೆನ್’ ಅಲ್ಲೇ ಕೊನೆಯಾಗುತ್ತದೆ. ಇದರಲ್ಲಿ ೨೦,೦೦೦ ಅಡಿಯವರೆಗೂ ಹತ್ತಬೇಕು. ಗಟ್ಟಿಗರೇ ಇದನ್ನು ಸಾಧಿಸಬಲ್ಲರು. ಜೀವಹಾನಿಯ ಸಂಭವವೂ ಇರುವುದರಿಂದ ದೃಢ ನಿರ್ಧಾರ ಪರಿಶೀಲಿಸಿದ ನಂತರವೇ ಈ ಪರಿಕ್ರಮಕ್ಕೆ ಅವಕಾಶ. ನಂತರ, ಮಾನಸ ಸರೋವರವನ್ನು ಇದೇ ಮಾರ್ಗದಲ್ಲೇ ಇಳಿಯಬೇಕು. ಇಳಿಯುವಾಗ ’ಗೌರಿಕುಂಡ’ದ ದರ್ಶನ ಮಾಡುತ್ತಾರೆ.

ಮಾನಸ ಸರೋವರ


ಸದಾ ನೀರು ಹೆಪ್ಪುಗಟ್ಟಿರುವ ಇಲ್ಲಿನ ಪೂರ್ವದಲ್ಲಿ ’ಶಕ್ತಿ’ತತ್ವವನ್ನು ಪ್ರತಿನಿಧಿಸುವ ಕೈಲಾಸ ಪರ್ವತವೂ, ದಕ್ಷಿಣದಲ್ಲಿ ’ಧ್ಯಾನ’ತತ್ವ ಹೇಳುವ ಭೈರವನೂ, ಪಶ್ಚಿಮದಲ್ಲಿ ’ಅಹಂ’ತತ್ವ ಹೇಳುವ ನಂದಿಯೂ, ಉತ್ತರದಲ್ಲಿ ’ಕ್ರಿಯಾ’ತತ್ವವನ್ನು ಹೇಳುವ ಪಾರ್ವತಿ ಪರ್ವತವು ಗೋಚರಿಸುತ್ತದೆ. ಇದೇ ಮಾನಸ ಸರೋವರ ಯಾತ್ರೆಯ ಸಾರ್ಥಕ ಘಟ್ಟ.

ಸಹಾಯ.
ಭಾರತ ಸರ್ಕಾರದ ವೆದೇಶಾಂಗ ಸಚಿವಾಲಯ, ಕುಮಾನ್ ಮಂಡಲ್ ವಿಕಾಸ್ ನಿಗಮ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯಾತ್ರೆಗೆ ನೆರವಾಗುತ್ತದೆ. ಸಹಾಯ ವೆಚ್ಚ ರೂ. ೪೫,೦೦೦/- ಇಂದ ರೂ. ೫೦,೦೦೦/-. ಇದಲ್ಲದೆ ಕುದುರೆ, ಸೇವಕ, ಯಾಕ್, ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ ಒದಗಿಸುತ್ತದೆ.

ಚಿತ್ರ ಕೃಪೆ: ಮೊದಲ ಚಿತ್ರ ಇಲ್ಲಿಂದ
ಎರಡನೆಯ ಮತ್ತು ಮೂರನೆಯ ಚಿತ್ರ ಇಲ್ಲಿಂದ