My Blog List

Friday, February 12, 2010

ನಿರಾಕಾರ ಸ್ವರೂಪ ಪರಶಿವ.

ಮಂಜುನಾಥ.
ವೇದಕಾಲಗಳಿಂದಲೂ ಶಿವನು 'ಪಶುಪತಿ' ಆಗಿ ಆರಾಧನೆಗೊಳ್ಳುತ್ತಾ ಬಂದಿದ್ದಾನೆ. ಪ್ರಳಯದ ನಂತರ ಮತ್ತೆ ಸೃಷ್ಟಿರಚನೆಗೆ ಮೊದಲು ಯಾರಲ್ಲಿ ವಿಶ್ವವು ನಿದ್ದೆ ಮಾಡುತ್ತದೆಯೋ (शॆतॆ अस्मिन्निति शिवः) ಆತನೇ ಶಿವ ಎಂಬುದು ವಾಚ್ಯಾರ್ಥ. ಜನಿಸಿದೆಲ್ಲವೂ ಮರಣ ಹೊಂದಲೇಬೇಕು, ನಾಶವಾಗಲೇಬೇಕು. ಇದು ಸೃಷ್ಟಿಯ ನಿಯಮ. ಇದನ್ನು ಸಂಕೇತಿಸುವ ಶಕ್ತಿಯೇ ಶಿವ. ಶಿವ ಎಂಬ ಪರಿಕಲ್ಪನೆಯ ಅರ್ಥ ಇಷ್ಟಕ್ಕೇ ಸೀಮಿತವಾದದ್ದಲ್ಲ. ಅಂತ್ಯವಿಲ್ಲದ ಶೂನ್ಯದೊಳಗೆ ವಿಲೀನಗೊಳ್ಳುವುದೇ ಜಗತ್ತಿನ ಅವಸಾನ, ಅದುವೇ ಲಯ. ಈ ಮಹಾಶೂನ್ಯವನ್ನು ವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಇದರ ಸ್ವರೂಪವೇ ಪರಶಿವ. ತಮಿಳುನಾಡಿನ ಚಿದಂಬರಂ ಕ್ಷೇತ್ರ ಬಹಳ ಪ್ರಖ್ಯಾತವಾದದ್ದು. ಅಲ್ಲಿನ ದೇಗುಲದ ಗರ್ಭಗುಡಿಯಲ್ಲಿ ಉಳಿದ ಶಿವಾಲಯಗಳಂತೆ ಶಿವಲಿಂಗವಿಲ್ಲ. ಗರ್ಭಗುಡಿ ಬರಿದಾಗಿದ್ದು ಗೋಡೆಯ ಮೇಲೆ ಚಕ್ರವೊಂದರ ನಿರೂಪಣೆ ಇದೆ. ಇಲ್ಲಿರುವುದು ಆಕಾಶ ಲಿಂಗ (ಆಕಾಶವನ್ನು ಶೂನ್ಯಕ್ಕೆ ಹೋಲಿಸಿದ್ದಾರೆ) ಎಂದು ಪ್ರತೀತಿ. ಅದರ ಮುಂದೆ ತೆರೆಯನ್ನೆಳೆದಿದ್ದಾರೆ. ಪೂಜೆಯ ಕೆಲವು ಸಂದರ್ಭಗಳಲ್ಲಿ ಮಾತ್ರ ಇದನ್ನು ಪಕ್ಕಕ್ಕೆ ಸರಿಸುತ್ತಾರೆ. ಇದೇ 'ಚಿದಂಬರ ರಹಸ್ಯ' ಎಂದು ಪ್ರಖ್ಯಾತವಾಗಿದೆ. ಆಕಾರವು ಮನುಷ್ಯನ ಗ್ರಹಿಕೆಗೆ ಎಟುಕಲು ಮಾತ್ರ ರೂಪುಗೊಂಡಿದೆ. ಪರಮಾತ್ಮನ ನಿಜಸ್ವರೂಪ ರೂಪ ರೂಪಗಳನ್ನು ಮೀರಿದ್ದು ಎಂಬ ಅರ್ಥ ಇಲ್ಲಿದೆ. ರೂಪಾತೀತ ಸ್ಥಿತಿಯೇ ಶಿವನ ನಿಜವಾದ ಸ್ವರೂಪ.

ಶಿವನ ಸ್ವರೂಪಗಳು.
ನಿರಾಕಾರಮಯನಾದ ಶಿವನ ಆರಾಧನೆಯಲ್ಲಿ ಶಾಂತ ಸ್ವರೂಪವನ್ನು ಕಾಣಬಹುದಾಗಿದ್ದು, ಪ್ರಳಯ ಸ್ವರೂಪವಾದ ರುದ್ರನೆಂಬ ಇನ್ನೊಂದು ಆಕಾರವೂ ಇದೆ. ಶಿವನು ಒಂದು ರೂಪದಲ್ಲಿ ಶ್ವೇತವರ್ಣನಾಗಿದ್ದರೆ, ಇನ್ನೊಂದು ರೂಪದಲ್ಲಿ ಕಡು ನೀಲಿಬಣ್ಣವನ್ನು ಹೊಂದಿದ್ದಾನೆ. ಪರಸ್ಪರ ವಿರುದ್ಧ ಎನಿಸಬಹುದಾದ ಈ ಗುಣಗಳು ಶಿವನಿಗಿರುವುದು ಆಶ್ಚರ್ಯಕರ ಎನಿಸಬಹುದು. ಆದರೆ, ಎಲ್ಲಾ ವರ್ಣಗಳನ್ನು ಬೇರ್ಪಡಿಸಲಾಗದಂತೆ ಪಡೆದಿರುವ ಇವನ ನಿರಾಕಾರವು ಅಸಂಖ್ಯ ಆಕಾರಗಳ ಪೂರ್ಣ ಸ್ವರೂಪವೂ ಆಗಿದೆ. ಹೀಗಾಗಿ ನೋಡುವವರ ಭಾವಕ್ಕೆ ತಕ್ಕ ಬಣ್ಣಗಳಲ್ಲಿ ಶಿವನು ಕಂಡಿದ್ದಾನೆ. ಮುಕ್ಕಣ್ಣನೆಂದು ಹೆಸರಾದ ಶಿವನಿಗಿರುವ ಮೂರು ಕಣ್ಣುಗಳು ಸೂರ್ಯ, ಚಂದ್ರ ಮತ್ತು ಅಗ್ನಿ ಇವುಗಳ ಸಂಕೇತ. ಇವು ಬೆಳಕು, ಜೀವ ಮತ್ತು ಶಾಖದ ಮೂಲ ಆಕಾರಗಳೂ ಹೌದು. ಹಾಗೇ‌ಸಾಮಾನ್ಯ ಕಣ್ಣುಗಳನ್ನು ಮೀರಿದ ಶಿವನ ಮೂರನೆಯ ಕಣ್ಣು, ಜ್ಞಾನ ನೇತ್ರ. ಅದು ವಿವೇಕದ ಸಂಕೇತ. ಅದು ಯಾವಾಗಲೂ ಮುಚ್ಚಿಕೊಂಡಿರುತ್ತದೆ. ತೆರೆದರೆ ಮಹಾ ಪ್ರಳಯವೇ ಆಗಿ ಬಿಡುತ್ತದೆ ಎಂಬಲ್ಲಿ ಜ್ಞಾನ ಮತ್ತು ವಿವೇಕಗಳು ಒಟ್ಟಾಗಿ ಇರಬೇಕಾದ ಸರ್ವ ವ್ಯಾಪಕತೆಯ ಗುಣವನ್ನು ಗಮನಿಸಬಹುದು.

ಸೂರ್ಯ-ಚಂದ್ರರೇ ಶಿವನ ಸಹಜ ಕಣ್ಣುಗಳಾದರೆ ಪ್ರಚಂಡವಾಗಿ ಬೀಸುತ್ತಿರುವ ಗಾಳಿಸಹಿತವಾದ ಇಡೀ ಆಕಾಶವು ಅವನ ತಲೆಗೂದಲಾಗುತ್ತದೆ. ಆದ್ದರಿಂದಲೇ ಅವನಿಗೆ 'ವ್ಯೋಮಕೇಶ' (ಆಕಾಶವನ್ನೇ ತಲೆಗೂದಲಾಗಿ ಉಳ್ಳವನು) ಎಂದು ಕರೆಯುತ್ತಾರೆ. ಹುಲಿಯು ಆಕ್ರಮಣಕಾರಿಯಾದ ಪ್ರಾಣಿ. ಅಸಹಾಯಕ ಬಲಿಪಶುಗಳನ್ನು ನಿರ್ದಾಕ್ಷಿಣ್ಯವಾಗಿ ಬಗೆದು ತಿನ್ನುವ ಕ್ರೂರಿ. ಇದನ್ನು ಎಂದಿಗೂ ತೃಪ್ತಿಗೊಳ್ಳದೆ ಮಾನವರನ್ನು ಸದಾ ಬಲಿ ತೆಗೆದುಕೊಳ್ಳುತ್ತಿರುವ 'ಆಸೆ'ಗಳಿಗೆ ಹೋಲಿಸಬಹುದು. ಹುಲಿಯನ್ನು ಕೊಂದು ಅದರ ಚರ್ಮವನ್ನು ಧರಿಸಿರುವ ಶಿವನು ಆಸೆಯನ್ನು ಮೆಟ್ಟಿ ನಿಂತಿರುವ ಮನೋಸ್ಥಿತಿಯ ಸಂಕೇತ.

ಆನೆ, ಪ್ರಾಣಿಗಳಲ್ಲೇ ಅತ್ಯಂತ ಬಲಿಷ್ಠವಾದದ್ದು. ಶಿವನು ಅದರ ಚರ್ಮವನ್ನು ಧರಿಸಿ ಎಲ್ಲಾ ಬಗೆಯ ಪಶುಭಾವಗಳನ್ನು ಜಯಿಸಿರುವ ಸ್ಥಿತಿಯನ್ನು ಪ್ರತಿಬಿಂಬಿಸುತ್ತಾನೆ. ಶಿವನು ಧರಿಸಿರುವ ತಲೆಬುರುಡೆಗಳ ಹಾರ ಮತ್ತು ಚಿತಾಭಸ್ಮಧಾರಣೇ ಅವನು ವಿನಾಶದ ಪ್ರಭು ಎಂದು ಸೂಚಿಸುತ್ತದೆ. ತಲೆಬುರುಡೆಗಳ ಮೂಳೆಯು ಕಾಲಪ್ರವಾಹದ ಆವರ್ತಗಳನ್ನು, ಸೃಷ್ಟಿ-ಸ್ಥಿತಿ-ಲಯಗಳ ನಿರಂತರವಾದ ಕಾಲಚಕ್ರವನ್ನು ಸೂಚಿಸುತ್ತದೆ. ಹೀಗೆ ಶಿವನ ಸ್ವರೂಪದಲ್ಲಿ ತಾತ್ತ್ವಿಕತೆಯನ್ನು ಕಾಣಬಹುದು. 
(ಇನ್ನೂ ಇದೆ) 

2 comments:

  1. ಅನಿಲ್...
    ನಿಮ್ಮ ಆಧ್ಯಾತ್ಮ ಬರಹಗಳ ಮಾಲೆಯ ನಿರೂಪಣೆ ಅತ್ಯಂತ ಸುಂದರವಾಗಿದೆ... ಹೀಗೇ ಮುಂದುವರೆಯುತ್ತಿರಲಿ.... ಆ ನಿರಾಕಾರನಾದ ಈಶ್ವರನು ನಿಮಗೆ ಸನ್ಮಂಗಳವನ್ನುಂಟು ಮಾಡಲಿ.......

    ReplyDelete
  2. ಅನಿಲ್...
    ಈ ಕೊಂಡಿ ಕೇಳಿ... ಭೋ ಶಂಭೋ ಶಿವಶಂಭೋ ಸ್ವಯಂಭೋ... ರೇವತಿ ರಾಗದಲ್ಲಿ....
    http://www.youtube.com/watch?v=U6CSSU_gbqU
    ಶ್ಯಾಮಲ

    ReplyDelete