My Blog List

Tuesday, February 09, 2010

ಗಣಪತಿಯ ಬಗ್ಗೆ.

ಗಣಪತಿ.

ಹಿಂದೂ ದೇವತೆಗಳಲ್ಲಿ ಪ್ರಥಮ ಪೂಜಿತನಾಗುವವನು ಗಣಪತಿ. ಅವನು ಸಮುದಾಯದ ದೇವತೆ. 'ಗಣಾನಾಂತ್ವ...' ಮತ್ತು 'ನಿಷು ಸೀದ ಗಣಪತಿ...' ಶ್ಲೋಕಗಳ ಕಾಲದಿಂದಲೂ ಗಣಪತಿ ಸಮುದಾಯದ ನಾಯಕನಾಗಿಯೇ ವರ್ಣಿತನಾದವನು. 'ಗಣಪತಿ' ಎಂಬ ಶಬ್ದದ ಅರ್ಥವೇ ಗಣಗಳ ಅಧಿಪತಿ, ಅಂದರೆ, ಸಮುದಾಯದ ನಾಯಕ ಎಂದು. ಆ ಕಾರಣಕ್ಕೇ ಅವನಿಗೆ ಬೃಹಸ್ಪತಿ ಮತ್ತು ವಾಚಸ್ಪತಿ ಎಂಬ ಹೆಸರುಗಳಿವೆ. ಗಣಪತಿಯ ಸ್ವರೂಪದ ಮುಖ್ಯ ಲಕ್ಷಣವೆಂದರೆ ವಿಘ್ನಗಳನ್ನು ನಿವಾರಿಸುವುದು. ವಿಘ್ನಗಳು ಎಲ್ಲಾ ಕಾರ್ಯಗಳಿಗೂ ಇರುತ್ತವೆ. ಆದರೆ, ಧೀರರು ಮಾತ್ರವೇ ಅದನ್ನು ಹಿಮ್ಮೆಟ್ಟಿಸಬಲ್ಲರು. ಗಣಪತಿ ಅಂತಹ ಸಾಮರ್ಥ್ಯದ ಪ್ರತೀಕವಾಗಿದ್ದಾನೆ. ಹೀಗಾಗಿ ಗಣಪತಿಗೆ 'ವಿಘ್ನೇಶ್ವರ'ನೆಂಬ ಹೆಸರಿದೆ.

ಗಣಪತಿ ಹೆಸರಿನ ಮೂಲ.
ಗಣ ಎಂದತೆ ತತ್ತ್ವ. ಯಾವ ಮೂಲ ತತ್ತ್ವಗಳಿಂದ ಎಲ್ಲಾ ವಿದ್ಯೆಗಳೂ ಆವಿಷ್ಕಾರಗೊಳ್ಳುವುದೋ , ಆ ಮೂಲ ತತ್ತ್ವವೇ ಗಣಪತಿ. ಹೀಗಾಗಿ ಆತನು ವಿದ್ಯೆಗೆ ಅಧಿಪತಿಯಾಗಿರುತ್ತಾನೆ. ಗಣಪತಿಗೆ ಆನೆಯ ಮುಖವಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದನ್ನು ಪ್ರತಿನಿಧಿಸುವ 'ಗಜ' ಎಂಬ ಶಬ್ದಕ್ಕೆ ಆಳವಾದ ಅರ್ಥವಿದೆ. 'ಗ' ಎಂದರೆ ಗತಿ. ಜೀವನದ ಪರಮ ಧ್ಯೇಯದತ್ತ ತಿಳಿದೂ ತಿಳಿಯದೆಯೂ ಸಾಗುವುದು. 'ಜ' ಎಂದರೆ ಜನ್ಮ, ಅಂದರೆ ವಿಶ್ವದ ಮಹತ್ತರ ಉದ್ದೇಶ ಯಾವುದಿದೆಯೋ ಅದಕ್ಕಾಗಿ ಜನ್ಮ ತಳೆಯುವುದು ಎಂದರ್ಥ. ಸೃಷ್ಟಿಯಲ್ಲಿ ಸೂಕ್ಷ್ಮಾಂಡ ಹಾಗೂ ಬ್ರಹ್ಮಾಂಡಗಳೆಂಬ ಎರಡು ಬಗೆಗಳಿವೆ. ಇವೆರಡೂ ಒಂದಕ್ಕೊಂದು ಪ್ರತಿರೂಪವಾಗಿದೆ. ಈ ಎರಡೂ ರೂಪಗಳಲ್ಲಿರುವ ತತ್ತ್ವ ಒಂದೇ. ಆದರೆ, ಸ್ವರೂಪವು ಬೇರೆ. ಗಣಪತಿ ಮೂರ್ತಿಯಲ್ಲಿರುವ ಗಜಮುಖವು ಬ್ರಹ್ಮಾಂಡದ ಪ್ರತೀಕ. ಮಾನವ ಶರೀರವು ಸೂಕ್ಷ್ಮಾಂಡದ ಪ್ರತೀಕ. ಸೂಕ್ಷ್ಮಾಂಡದ ಗುರಿ ಬ್ರಹ್ಮಾಂಡವಾಗಿರುವುದರಿಂದ ಗಣಪತಿಯ ಸ್ವರೂಪದಲ್ಲಿ ಗಜಮುಖಕ್ಕೇ ಪ್ರಾಧಾನ್ಯತೆ.

ಗಜಮುಖವೇ‌ ವಿಶ್ವವನ್ನು ಪ್ರತಿನಿಧಿಸಿದರೆ, ಮಾನವಾಕಾರವೇ ವ್ಯಕ್ತಿ ಎಂದು ಗ್ರಹಿಸಬಹುದು. ಅವೆರಡೂ ಒಂದೇ, ಮಾತ್ರವಲ್ಲ, ಪರಸ್ಪರ ಪೂರಕವಾದದ್ದು ಎಂಬುದನ್ನು ಗಣಪತಿಯ ಕಲ್ಪನೆ ತೋರಿಸಿಕೊಡುತ್ತದೆ. 

(ಇನ್ನೂ ಇದೆ)