My Blog List

Saturday, January 30, 2010

ಮಹಾರಾಜ ಸ್ವಾತಿತ್ತಿರುನಾಳ್ - ೨

ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ನಲ್ಲತಂಬಿ ಮುದಲಿಯಾರ್, ವಡಿವೇಲು, ಮೇರುಸ್ವಾಮಿ, ಕನ್ನಯ್ಯ, ಅನಂತಪದ್ಮನಾಭಗೋಸ್ವಾಮಿ, ಗೋವಿಂದಮಾರಾರ್ ಎಂಬುವವರು ಪ್ರಮುಖರು. ಪ್ರಸಿದ್ಧ ಸಾಹಿತಿಗಳಾದ ಕೋಯಿಲ್ ತಂಬುರಾನ್, ಇರಯಿಮ್ಮನ್ ತಂಬಿ, ರಾಮವಾರಿಯರ್ ಅವರುಗಳೂ ಇದ್ದರು.

ಸ್ವಾತಿತ್ತಿರುನಾಳ್ ಅವರೇ ಕೇರಳದಲ್ಲಿ ಹರಿಕಥೆ ಸಂಪ್ರದಾಯವನ್ನು ರೂಢಿಗೆ ತಂದವರು. ಸಂಗೀತ ಮತ್ತು ಸಾಹಿತ್ಯದ ಪ್ರಚಾರಕ್ಕೆ ಇದೊಂದು ಮುಖ್ಯವಾದ ಸಾಧನವೆಂಬುದೇ ಅವರ ಉದ್ದೇಶವಾಗಿತ್ತು. ಇದಕ್ಕಾಗಿಯೇ 'ಕುಚೇಲೋಪಾಖ್ಯಾನ', 'ಅಜಮಿಳೋಪಾಖ್ಯಾನ' ಎಂಬ ಎರಡು ಕಥೆಗಳನ್ನು ಸಂಸ್ಕೃತದಲ್ಲಿ ರಚಿಸಿದರು. ಮಹಾರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯವಾಗಿದ್ದ 'ಹರಿಕಥೆ ಸಂಪ್ರದಾಯ' ೧೯ನೇ ಶತಮಾನದಲ್ಲಿ ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆಯಿತು.

ಈ ಮೊದಲೇ ಹೇಳಿರುವಂತೆ ಅನಂತಪದ್ಮನಾಭಗೋಸ್ವಾಮಿ ಎಂಬ ಪ್ರಸಿದ್ಧ ಹರಿಕಥೆ ಭಾಗವತರು, ತಂಜಾವೂರಿನ ಮಹಾರಾಜರಾದ ಶರಭೋಜಿಯವರ ಆಸ್ಥಾನದಲ್ಲಿದ್ದರು. ಸ್ವಾತಿತ್ತಿರುನಾಳ್ ಅವರು ಭಾಗವತರನ್ನು ಆಹ್ವಾನಿಸಿ, ಗೌರವಿಸಿ, ತಮ್ಮ 'ಗುರು' ಎಂದೇ ಭಾವಿಸಿ, ಅವರು ರಚಿಸಿದ ಎರಡು ಉಪಾಖ್ಯಾನಗಳನ್ನು ಭಾಗವತರಿಗೆ ಅರ್ಪಿಸಿ, ಕಥೋಪನ್ಯಾಸ ಮಾಡಿ ಅನುಗ್ರಹಿಸಬೇಕೆಂದು ಕೋರಿದರು. 'ಉತ್ಸವ ಪ್ರಬಂಧ' ಎಂಬ ಮತ್ತೊಂದು ಕೃತಿಯನ್ನು ಸ್ವಾತಿತ್ತಿರುನಾಳ್ ರಚಿಸಿದರು.

ಕೇರಳದಲ್ಲಿ ಇವರ ಕಾಲದಲ್ಲಿದ್ದ ಸಂಗೀತ ಸಂಪ್ರದಾಯಕ್ಕೆ 'ಸೋಪಾನ ಸಂಪ್ರದಾಯ' ಎಂದು ಹೆಸರಿತ್ತು. ಹಿಂದೂಸ್ತಾನಿ ಸಂಗೀತದ ಕುರಿತು ಆಗ ಅಲ್ಲಿಯವರಿಗಿನ್ನೂ ತಿಳಿದಿರಲಿಲ್ಲ. ಆ ಕಾರಣಕ್ಕೇ ತಂಜಾವೂರಿಗೆ ಹಿಂದೂಸ್ತಾನಿ ಸಂಗೀತವನ್ನು ಪರಿಚಯಿಸಿದ ರಂಗಯ್ಯಂಗಾರರನ್ನೂ, ರಘುನಾಥರಾಯರೆಂಬ ವೈಣಿಕರನ್ನೂ, ಸಾರಂಗಿ ವಿದ್ವಾನ್ ಚಿಂತಾಮಣಿ ಭಾಗವತರನ್ನೂ ಗೌರವಿಸಿ ಆದರದಿಂದ ಬರಮಾಡಿಕೊಂಡರು.

ವಾಗ್ಗೇಯಕಾರರ ಶ್ರೇಣಿಯಲ್ಲಿ ಸ್ವಾತಿತ್ತಿರುನಾಳ್ ಮಹಾರಾಜರಿಗೆ ವಿಶೇಷ ಸ್ಥಾನವಿದೆ. ಹಲವಾರು ಭಾಷೆಗಳಲ್ಲಿ ಅವರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಸುಮಾರು ೬೦೦ ಕೀರ್ತನೆಗಳು ಈಗಾಗಲೇ ಗ್ರಂಥರೂಪದಲ್ಲಿ ಬಂದಿವೆ.

ಇವರ ರಚನೆಗಳು, ಕೀರ್ತನೆಗಳು, ಪದ, ವರ್ಣ, ತಿಲ್ಲಾನ, ಪ್ರಬಂಧಗಳೆಂಬ ಐದು ಭಾಗಗಳಿವೆ. ಅವರ ನವರತ್ನಮಾಲಿಕಾ, ನವವಿಧ ಭಕ್ತಿ ಮಂಜರಿ ಮೊದಲಾದವುಗಳಿಗೆ ವಿಶಿಷ್ಟ ಸ್ಥಾನವಿದೆ. ಕೇವಲ ಕೀರ್ತನೆಗಳೇ ಮುನ್ನೂರಕ್ಕೂ ಹೆಚ್ಚಿವೆ.

ನೃತ್ಯಕ್ಕಾಗಿಯೇ ಮೀಸಲಿಡುವಂತೆ ಶೃಂಗಾರರಸ ಪ್ರಧಾನವಾದ ಅನೇಕ ಪದಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಆತ್ಮ-ಪರಮಾತ್ಮರ ಸಂಬಂಧವು, ನಾಯಕಿ-ನಾಯಕರ ಸಂಬಂಧವಾಗಿವೆ. ತಿರುವಾಂಕೂರು ರಾಜ ಮನೆತನದ ಕುಲಸ್ವಾಮಿ ಶ್ರೀ ಪದ್ಮನಾಭನೇ ನಾಯಕ! ಉದಾ: 'ಪನ್ನಗೇಂದ್ರಶಯನ' ಎಂಬ ಪದದ ಎಂಟು ಚರಣಗಳಲ್ಲಿ ನಾಯಕಿಯ ಅಂತರ್ಭಾವವನ್ನು ಅದ್ಭುತ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಜತಿಸ್ವರ, ಸ್ವರಜತಿ, ತಾನವರ್ಣ, ಪದವರ್ಣ ಮೊದಲಾದವುಗಳನ್ನು ಇವರು ರಚಿಸಿದ್ದಾರೆ. ಶ್ರೀ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳಂತೆ ಸ್ವಾತಿತ್ತಿರುನಾಳ್ ಅವರೂ ಕೃಗುಚ್ಛವನ್ನು ರಚಿಸಿದ್ದಾರೆ. ಅದುವೇ 'ನವರಾತ್ರಿ ಕೀರ್ತನೆಗಳು'.

ಇವರು ತಮ್ಮ ಕೃತಿಗಳಿಗೆ ತಮ್ಮ ಕುಲಸ್ವಾಮಿಯಾದ ಶ್ರೀ ಪದ್ಮನಾಭಸ್ವಾಮಿಯ ಶ್ರೀನಾಮಗಳೆ ಆದ 'ಜಲಜನಾಭ', 'ಸರಸಿಜನಾಭ', 'ಕಂಜನಾಭ', 'ಸರಸೀರುಹನಾಭ' ಎಂಬ ಮುದ್ರೆಗಳನ್ನಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅವರ ಹಾಗೂ ಅವರ ಸಮಕಾಲೀನರಾದ ತ್ಯಾಗರಾಜರ ನಡುವೆ ಇದ್ದ ಸ್ನೇಹ-ಸಂಬಂಧವನ್ನು ನೆನೆಸಿಕೊಂಡರೆ ಮೈನವಿರೇಳುವುದು.

(ಸಶೇಷ)

2 comments:

  1. ನಿಜವಾಗಿಯೂ ನಾನು ಈ ವಿಷಯದಲ್ಲಿ ಯಾವುದೇ ಜ್ಙಾನ ಇಲ್ಲ. ಬಹುಶ: ನಿಮ್ಮ ಲೇಖನ ಸಂಗೀತ ವಿದ್ಯಾರ್ಥಿಗಳಿಗೆ ಅರ್ಥವಾಗುವುದೆಂದು ಭಾವಿಸಿದ್ದೇನೆ.

    ReplyDelete
  2. ಧನ್ಯವಾದಗಳು.

    -ಅನಿಲ್

    ReplyDelete