My Blog List

Saturday, January 30, 2010

ಮಹಾರಾಜ ಸ್ವಾತಿತ್ತಿರುನಾಳ್ - ೨

ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ನಲ್ಲತಂಬಿ ಮುದಲಿಯಾರ್, ವಡಿವೇಲು, ಮೇರುಸ್ವಾಮಿ, ಕನ್ನಯ್ಯ, ಅನಂತಪದ್ಮನಾಭಗೋಸ್ವಾಮಿ, ಗೋವಿಂದಮಾರಾರ್ ಎಂಬುವವರು ಪ್ರಮುಖರು. ಪ್ರಸಿದ್ಧ ಸಾಹಿತಿಗಳಾದ ಕೋಯಿಲ್ ತಂಬುರಾನ್, ಇರಯಿಮ್ಮನ್ ತಂಬಿ, ರಾಮವಾರಿಯರ್ ಅವರುಗಳೂ ಇದ್ದರು.

ಸ್ವಾತಿತ್ತಿರುನಾಳ್ ಅವರೇ ಕೇರಳದಲ್ಲಿ ಹರಿಕಥೆ ಸಂಪ್ರದಾಯವನ್ನು ರೂಢಿಗೆ ತಂದವರು. ಸಂಗೀತ ಮತ್ತು ಸಾಹಿತ್ಯದ ಪ್ರಚಾರಕ್ಕೆ ಇದೊಂದು ಮುಖ್ಯವಾದ ಸಾಧನವೆಂಬುದೇ ಅವರ ಉದ್ದೇಶವಾಗಿತ್ತು. ಇದಕ್ಕಾಗಿಯೇ 'ಕುಚೇಲೋಪಾಖ್ಯಾನ', 'ಅಜಮಿಳೋಪಾಖ್ಯಾನ' ಎಂಬ ಎರಡು ಕಥೆಗಳನ್ನು ಸಂಸ್ಕೃತದಲ್ಲಿ ರಚಿಸಿದರು. ಮಹಾರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯವಾಗಿದ್ದ 'ಹರಿಕಥೆ ಸಂಪ್ರದಾಯ' ೧೯ನೇ ಶತಮಾನದಲ್ಲಿ ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆಯಿತು.

ಈ ಮೊದಲೇ ಹೇಳಿರುವಂತೆ ಅನಂತಪದ್ಮನಾಭಗೋಸ್ವಾಮಿ ಎಂಬ ಪ್ರಸಿದ್ಧ ಹರಿಕಥೆ ಭಾಗವತರು, ತಂಜಾವೂರಿನ ಮಹಾರಾಜರಾದ ಶರಭೋಜಿಯವರ ಆಸ್ಥಾನದಲ್ಲಿದ್ದರು. ಸ್ವಾತಿತ್ತಿರುನಾಳ್ ಅವರು ಭಾಗವತರನ್ನು ಆಹ್ವಾನಿಸಿ, ಗೌರವಿಸಿ, ತಮ್ಮ 'ಗುರು' ಎಂದೇ ಭಾವಿಸಿ, ಅವರು ರಚಿಸಿದ ಎರಡು ಉಪಾಖ್ಯಾನಗಳನ್ನು ಭಾಗವತರಿಗೆ ಅರ್ಪಿಸಿ, ಕಥೋಪನ್ಯಾಸ ಮಾಡಿ ಅನುಗ್ರಹಿಸಬೇಕೆಂದು ಕೋರಿದರು. 'ಉತ್ಸವ ಪ್ರಬಂಧ' ಎಂಬ ಮತ್ತೊಂದು ಕೃತಿಯನ್ನು ಸ್ವಾತಿತ್ತಿರುನಾಳ್ ರಚಿಸಿದರು.

ಕೇರಳದಲ್ಲಿ ಇವರ ಕಾಲದಲ್ಲಿದ್ದ ಸಂಗೀತ ಸಂಪ್ರದಾಯಕ್ಕೆ 'ಸೋಪಾನ ಸಂಪ್ರದಾಯ' ಎಂದು ಹೆಸರಿತ್ತು. ಹಿಂದೂಸ್ತಾನಿ ಸಂಗೀತದ ಕುರಿತು ಆಗ ಅಲ್ಲಿಯವರಿಗಿನ್ನೂ ತಿಳಿದಿರಲಿಲ್ಲ. ಆ ಕಾರಣಕ್ಕೇ ತಂಜಾವೂರಿಗೆ ಹಿಂದೂಸ್ತಾನಿ ಸಂಗೀತವನ್ನು ಪರಿಚಯಿಸಿದ ರಂಗಯ್ಯಂಗಾರರನ್ನೂ, ರಘುನಾಥರಾಯರೆಂಬ ವೈಣಿಕರನ್ನೂ, ಸಾರಂಗಿ ವಿದ್ವಾನ್ ಚಿಂತಾಮಣಿ ಭಾಗವತರನ್ನೂ ಗೌರವಿಸಿ ಆದರದಿಂದ ಬರಮಾಡಿಕೊಂಡರು.

ವಾಗ್ಗೇಯಕಾರರ ಶ್ರೇಣಿಯಲ್ಲಿ ಸ್ವಾತಿತ್ತಿರುನಾಳ್ ಮಹಾರಾಜರಿಗೆ ವಿಶೇಷ ಸ್ಥಾನವಿದೆ. ಹಲವಾರು ಭಾಷೆಗಳಲ್ಲಿ ಅವರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಸುಮಾರು ೬೦೦ ಕೀರ್ತನೆಗಳು ಈಗಾಗಲೇ ಗ್ರಂಥರೂಪದಲ್ಲಿ ಬಂದಿವೆ.

ಇವರ ರಚನೆಗಳು, ಕೀರ್ತನೆಗಳು, ಪದ, ವರ್ಣ, ತಿಲ್ಲಾನ, ಪ್ರಬಂಧಗಳೆಂಬ ಐದು ಭಾಗಗಳಿವೆ. ಅವರ ನವರತ್ನಮಾಲಿಕಾ, ನವವಿಧ ಭಕ್ತಿ ಮಂಜರಿ ಮೊದಲಾದವುಗಳಿಗೆ ವಿಶಿಷ್ಟ ಸ್ಥಾನವಿದೆ. ಕೇವಲ ಕೀರ್ತನೆಗಳೇ ಮುನ್ನೂರಕ್ಕೂ ಹೆಚ್ಚಿವೆ.

ನೃತ್ಯಕ್ಕಾಗಿಯೇ ಮೀಸಲಿಡುವಂತೆ ಶೃಂಗಾರರಸ ಪ್ರಧಾನವಾದ ಅನೇಕ ಪದಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಆತ್ಮ-ಪರಮಾತ್ಮರ ಸಂಬಂಧವು, ನಾಯಕಿ-ನಾಯಕರ ಸಂಬಂಧವಾಗಿವೆ. ತಿರುವಾಂಕೂರು ರಾಜ ಮನೆತನದ ಕುಲಸ್ವಾಮಿ ಶ್ರೀ ಪದ್ಮನಾಭನೇ ನಾಯಕ! ಉದಾ: 'ಪನ್ನಗೇಂದ್ರಶಯನ' ಎಂಬ ಪದದ ಎಂಟು ಚರಣಗಳಲ್ಲಿ ನಾಯಕಿಯ ಅಂತರ್ಭಾವವನ್ನು ಅದ್ಭುತ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಜತಿಸ್ವರ, ಸ್ವರಜತಿ, ತಾನವರ್ಣ, ಪದವರ್ಣ ಮೊದಲಾದವುಗಳನ್ನು ಇವರು ರಚಿಸಿದ್ದಾರೆ. ಶ್ರೀ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳಂತೆ ಸ್ವಾತಿತ್ತಿರುನಾಳ್ ಅವರೂ ಕೃಗುಚ್ಛವನ್ನು ರಚಿಸಿದ್ದಾರೆ. ಅದುವೇ 'ನವರಾತ್ರಿ ಕೀರ್ತನೆಗಳು'.

ಇವರು ತಮ್ಮ ಕೃತಿಗಳಿಗೆ ತಮ್ಮ ಕುಲಸ್ವಾಮಿಯಾದ ಶ್ರೀ ಪದ್ಮನಾಭಸ್ವಾಮಿಯ ಶ್ರೀನಾಮಗಳೆ ಆದ 'ಜಲಜನಾಭ', 'ಸರಸಿಜನಾಭ', 'ಕಂಜನಾಭ', 'ಸರಸೀರುಹನಾಭ' ಎಂಬ ಮುದ್ರೆಗಳನ್ನಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅವರ ಹಾಗೂ ಅವರ ಸಮಕಾಲೀನರಾದ ತ್ಯಾಗರಾಜರ ನಡುವೆ ಇದ್ದ ಸ್ನೇಹ-ಸಂಬಂಧವನ್ನು ನೆನೆಸಿಕೊಂಡರೆ ಮೈನವಿರೇಳುವುದು.

(ಸಶೇಷ)

Thursday, January 21, 2010

ಮಹಾರಾಜ ಸ್ವಾತಿತ್ತಿರುನಾಳ್ - ೧



೧೭೫೦-೧೮೫೦ರಲ್ಲಿ ಸಂಗೀತ ಕಲೆ ಉಚ್ಚಸ್ಥಾಯಿಯನ್ನು ಮುಟ್ಟಿತ್ತೆನ್ನಬಹುದು. ಸಂಗೀತ ಪ್ರಪಂಚದಲ್ಲಿ ಇಂದಿಗೂ ಪ್ರಚಾರದಲ್ಲಿರುವ ಅಪಾರ ಸಂಖ್ಯೆಯ ಭಾವಭರಿತ ಕೀರ್ತನೆಗಳು ಆ ಒಂದುನೂರು ವರ್ಷಗಳಲ್ಲಿ ಬೆಳಕಿಗೆ ಬಂದವೇ ಆಗಿವೆ. ಅದನ್ನು, ಆ ಒಂದು ಶತಮಾನಕಾಲವನ್ನು 'ಸಂಗೀತ ಯುಗ' ಎಂದೇ ಹೇಳಬೇಕು. ಆ ಒಂದುನೂರು ವರುಷ ಕಾಲದಲ್ಲೇ ದಕ್ಷಿಣ ಭಾರತದಲ್ಲಿ ಬಾಳಿ ಬದುಕಿದ ವಾಗ್ಗೇಯಕಾರರು, ಸಂಗೀತ ವಿದ್ವಾಂಸರು ಹಲವರು. ಅವರಲ್ಲಿ ಸ್ವಾತಿತ್ತಿರುನಾಳ್ ಸಹ ಒಬ್ಬರು.

ಕರ್ನಾಟಕ ಸಂಗೀತರ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರಿಗಳು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಹಲವಾರು ವಿದ್ವಾಂಸರೆಲ್ಲ ಸ್ವಾತಿತ್ತಿರುನಾಳ್ ಅವರ ಸಮಕಾಲೀನರು. ಅಪಾರವಾದ ಸಂಗೀತಜ್ಞಾನವನ್ನೂ ಆಳವಾದ ಪಾಂಡಿತ್ಯವನ್ನೂ ಪಡೆದಿದ್ದ ಸ್ವಾತಿತ್ತಿರುನಾಳ್, ಸಂಗೀತ ಪ್ರಪಂಚಕ್ಕೆ ಅಮಿತಸೇವೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಅವರ ನಂತರ ಸಂಗೀತ ಪ್ರಪಂಚ ಅವರನ್ನು 'ಅಭಿನವ ತ್ಯಾಗರಾಜ' ಎಂಬ ಹೆಸರಿನಿಂದ ಗೌರವಿಸಲಾರಂಭಿಸಿತು.

ಸ್ವತಃ ಮಹಾರಾಜನಾದರೂ ವಿದ್ಯೆಯ ದಾಹ ಇವರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಭಾರತದ ವಿವಿಧ ಭಾಷೆಗಳಲ್ಲಿ ಸಾಹಿತ್ಯಗಳನ್ನು ವ್ಯಾಸಂಗ ಮಾಡಬೇಕೆಂಬ ಹಂಬಲದಿಂದಲೇ ಅವರು ತಮ್ಮ ತಾಯ್ನುಡಿಯಾದ ಮಲಯಾಳದ ಜೊತೆಗೆ ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಇಂಗ್ಲೀಷ್, ಪರ್ಷಿಯನ್ ಭಾಷೆಗಳ ವ್ಯಾಸಂಗ ಮಾಡಿದರಲ್ಲದೆ ಗಣಿತ ಶಾಸ್ತ್ರ, ರಾಜಕೀಯ ಶಾಸ್ತ್ರ, ವೇದಾಂತ ಮೊದಲಾದವುಗಳಲ್ಲಿಯೂ ಅಪಾರ ಜ್ಞಾನ ಹೊಂದಿದ್ದರು.

ಸ್ವಾತಿತ್ತಿರುನಾಳ್ ಅವರ ಕಾಲಕ್ಕೆ ಮೊದಲು, ಕೇರಳದಲ್ಲಿ ಸಂಗೀತವು ತನ್ನದೇ‌ ಆದ ರೀತಿಯಲ್ಲಿ ಬೆಳಗುತ್ತಿತ್ತು. ಅದಕ್ಕೆ 'ಆಟಕಥಾ ಸಂಗೀತ' ಎಂದು ಹೆಸರಿತ್ತು.

ಅಶ್ವಿನಿತ್ತಿರುನಾಳ್ ಎಂಬ ವಾಗ್ಗೇಯಕಾರರು ರಚಿಸಿದ ಕೆಲವು ಕೀರ್ತನೆಗಳು ಪ್ರಚಾರದಲ್ಲಿದ್ದವು. ರಾಮಪುರಂ ವಾರಿಯರ್ ಎಂಬುವವರು ರಚಿಸಿದ ಗೀತಗೋವಿಂದ ಮೊದಲಾದ ಕೃತಿಗಳೂ ಪ್ರಚಾರದಲ್ಲಿದ್ದವು. ಕಥಕ್ಕಳಿ ನೃತ್ಯದಲ್ಲೂ ಸಂಗೀತ ಬೆರೆತುಕೊಂಡಿತ್ತು. ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು.

ಪದ್ಮನಾಭಸ್ವಾಮಿಯ ಭಕ್ತರಾಗಿದ್ದ ಸ್ವಾತಿತ್ತಿರುನಾಳ್ ಅವರು, ಶ್ರೀರಾಮಭಕ್ತರೂ, ಕರ್ನಾಟಕ ಸಂಗೀತಕ್ಕೆ ಮಕುಟಪ್ರಾಯರೂ ಆಗಿರುವ ತ್ಯಾಗರಾಜರ ಮೆಚ್ಚುಗೆ ಪಡೆದಿದ್ದರೆಂದರೆ, ಅವರಿಗಿದ್ದ ಸಂಗೀತಜ್ಞಾನ, ರಚನಾಸಾಮರ್ಥ್ಯ ಎಷ್ಟರಮಟ್ಟಿನದು ಎಂದು ಊಹಿಸಬಹುದು.

ತಿರುವಾಂಕೂರು ಅರಸು ಮನೆತನದಲ್ಲಿ ೧೮೧೩ನೇ ಇಸವಿಯ ಏಪ್ರಿಲ್ ೧೬ನೇ ತಾರೀಖು ಸ್ವಾತಿತ್ತಿರುನಾಳ್ ಅವರು ಜನಿಸಿದರು. ಹುಟ್ಟುವಾಗಲೇ ಮಕುಟ ಧರಿಸುವ ಯೋಗ ಇವರಿಗಾಯಿತು. ಇವರ ಹಿಂದಿನ ದೊರೆ ಬಾಲರಾಮವರ್ಮ ಮಹಾರಾಜರ ಕಾಲ ೧೮೧೧ನೇ ಇಸವಿಗೆ ಮುಗಿದು ಅವರಿಗೆ ಗಂಡು ಸಂತಾನವಿಲ್ಲದಿದ್ದರಿಂದ ಅವರ ತಂಗಿ ರಾಣಿ ಸೇತುಕ್ಷ್ಮಿಬಾಯಿಯೇ ಗದ್ದುಗೆ ಏರಿದರು. ಇವರು ಶ್ರೀ ಪದ್ಮನಾಭಸ್ವಾಮಿಯ ಅನನ್ಯ ಭಕ್ತರು. ಆ ಸ್ವಾಮಿಯ ಅನುಗ್ರಹದಿಂದ ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಕುಮಾರನೇ ಸ್ವಾತಿತ್ತಿರುನಾಳ್.

ಚಿಕ್ಕಂದಿನಲ್ಲೇ ಮಾತೆಯನ್ನು ಕಳೆದುಕೊಂಡ ಸ್ವಾತಿತ್ತಿರುನಾಳ್ ಚಿಕ್ಕಮ್ಮನ ಪೋಷಣೆಯಲ್ಲಿ ಬೆಳೆದರು. ಶುಕ್ಲ ಪಕ್ಷದ ಚಂದ್ರನಂತೆ ಇವರ ದೇಹ, ಮನಸ್ಸು, ಬುದ್ಧಿ ಎಲ್ಲವೂ ಬೆಳೆದವು, ಬೆಳಗಿದವು. ಬಾಲ್ಯದಲ್ಲೇ ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಸಾಹಿತ್ಯ, ಅಂಗಸಾಧನೆ ಕಲೆ, ಯುದ್ಧಕಲೆ, ಹೀಗೆ ಎಲ್ಲದರಲ್ಲೂ ಮಹಾಮೇಧಾವಿ ಎನಿಸಿಕೊಂಡರು.

೧೬ನೇ ವಯಸ್ಸಿನಲ್ಲಿ, ಚಿಕ್ಕಮ್ಮ ಗೌರಿ ಪಾರ್ವತಿಬಾಯಿ ಅವರು ತಮ್ಮ ಅಮೃತ ಹಸ್ತದಿಂದ ಸ್ವಾತಿತ್ತಿರುನಾಳ್ ಅವರಿಗೆ ಮಕುಟಾಭಿಷೇಕ ಮಾಡಿದರು.

ಮಹಾದೈವಭಕ್ತರೂ, ಚತುರರೂ, ರಾಜತಂತ್ರಜ್ಞರೂ ಆಗಿದ್ದ ಇವರು ರಾಜ್ಯಭಾರವನ್ನು ಅದ್ಭುತವಾದ ರೀತಿಯಲ್ಲಿ ನಿರ್ವಹಿಸಿದರು. ಕಲಾವಿದರಿಗೆ ಇವರು ಕೊಡಿತ್ತಿದ್ದ ಪ್ರೋತ್ಸಾಹ ಅಷ್ಟಿಷ್ಟಲ್ಲ. ಅನೇಕ ಸಂಗೀತಗಾರರಿಗೆ, ಕಲಾವಿದರಿಗೆ ಸ್ವತಃ ಧನಸಹಾಯ ನೀಡಿ ವಿದ್ಯೆಕಲಿಸುವ ವ್ಯವಸ್ಥೆ ಮಾಡುತ್ತಿದ್ದರು. ಪ್ರತಿಭೆ ಇರುವವರಿಗೆ ವಿಶೇಷ ಗೌರವ ಸಲ್ಲಿಸಿ ಪ್ರಶಸ್ತಿ ನೀಡುತ್ತಿದ್ದರು.

ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ತಮಿಳು ದೇಶಗಳಿಂದೆಲ್ಲ ಸಂಗೀತ ವಿದ್ವಾಂಸರನ್ನು ಕರೆಸಿ ಗೌರವಿಸುತ್ತಿದ್ದರು. ಅವರಲ್ಲಿ ಹಲವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡಿದ್ದರು. ಇವರ ಆಳ್ವಿಕೆಯಲ್ಲಿ ರಾಜ್ಯವು ಸಂಪತ್ಸಮೃದ್ಧವಾಗಿತ್ತಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳಾದವು.

(ಸಶೇಷ)

Wednesday, January 20, 2010

ಚಾನೆಲ್ ಸುರಂಗ

ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಸಾಗರಗರ್ಭ ಸುರಂಗದ ಮೂಲಕ ಸಂಪರ್ಕ ಕಲ್ಪಿಸುವ ಚಾನೆಲ್ ಸುರಂಗ ಮಾರ್ಗ ಯೋಜನೆ ಈ ಶತಮಾನದ ಸಿವಿಲ್ ಇಂಜಿನಿಯರಿಂಗ್ ಸಾಧನೆಗಳಲ್ಲಿ ಅದ್ಭುತವಾದದ್ದು.

೩೭ ಕಿ. ಮೀ. ಅಗಲವಿರುವ ಇಂಗ್ಲೀಷ್ ಕಡಲ್ಗಾಲುವೆ ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ನಡುವಣ ವಿಭಜನ ಗೆರೆಯಾಗಿದೆ. ಯುರೋಪಿನ ಇತರ ದೇಶಗಳ ಮಧ್ಯೆ ಇರುವಂತೆ ಇಂಗ್ಲೆಂಡಿನೊಂದಿಗೆ ಜನಸಂಪರ್ಕ, ಸಾಗಾಣಿಕೆ, ವಾಣಿಜ್ಯ ವಹಿವಾಟು ಸಲೀಸಾಗಿ ನಡೆಯಲಿ ಈ ಕಾಲುವೆ ಅಗತ್ಯವಿತ್ತು. ಈ ದೂರವನ್ನು ಕಡಿಮೆ ಮಾಡಿದರೆ ಈ ಎರಡು ದೇಶಗಳ ವಾಣಿಜ್ಯ ಸಂಪರ್ಕ, ಜನರ ಓಡಾಟ ಕ್ಷಿಪ್ರವಾಗುತ್ತದೆ. ಆದರೆ ಕಾಲುವೆಯ ನೀರನ್ನು ಬೇರೆಡೆಗೆ ತಿರುಗಿಸಲು ಸಾಧ್ಯವಿಲ್ಲವಷ್ಟೆ. ಕಾಲುವೆಯ ಕೆಳಗೆ ಭೂಮಿಯಲ್ಲಿ ಸುರಂಗ ಕೊರೆದರೆ?

ಫ್ರೆಂಚ್ ಗಣಿಗಾರಿಕೆ ಇಂಜಿನಿಯರ್ ಆಲ್ಬರ್ಟ್ ಮಥಿಯಾಸ್ ಫೇವಿಯರ್ ೧೮೦೨ರಲ್ಲಿಯೇ ಈ ಸುರಂಗ ಮಾರ್ಗದ ಯೋಜನೆ ಮಂಡಿಸಿದ್ದ. ಸುರಂಗದೊಳಗೆ ಕುದುರೆಗಾಡಿ ಓಡಿಸಬಹುದೆಂದೂ, ಬೆಳಕಿಗಾಗಿ ಮೇಣದ ಬತ್ತಿ ಬಳಸಬಹುದೆಂದೂ ಸಲಹೆ ನೀಡಿದ್ದ. ಮುಂದೆ ಅನೇಕರು ಬೇರೆ ಬೇರೆ ರೀತಿಯ ಉಪಾಯಗಳನ್ನು ಸೂಚಿಸಿದ್ದರು. ಕೆಲವು ಕಾರಣಗಳಿಂದ ಅವು ಯಾವುವೂ ಕಾರ್ಯರೂಪಕ್ಕೆ ಬರಲಿಲ್ಲ.

ಚಾನೆಲ್ ಸುರಂಗ ಮಾರ್ಗ
ಚಿತ್ರ ಕೃಪೆ: ಇಲ್ಲಿಂದ 

೧೯೮೦ರ ದಶಕದಲ್ಲಿ ಸುರಂಗ ಮಾರ್ಗ ಯೋಜನೆಗೆ ಮತ್ತೆ ಜೀವ ಬಂದಿತು. ಎರಡೂ ಸರ್ಕಾರಗಳು ಈ ಬೃಹತ್ ಸಿವಿಲ್ ಇಂಜಿನಿಯರಿಂಗ್ ಯೋಜನೆಗೆ ಸಮ್ಮತಿಸಿದವು. ಫ್ರಾನ್ಸಿನ ಕೆಲೇ ಸಮೀಪದ ಸಂಗಟ್ಟೆಯಿಂದ ಬ್ರಿಟನಿನ ಕೆಂಟ್ ಅಲ್ಲಿರುವ ಫೋಕ್ಸ್ಟೋನ್ ಸಮೀಪದ ಬ್ರೈಟನ್ ಮಧ್ಯೆ ಸುರಂಗ ಮಾರ್ಗದ ನಿರ್ಮಾಣ ಆರಂಭವಾಯಿತು. ಬ್ರಿಟಿಷರು ತಮ್ಮ ಕಡೆಯಿಂದ, ಫ್ರೆಂಚರು ತಮ್ಮ ಕಡೆಯಿಂದ ಸುರಂಗ ಕೊರೆಯುತ್ತ ಬಂದು ೩೩ನೇ ಕಿ. ಮೀ. ಬಿಂದುವಿನಲ್ಲಿ ಸಂಧಿಸುವ ಏರ್ಪಾಡಾಯಿತು. ಈ ಭೇಟಿ ಭೂಗರ್ಭದೊಳಗೆ ನಡೆಯಬೇಕಾಗಿತ್ತಾದ್ದರಿಂದ ಅಂದಾಜು ಹಾಕಿಕೊಂಡಂತೆ, ಅದೇ ಮಟ್ಟದಲ್ಲಿ ಸುರಂಗ ಕೊರೆಯುತ್ತ, ದಿನದ ಪ್ರಗತಿಯ ಬಗ್ಗೆ ಎರಡೂ ಕಡೆಯವರು ವಿಚಾರ ವಿನಿಮಯ ಮಾಡಿಕೊಳ್ಳುತ್ತ, ತಮ್ಮ ಅಂದಾಜಿನಂತೆಯೇ ಮುಂದುವರೆಯುತ್ತಿದ್ದೇವೆಯೇ ಎಂಬುದನ್ನು ಪರೀಕ್ಷಿಸುತ್ತ ಸಾಗಬೇಕಾಗಿತ್ತು. ಸುಮಾರು ೫೦ ಕಿ. ಮಿ. ಪೈಕಿ ೩೭ ಕಿ. ಮೀ. ಇಂಗ್ಲೀಷ್ ಕಾಲುವೆಯ ಕೆಳಗೆ, ಸಮುದ್ರ ತಳದಿಂದ ೭೦ ಮೀ. ಅಷ್ಟು ಆಳದಲ್ಲಿ ಆ ಸುರಂಗ ಸಾಗಬೇಕಿತ್ತು.

ಸುರಂಗ ಮಾರ್ಗ ಕೊರೆಯಲೆಂದೇ ವಿನ್ಯಾಸಗೊಳಿಸಲಾದ ಸುಮಾರು ೬೦೦ಟನ್ಗಳಷ್ಟು ತೂಗುವ ಯಂತ್ರಗಳನ್ನು ಬಳಸಲಾಯಿತು. ಇವು ಘಂಟೆಗೆ ಸುಮಾರು ೯ಮೀ. ಕೊರೆಯಬಲ್ಲವು. ಭೂಮಿಯಡಿಯಲ್ಲಿ ಸಿಕ್ಕಿದ ಕಲ್ಲು, ಮಣ್ಣು, ಕಂದು ಸೀಮೆಸುಣ್ಣ, ಸುಣ್ಣಮಿಶ್ರಿತ ಜೇಡಿಮಣ್ಣನ್ನು ಕೊರೆಯುತ್ತ ಯಂತ್ರಗಳು ಮುಂದುವರೆದವು. ಕಂಪ್ಯೂಟರ್ ಸಹಾಯದಿಂದ ತಾವು ಸಾಗುತ್ತಿರುವ ಮಾರ್ಗ ಸರಿಯೇ ಎಂದು ಪರೀಕ್ಷಿಸುತ್ತಿದ್ದರು. ಹಾಗಿದ್ದರೂ ಅನೇಕ ಬಾರಿ ದಾರಿ ತಪ್ಪಿದುದುಂಟು, ತಿದ್ದಿಕೊಂಡು ಮುಂದುವರೆದುದ್ದುಂಟು.


ಚಿತ್ರ ಕೃಪೆ: ಇಲ್ಲಿಂದ 

ಸಾಮಾನ್ಯವಾಗಿ ರೂಢಿಯಲ್ಲಿರುವಂತೆ ಇದು ಜೋಡು ಮಾರ್ಗವಲ್ಲ. ಬದಲು, ಮೂರು ಮಾರ್ಗಗಳು ಪರಸ್ಪರ ಸಮಾನಾಂತರವಾಗಿ ಸಾಗುತ್ತವೆ. ಇವು ಪ್ರತ್ಯೇಕ ಮಾರ್ಗಗಳೆ ಆಗಿದ್ದು ಒಂದೊಂದು ಮಾರ್ಗದ ಮಧ್ಯೆ ಸುಮಾರು ೩೦ಮೀ. ಅಂತರವಿದೆ. ಎರಡು ಮುಖ್ಯ ಮಾರ್ಗಗಳು ತಲಾ ೭.೬ ಮೀ. ವ್ಯಾಸದ್ದಾಗಿರುತ್ತದೆ. ಅತಿ ವೇಗವಾಗಿ ಸಾಗುವ ವಿದ್ಯುತ್ ರೈಲಿನ ಆಘಾತವನ್ನು ತಾಳಿಕೊಳ್ಳುವಂತೆ ಗಟ್ಟಿಯಾದ ಕಾಂಕ್ರೀಟ್ ಸಾರಣೆ ಮಾಡಲಾಗಿದೆ. ಮಧ್ಯದ್ದು ೪.೮ಮೀ. ವ್ಯಾಸದ ಸರ್ವೀಸ್ ಟನಲ್. ಇದನ್ನು ತುರ್ತು ಸಲಕರಣೆಗಳ ಸಾಗಣೆ, ಅಗ್ನಿಶಾಮಕ ವ್ಯವಸ್ಥೆ ಮತ್ತು ದುರಸ್ತಿಗಾಗಿ ಬಳಸಬಹುದಾಗಿದೆ. ನೀರು, ಚರಂಡಿ, ಗಾಳಿ ವ್ಯವಸ್ಥೆಯೊಂದಿಗೆ ಪ್ರತಿ ೩೭೫ ಮೀ. ಅಂತರದಲ್ಲಿ ಇರುವ ಅಡ್ಡ ಮಾರ್ಗಗಳು ಈ ಮೂರು ಸುರಂಗಗಳ ನಡುವೆ ಸಂಪರ್ಕ ಕಲ್ಪಿಸುತ್ತವೆ. ಇದಕ್ಕೆಂದೇ ತಯಾರಿಸಲಾದ ಬೃಹತ್ ಯಂತ್ರಗಳ ಸಹಾಯದಿಂದ ಈ ಸುರಂಗ ಮಾರ್ಗವನ್ನು ಕೊರೆಯಲಾಯಿತು.

ತಮ್ಮ ಅಂದಾಜಿನಂತೆ, ಎರಡೂ ಕಡೆಯಿಂದ ಸುರಂಗ ಕೊರೆಯುತ್ತ ಬಂದ ಕಾರ್ಮಿಕರು, ಇಂಜಿನಿಯರುಗಳು ೧೯೯೦ರ ಅಕ್ಟೋಬರ್ ೩೦ರಂದು ಸಂಧಿಸಿದರು. ೧೯೯೩ರ ಜೂನ್ ತಿಂಗಳಿನಲ್ಲಿ ರೈಲು ಪ್ರಾರಂಭಿಕ ಓಟ ನಡೆಸಿತು. ಈಗ ಆ ಮಾರ್ಗದಲ್ಲಿ ರೈಲುಗಳು ಸಂಚರಿಸುತ್ತಿವೆ. ಬ್ರಿಟನಿನ ಬ್ರೈಟನ್ ನಿಲ್ದಾಣದಿಂದ ಫ್ರಾನ್ಸಿನ ಸಂಗಟ್ಟೆ ನಿಲ್ದಾಣದವರೆಗಿನ ೫೦ಕಿ.ಮೀ. ದೂರವನ್ನು ಸುಮಾರು ೩೫ ನಿಮಿಷಗಳಲ್ಲಿ ಕ್ರಮಿಸಬಹುದು. ಕೆಲವರು ತಮ್ಮ ವಾಹನವನ್ನೂ ರೈಲಿನಲ್ಲಿ ಸಾಗಿಸಿ, ಅಲ್ಲಿಂದ ಮುಂದೆ ತಮ್ಮ ಪ್ರಯಾಣ ಮುಂದುವರೆಸುತ್ತಾರೆ.

Monday, January 18, 2010

ಪಿರಮಿಡ್

ಪಿರಮಿಡ್ 


ಎಲ್ಲರೂ  ಕಾಲಕ್ಕೆ ಹೆದರಿದರೆ, ಕಾಲವೇ ಪಿರಮಿಡ್ಗಳಿಗೆ ಅಂಜುತ್ತದೆ ಎಂಬ ಗಾದೆ ಮಾತಿದೆ. ಚೌಕಾಕಾರದ ತಳ, ತ್ರಿಕೋಣಾಕಾರದ ಪಾರ್ಶ್ವಗಳು, ಈ ಪಾರ್ಶ್ವಗಳು ಮೇಲೇರುತ್ತ ಒಂದುಗೂಡಿ ಪಿರಮಿಡ್ ಶಿಖರವಾಗುತ್ತದೆ. ಪಿರಮಿಡ್ಗಳ ನಿರ್ಮಾಣಾವಧಿ ಸುಮಾರು ಕ್ರಿ. ಪೂ. ೨೫೭೦ ಇಂದ ಕ್ರಿ. ಪೂ. ೨೬೫ರವರೆಗೆ. ಕಳೆದ ಸುಮಾರು ೫೦೦೦ ವರ್ಷಗಳಿಂದ ಪ್ರಕೃತಿಯ ಎಲ್ಲ ಪ್ರಕೋಪಗಳನ್ನು ಸಹಿಸಿಕೊಂಡು ನಿಂತಿರುವ ಈ ಭವ್ಯ ಗೋಪುರಗಳು ಆಗಿನ ಕಾಲದ ಚಕ್ರವರ್ತಿಗಳ, ಸಾಮ್ರಾಜ್ಞಿಯರ ಸಮಾಧಿಗಳಾಗಿವೆ.

ಪಿರಮಿಡ್
ಚಿತ್ರ ಕೃಪೆ: ಇಲ್ಲಿಂದ 

ಈಗ ಈಜಿಪ್ಟಿನಲ್ಲಿ ಉಳಿದಿರುವ ಸುಮಾರು ೪೦ ಪಿರಮಿಡ್ಗಳ ಪೈಕಿ ಕೈರೋ ನಗರದ ಸಮೀಪದಲ್ಲಿರುವ ಪಿರಮಿಡ್ಗಳು ಪ್ರವಾಸಿಗಳನ್ನು ಅಧಿಕವಾಗಿ ಆಕರ್ಷಿಸುತ್ತವೆ. ಕ್ರಿ. ಪೂ. ೨೬೫೦ರಲ್ಲಿ ನಿರ್ಮಾಣಗೊಂಡ ಪಿರಮಿಡ್ ಸಕ್ಕಾರ ಎಂಬಲ್ಲಿದೆ. ಚಕ್ರವರ್ತಿ ಜೋಸೆರ್ ಅಪ್ಪಣೆಯ ಮೇರೆಗೆ ಇಮ್ಹೊಟೆಪ್ ಎಂಬ ವಾಸ್ತುಶಿಲ್ಪಿ ಇದನ್ನು ನಿರ್ಮಿಸಿದ. ಈತ ರಾಜ್ಯದ ಒಬ್ಬ ವೈದ್ಯ ಮಂತ್ರಿಯೂ ಆಗಿದ್ದ. ಸಕ್ಕಾರ ಪಿರಮಿಡ್ ೬೨ ಮೀ. ಎತ್ತರವಿದೆ. ಎಲ್-ಗಿಜಾ ಸಮೀಪ ಅತ್ಯಂತ ಪ್ರಸಿದ್ಧವಾದ ಹಾಗೂ ಭವ್ಯವಾದ ಮೂರು ಪಿರಮಿಡ್ಗಳಿವೆ. ಗಿಜಾ ಪಿರಮಿಡ್ಗಳು ಈಜಿಪ್ಟಿನ ಫ್ಲಾರೊ ದೊರೆಗಳ ಭವ್ಯತೆ ಮತ್ತು ಶಕ್ತಿ ಸಾಹಸಗಳ ಕುರುಹುಗಳೆಂದು ಪರಿಗಣಿಸಲಾಗಿದೆ. ಕ್ರಿ. ಪೂ. ೨೫೯೦ರಲ್ಲಿ ನಿರ್ಮಾಣಗೊಂಡ ಖುಫು ಪಿರಮಿಡ್ ಪುರಾತನ ಜಗತ್ತಿನ ಏಳು ಅದ್ಭುತಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದೆ. ಒಟ್ಟು ೧೩ಎಕರೆ ವಿಸ್ತೀರ್ಣವಿರುವ ಇದು ನಿರ್ಮಾಣಗೊಂಡಾಗ ೧೪೭ಮೀ. ಎತ್ತರವಿತ್ತು. ಆ ರಾಜನ ತರುವಾಯ ಪಟ್ಟಕ್ಕೆ ಬಂದ ಆತನ ಮಗ ಅದರ ಸಮೀಪದಲ್ಲಿಯೇ ತನಗಾಗಿ ಒಂದು ಪಿರಮಿಡ್ ನಿರ್ಮಿಸಿಕೊಂಡ. ಅದರ ಎತ್ತರ ೧೩೬.೪ಮೀ. ಮುಂದೆ ಪಟ್ಟಕ್ಕೆ ಬಂದ ಮತ್ತೊಬ್ಬ ರಾಜನೂ ೭೩.೧ಮೀ. ಎತ್ತರದ ಪಿರಮಿಡ್ ನಿರ್ಮಿಸಿಕೊಂಡ.

ರಾಜರುಗಳು ಇನ್ನೂ ದೃಢಕಾಯರಾಗಿದ್ದಾಗಲೇ ಅವರಿಗಾಗಿ ಪಿರಮಿಡ್ ನಿರ್ಮಾಣ ಪ್ರಾರಂಭವಾಗುತ್ತಿತ್ತು. ಪಿರಮಿಡ್ಗಳಿಗೆ ಬಳಸಲಾಗಿರುವ ಸುಣ್ಣಕಲ್ಲು ಮತ್ತು ಬೆಣಚುಕಲ್ಲು ದಿಂಡುಗಳು ಪ್ರತಿಯೊಂದೂ ಸುಮಾರು ಮೂರರಿಂದ ಹದಿನೈದು ಟನ್ ಭಾರದವು. ಇಷ್ಟು ಭಾರವಾದ ದಿಂಡು ಕಲ್ಲುಗಳನ್ನು ಬಹಳ ದೂರ ಕಲ್ಲುಗಣಿಗಳಿಂದ ನೈಲ್ ನದಿಯಲ್ಲಿ ಸಾಗಿಸಿ ತಂದು, ಪಿರಮಿಡ್ ನಿರ್ಮಾಣದ ಸ್ಥಳಗಳಿಗೆ ಗಾಡಿಗಳ ಮೂಲಕ ಸಾಗಿಸಿರಬಹುದೆಂದು ಹೇಳಲಾಗಿದೆ. ಈ ಬೃಹತ್ ಪಿರಮಿಡ್ಗಳನ್ನು ನಿರ್ಮಿಸಲು ಎಷ್ಟು ವರ್ಷ ತೆಗೆದುಕೊಂಡಿರಬಹುದು; ಅಷ್ಟು ಭಾರದ ದಿಂಡುಗಳನ್ನು ಎತ್ತರಕ್ಕೆ ಏರಿಸಲು ಯಾವ ಕ್ರಮ ಅನುಸರಿಸಿರಬಹುದು, ಕಟ್ಟಿದವರಿಗೆ ಏನೆಲ್ಲಾ ತೊಡಕುಗಳು ಎದುರಾಗಿರಬಹುದು,ಅವನ್ನು ಅವರು ಹೇಗೆ ನಿಭಾಯಿಸಿರಬಹುದು - ಎಂಬುದನ್ನು ಇಂದಿನ ಅಧುನಿಕ ಕ್ರೇನುಗಳ ಯುಗದಲ್ಲಿ ಕಲ್ಪಿಸಿಕೊಳ್ಳುತ್ತ ಹೋದಂತೆ ಅಂದಿನ ನಿರ್ಮಾಣಕಾರರ ಕಾರ್ಯ ತಂತ್ರದ ಬಗ್ಗೆ ನಮಗೆ ಅಚ್ಚರಿಯಾಗದೆ ಇರುವುದಿಲ್ಲ.

ಒಂದು ಅಂದಾಜಿನಂತೆ, ಕಲ್ಲು ಚಪ್ಪಡಿಗಳನ್ನು ನಿರ್ಮಾಣ ಸ್ಥಳಕ್ಕೆ ಸಾಗಿಸಿವ ಕೆಲಸದಲ್ಲಿ ಒಂದು ಲಕ್ಷ ಕೆಲಸಗಾರರು, ಮತ್ತು ನಿರ್ಮಾಣ ಸ್ಥಳದಲ್ಲಿ ಪ್ರತಿದಿನ ಸುಮಾರು ನಲವತ್ತು ಸಾವಿರ ಮಂದಿ ಕೆಲಸ ಮಾಡುತ್ತಿದ್ದರು. ಒಂದು ಪಿರಮಿಡ್ ನಿರ್ಮಾಣಕ್ಕೆ ಆಗಿರಬಹುದಾದ ವೆಚ್ಚವನ್ನು ಪ್ರಾಯಶಃ ಊಹಿಸಿಕೊಳ್ಳಲು ಸಾಧ್ಯವಾಗದು.

ಪಿರಮಿಡ್ಗಳು ಆಸಕ್ತರಿಗೆ ಸರ್ವಕಾಲಕ್ಕೂ ಅಧ್ಯಯನದ ವಿಷಯಗಳಾಗುತ್ತಾ ಬಂದಿವೆ. ಅವುಗಳನ್ನು ಕುರಿತು ದಂತಕಥೆಗಳೂ ಹೇರಳವಾಗಿವೆ.

ಇವುಗಳ ಒಳಭಾಗದ ರಚನೆ ಅದ್ಭುತವಾಗಿದೆ. ಅಲ್ಲಲ್ಲಿ ಭವ್ಯವಾದ ವಿಶಾಲ ಮಂಟಪಗಳು, ಸ್ತಂಭಗಳು, ಗೋಡೆಗಳ ಮೇಳೆ ವರ್ಣಚಿತ್ರಗಳು, ಪುರಾತನ ಚಿತ್ರಲಿಪಿಯಲ್ಲಿರುವ ಸೂಚನೆ - ಸಂಕೇತಗಳು, ಉಬ್ಬು ಚಿತ್ರಗಳು, ಭವ್ಯ ವಿಗ್ರಹಗಳು, ಪಿರಮಿಡ್ ಗರ್ಭಗೃಹಕ್ಕೆ ಸಾಗುವ ಏರುದಾರಿ, ಮುಂದೆ ನಾಲ್ಕಾರು ಕಡೆ ಚದುರುವ ಕವಲು ದಾರಿಗಳು, ಹೊರಗಿನಿಂದ ಬೆಳಕು ಬಂದು ಚಿತ್ರಗಳ ಬಣ್ಣ ಅಳಿಸಿ ಹೋಗದಂತೆ ಅವನ್ನೂ ಬೆಚ್ಚಗಿರಿಸುವಂತೆ ನಿರ್ಮಿಸಿರುವ ಬೆಳಕಿಂಡಿಗಳು, ಗಾಳಿಕಿಂಡಿಗಳು.

ಪಿರಮಿಡ್ (Typical)
ಚಿತ್ರ ಕೃಪೆ: ಇಲ್ಲಿಂದ

ಪಿರಮಿಡ್ ಕಾಂಪ್ಲೆಕ್ಸ್
ಚಿತ್ರ ಕೃಪೆ: ಇಲ್ಲಿಂದ

ಈಜಿಪ್ಟಿನವರು ಮಾತ್ರವಲ್ಲದೆ ಇಥಿಯೋಪಿಯದವರು, ಬ್ಯಾಬಿಲೋನಿಯದವರು ಮತ್ತು ಮಾಯಾ ಜನರು ಸಹ ಪಿರಮಿಡ್ಗಳನ್ನು ನಿರ್ಮಿಸಿದ್ದಾರೆ. ಇವು ರಾಜರ ಸಮಾಧಿಗಾಗಿ, ಕಾಲ ಮಾಪಕಗಳಾಗಿ, ದೇವಾಲಯಗಳಾಗಿ ಬಳಕೆಯಲ್ಲಿದ್ದವು. ಪಿರಮಿಡ್ಗಳನ್ನು ರಾಜಗೋಪುರಗಳಾಗಿ ನಿರ್ಮಿಸುವ ಪರಿಪಾಠ ಹೇಗೆ ರೂಢಿಯಲ್ಲಿ ಬಂದಿತು ಎಂಬುದನ್ನು ಅಂದಾಜು ಮಾಡಲು ಸಾಧ್ಯವಿಲ್ಲವಾದರೂ, ನೈಲ್ ನದಿಯ ಬಯಲಿನ ನಾಗರಿಕತೆ ಸುಮಾರು ೫೦೦೦ ವರ್ಷಗಳಷ್ಟು ಹಿಂದೆಯೇ ಬೃಹತ್ ಪಿರಮಿಡ್ ಗೋಪುರಗಳನ್ನು ನಿರ್ಮಿಸುವಷ್ಟು ತಂತ್ರಜ್ಞಾನ ಪಡೆದಿತ್ತು ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

Friday, January 01, 2010

ಹೊಸ ವರ್ಷ ಮತ್ತು ಚಂದ್ರ ಗ್ರಹಣ

ಸಂಪದ ಬಳಗದ ಎಲ್ಲರಿಗೂ ಹೊಸ ವರುಷದ ನಲಿವಾರೈಕೆಗಳು..

ಹೊಸ ವರುಷ ತರಲಿ ಹರುಷ

ಚಂದ್ರ ಗ್ರಹಣ

ಇಂದು ಭಾಗಶಃ ಚಂದ್ರ ಗ್ರಹಣ.. ಅದರ ಚಿತ್ರವನ್ನು ಈಗಷ್ಟೇ ಸೆರೆಹಿಡಿದು ಇಲ್ಲಿ ಹಾಕಿರುವೆ..

ಇದನ್ನು ಕಪ್ಪು-ಬಿಳುಪಿನಲ್ಲಿಯೇ ಸೆರೆಹಿಡಿದದ್ದು.. ಹಾಗಾಗಿ ನೀಲಿ ಎಫೆಕ್ಟ್ ಇಲ್ಲ..