My Blog List

Thursday, February 11, 2010

ಗಣಪತಿಯು ವಾಕ್ಸ್ವರೂಪಿ.

ಮಣ್ಣಿನ ಗಣಪತಿ.

ಸಮಸ್ತ ಭಾಷಾಪ್ರಪಂಚಕ್ಕೆ ಗಣಪತಿಯು ಆದಿಮೂಲ. ಶಬ್ದವು ಮೂಲೋತ್ಪತ್ತಿಯಾಗುವ ಮೂಲಾಧಾರ ಚಕ್ರ ಈತನ ನೆಲೆ. ನಾಲ್ಕು ದಳಗಳ ರಕ್ತವರ್ಣದ ಮೂಲಾಧಾರವಾದ 'ಲಂ' ಎಂಬ ಚಕ್ರವು ಪೃಥ್ವಿಯ ಬೀಜವಾಗಿದೆ. ಇದನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುವ ಈತನೇ ಲಂಬೋದರ. ಇದನ್ನು ಆತ ಮೂರುವರೆ ಸುತ್ತುಗಳುಳ್ಳ  ಸರ್ಪದಿಂದ ಹಿಡಿದಿಟ್ಟಿದ್ದಾನೆ. ಹಿಂದೂ ಧರ್ಮದಲ್ಲಿ ಸರ್ಪವು ಕಾಮದ ಸಂಕೇತ. ಕಾಮವು ನಿಯಂತ್ರಣವಿಲ್ಲದಿದ್ದಾಗ ಹೇಗೆ ಅಪಾಯಕಾರಿಯೋ, ಹಾಗೇ ನಿಯಂತ್ರಣದಲ್ಲಿದ್ದಾಗ ಸೃಷ್ಟಿಯ ವಿಕಾಸಕ್ಕೆ ಕಾರಣವಾಗುತ್ತದೆ. ಗಣಪತಿಗೆ ವಾಹನವಾಗಿರುವುದು ಇಲಿ. ಅದು ಸ್ವಭಾವದಲ್ಲಿ ಹಾವಿನ ಶತ್ರು. ಸ್ವಭಾವವನ್ನು ಮೀರಿದ ಜ್ಞಾನದಲ್ಲಿ ಶತ್ರುತ್ವ ಇರುವುದಿಲ್ಲವೆಂದು ತಿಳಿಸುವ ಸಲುವಾಗಿಯೇ ಗಣಪತಿ ಅವೆರಡನ್ನೂ ಒಟ್ಟಾಗಿ ಇರಿಸಿಕೊಂಡಿರುವನು. ಗಣಪತಿಯ ವಾಹನವಾದ ಮೂಷಕ (ಇಲಿ) ಎಂಬ ಶಬ್ದವು  ಮೂಷ್ (ಅಂದರೆ 'ಕದಿಯುವಿಕೆ') ಎಂಬ ಧಾತುವಿನಿಂದ ಬಂದಿದೆ. ಮೂಷಕವು ಅಂದರೆ ಆಸೆಯು ಕಳ್ಳತನದಿಂದ ಮನಸ್ಸಿನಲ್ಲಿ ಪ್ರವೇಶಿಸಿ ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ನಾಶ ಮಾಡುತ್ತದೆ. ಅದನ್ನು ದಿವ್ಯ ಜ್ಞಾನದಿಂದ ನಿಯಂತ್ರಿಸಿದಾಗಲೇ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಮನುಷ್ಯರ ಬುದ್ಧಿಯನ್ನು ಚಂಚಲ ಮಾಡುವ ಆಸೆಗಳನ್ನು ಮೂಷಕವು ಪ್ರತಿನಿಧಿಸುತ್ತದೆ. ಎಲ್ಲಾ ವಿಷಯಾಸಕ್ತಿಗೆ ಸಂಕೇತವಾಗಿರುವ ಇಲಿಯು ಹರಿತವಾದ ಬುದ್ಧಿಗೂ ಸಂಕೇತವಾಗಿದೆ. ಗಣಪತಿಯು ವಿದ್ಯೆಯ ಅಧಿದೇವತೆಯಾಗಿರುವುದರಿಂದ ಇಲಿಯನ್ನೇ ವಾಹನವನ್ನಾಗಿರಿಸಿಕೊಂಡಿರುವುದು ಸಹಜವಾಗಿದೆ.

ಮಣ್ಣಿನ ಮಗನಾಗಿ ಗಣಪತಿ.
ಮೂಲತಃ ಮಣ್ಣಿನ ಮಗನಾಗಿ ಗಣಪತಿ, ಕೃಷಿ ಅಭಿಮಾನಿಯಾದ ದೇವತೆಯೂ ಹೌದು. ಈತನ ದೊಡ್ಡ ಹೊಟ್ಟೆಯನ್ನು ಕಣಜದ ಸಂಕೇತವನ್ನಾಗಿ ನೋಡಬಹುದು. ಕಿವಿಗಳು ಮರದಂತೆ ವಿಶಾಲ. ಅವು ಒಳಿತು-ಕೆಡಕುಗಳು ಬೆರೆತ ವಿಚಾರಗಳನ್ನು ಕೇರಿ ಶುದ್ಧೀಕರಿಸುವಂತಹವುಗಳು. ಗಣಪತಿಯ ಕೈಯಲ್ಲಿರುವ ಕಬ್ಬಿನ ಜಲ್ಲೆ, ಅವನಿಗೆ ಅತ್ಯಂತ ಪ್ರಿಯವಾದ ಪತ್ರ-ಪುಷ್ಪಗಳು ಎಲ್ಲವೂ ವ್ಯವಸಾಯದ ಪ್ರತೀಕಗಳೇ. ಈತನು ಧಾನ್ಯಗಳನ್ನು ಹಾಳು ಮಾಡುವ ಮೂಷಕವನ್ನು ನಿಯಂತ್ರಿಸಿ ವಾಹನವನ್ನಾಗಿಸಿಕೊಂಡವನು. ಬೆಳೆಗಳಿಗೆ ತೊಡಕನ್ನು ತರುವ ಕಾಡುಹಂದಿ, ಆನೆ ಮೊದಲಾದವುಗಳನ್ನು ನಿಯಂತ್ರಿಸುವ ಪಾಶಾಂಕುಶಗಳು ಈತನ ಕೈಯಲ್ಲಿವೆ. ಈತನ ತಾಯಿ ಪಾರ್ವತೀ ಬೆಟ್ಟದ ಮಗಳಾದರೆ, ತಂದೆ ಪರಮೇಶ್ವರನು ಬೆಟ್ಟದ ವಾಸಿಯಾಗಿದ್ದಾನೆ. ಇವೆಲ್ಲವೂ ಗಣಪತಿಯ ಸ್ವರೂಪದಲ್ಲಿನ ಕೃಷಿ ಚಟುವಟಿಕೆಗಳಿಗೆ ಸಂಕೇತವಾಗಿದೆ. ಗಣಪತಿಯ ಮಣ್ಣಿನ ಮೂರ್ತಿಯೇ ಶ್ರೇಷ್ಟ ಎನ್ನುವುದರ ಹಿನ್ನೆಲೆ ಇದೇ.

ಇಂದಿನ ಯುಗದ ನಾಯಕತ್ವದ ಸಮಸ್ತ ಗುಣಗಳಿಗೂ ಗಣಪತಿಯು ಆದರ್ಶಪ್ರಾಯನಾಗಿರುವನು. ಒಳ್ಳೆಯ ಮಾತು, ಪ್ರಚಂಡ ಬುದ್ಧುಶಕ್ತಿ, ಕಲಾ ಪ್ರೌಢಿಮೆ, ಇಂದ್ರಿಯನಿಗ್ರಹ, ವ್ಯವಹಾರ ಚಾತುರ್ಯ ಎಲ್ಲವೂ ಇವನ ಸ್ವತ್ತು. ಇದೇ ಕಾರಣಕ್ಕೆ ಇವನು ವಿಶ್ವನಾಯಕನೂ ಹೌದು. 

(ಮುಗಿಯಿತು) 

ಚಿತ್ರ ಕೃಪೆ: ಪವಿತ್ರ

2 comments:

  1. ಗಣಪತಿಯ ಬಗೆಗೆ ಚೆನ್ನಾಗಿ ಬರೆದಿದ್ದಿರ
    ವಿಘ್ನರಾಜೋ ನಮೋಸ್ತುತೆ

    ReplyDelete
  2. ಡಾ. ಗುರು,
    ಧನ್ಯವಾದಗಳು.

    -ಅನಿಲ್

    ReplyDelete