My Blog List

Wednesday, April 07, 2010

ಯೋಗಮೂರ್ತಿ ಪರಶಿವ.

ಯೋಗಮೂರ್ತಿ ಪರಶಿವ. 



ಪರಶಿವನು ಯೋಗ ಮತ್ತು ಯೋಗಿಗಳ ಒಡೆಯನು. ಗಾಢ ಧ್ಯಾನದಲ್ಲಿರುವ, ಅಂತರ್ಮುಖಿಯಾಗಿ ಆನಂದದಿಂದಿರುವ ಶಿವನ ಚಿತ್ರಣವು ಬಹಳ ಪ್ರಖ್ಯಾತವಾದದ್ದು. ಶಿವನ ಜಟೆಯಿಂದ ಹರಿದು ಬರುತ್ತಿರುವ ಗಂಗೆಯ ಧಾರೆ ಈ ಪೂರ್ಣತೆಯಿಂದ ಬಂದ ಪಾವಿತ್ರ್ಯದ ಸಂಕೇತ. ಅದು ನಿರಂತರ ಜ್ಞಾನ ಪ್ರವಾಹವನ್ನು ಸೂಚಿಸುತ್ತದೆ. ಈಶನ ಶಿರದಲ್ಲಿರುವ ಚಂದ್ರ, ಕಾಲ ಲೆಕ್ಕಾಚಾರದ ಸಂಕೇತ. ಭಾರತೀಯ ಪಂಚಾಂಗಕ್ಕೆ ಚಂದ್ರನ ಚಲನೆಯಿಂದ ಉಂಟಾಗುವ ಶುಕ್ಲ ಮತ್ತು ಕೃಷ್ಣ ಪಕ್ಷಗಳೇ ಆಧಾರವಾಗಿರಿವ ಎಣಿಕೆಯ ಕ್ರಮ. ಇಂತಹ ಚಂದ್ರನನ್ನೇ ಶಿರದಲ್ಲಿ ಧರಿಸಿ ಶಿವನು, ಕಾಲವು ತನಗೆ ಆಭರಣವೇ ಹೊರತು ಅದಕ್ಕಿಂತ ಹೆಚ್ಚಿನದಲ್ಲ ಎಂದು ಧ್ವನಿಸುತ್ತಾನೆ. ಸಾವಿನ ರೂಪವೇ ಆಗಿರುವ ಘಟ ಸರ್ಪವೂ ಅವನ ಅಲಂಕಾರವೇ. ಶಿವನು ಹಾಲಾಹಲದಂತಹ ಘೋರ ವಿಷವನ್ನೇ ಕುಡಿದು ಜಗವನ್ನು ರಕ್ಷಿಸಿದವನು. ರೂಪವಿರುವುದಕ್ಕೆಲ್ಲ ಅಂತ್ಯವಿರುತ್ತದೆ. ಆದರೆ, ರೂಪವನ್ನು ಮೀರಿದ ಶಿವನಿಗೆ ಅಂತ್ಯದ ಪ್ರಶ್ನೆಯೇ ಇಲ್ಲ. ಇವೆಲ್ಲದರ ಮೂಲಕವೇ ಶಿವನು ಸಾವನ್ನು ಶಾಶ್ವತವಾಗಿ ಜಯಿಸಿದವನಾಗಿ ಮೃತ್ಯುಂಜಯ ಎಂಬ ಹೆಸರನ್ನು ಪಡೆದಿದ್ದಾನೆ. ಶಿವನಿಗೆ ಆಭರಣವಾಗಿರುವ ಮಂಡಲಾಕಾರದ ಸರ್ಪಗಳು ಜೀವ ಜಗತ್ತಿನಲ್ಲಿ ಸೂಕ್ಷ್ಮವಾಗಿರುವ ಲೈಂಗಿಕತೆಯ ಸಂಕೇತ. ಇವುಗಳ ನಿಯಂತ್ರಣವನ್ನು ಬಿಂಬಿಸುವ ಶಿವನ ರೂಪ ಆತ ಶಕ್ತಿಯ ಒಡೆಯ ಕೂಡ ಹೌದು ಎನ್ನುವುದಕ್ಕೆ ನಿದರ್ಶನವಾಗಿದೆ.

ತ್ರಿಶೂಲ ಮತ್ತು ಡಮರುಗ.
ತ್ರಿಶೂಲವು ಶಿವನ ಪ್ರಮುಖವಾದ ಆಯುಧ. ಇದರಲ್ಲಿ ರಕ್ಷಣೆ ಮತ್ತು ಆಕ್ರಮಣ ಎರಡೂ ಗುಣಗಳಿವೆ. ಇವೆರಡನ್ನು ಏಕ ಕಾಲದಲ್ಲಿ ಸಾಧಿಸುವ ಈ ತ್ರಿಶೂಲದಲ್ಲಿರುವ ಮೂರು ಮೊನೆಗಳು ತತ್ತ್ವಶಾಸ್ತ್ರದ ತ್ರಿಗುಣಗಳನ್ನು ಬಿಂಬಿಸುತ್ತವೆ. ಸೃಷ್ಟಿ - ಸ್ಥಿತಿ - ಲಯಗಳು ಜಗತ್ತಿನ ಸ್ಥಾಯಿ ಗುಣಗಳು. ಇವುಗಳನ್ನು ಅರಿತರೆ ರಕ್ಷಣೆ ಮತ್ತು ಮರೆತರೆ ಆಕ್ರಮಣ ಎಂಬ ವೇದಾಂತವನ್ನು ತ್ರಿಶೂಲ ಪ್ರತಿನಿಧಿಸುತ್ತದೆ.

ಶಿವನ ಆಕಾರಗಳಲ್ಲಿ ಬಹಳ ಮುಖ್ಯವಾದದ್ದು ತಾಂಡವ ನೃತ್ಯ ಭಂಗಿ ಅಥವಾ ನಟರಾಜನ ಸ್ವರೂಪ. ಈ ಸ್ವರೂಪವು ನಿರಂತರವಾದ ಕಾಲಕ್ಕೆ ಸಂಕೇತವಾಗಿದೆ. ಶಿವನ ತಾಂಡವ ನೃತ್ಯ ಮಾಡುತ್ತಿರುವಾಗ ತನ್ನ ಡಮರುಗಗಳನ್ನು ಹದಿನಾಲ್ಕು ಬಾರಿ ನುಡಿಸಿದನೆಂದೂ, ಅದು ಆ - ಇ - ಉಣ್ - ಋ - ಲೃ - ಕ್ ಮೊದಲಾದ ಬೀಜಾಕ್ಷರಗಳು ಮೂಡಿದವೆಂದು ಪ್ರತೀತಿ. ಇದಕ್ಕೆ ಮಾಹೇಶ್ವರ ಸೂತ್ರಗಳು ಎಂದು ಹೆಸರು. ಈ ಬೀಜಾಕ್ಷರಗಳಿಂದ ಜಗತ್ತಿನ ಎಲ್ಲಾ ಭಾಷೆ ಮತ್ತು ಅವುಗಳ ವ್ಯಾಕರಣ ರೂಪಗೊಳ್ಳುವುದರಿಂದ ಡಮರುಗವನ್ನು ಭಾಷೆಯ ಪ್ರತಿನಿಧಿ ಎಂದು ಕರೆಯಬಹುದು ಅಥವಾ ಬರಹರೂಪದಲ್ಲಿ ಜ್ಞಾನವನ್ನು ಹಿಡಿದಿಡುವ ಕಾರ್ಯಕ್ಕೆ ಇದನ್ನು ರೂಪಕವಾಗಿ ನೋಡಬಹುದು. 

ಒಂದೆಡೆ ಹೀಗೆ ನಾಗರೀಕವಾದ ಕಲೆ-ವಿಜ್ಞಾನಗಳ ನೆಲೆಯಾದ ಭಾಷೆಯನ್ನು ಡಮರುಗ ಸೂಚಿಸುತ್ತಿದ್ದರೆ, ಇನ್ನೊಂದು ಹಸ್ತದಲ್ಲಿರುವ ಖಟ್ಟಾಂಗ (ಒಂದು ತುದಿಯಲ್ಲಿ ತಲೆ ಬುರುಡೆಯನ್ನು ಹೊಂದಿರುವ ಮಂತ್ರದಂಡ) ಪ್ರಕೃತಿ ಸಹಜವಾದ ಮೂಲ ಸ್ವರೂಪಿ ಜ್ಞಾನವನ್ನು ಪ್ರಧಾನವಾಹಿನಿಗೆ ತರಬಲ್ಲ ಸಾಮರ್ಥ್ಯವನ್ನು ಸೂಚಿಸುತ್ತದೆ. ಹೀಗೆ ಶಿವ ಸಹಜತೆ ಮತ್ತು ನಾಗರೀಕತೆ ಎರಡರ ಸಮನ್ವಯ ಮೂರ್ತಿಯಾಗಿದ್ದಾನೆ. ಶಿವನ ಕೈಯಲ್ಲಿರುವ ದರ್ಪಣ, ಇಡೀ ಸೃಷ್ಟಿಯೇ ಅದರಲ್ಲಿ ಅಡಕವಾಗಿ ಎಲ್ಲವೂ ಶಿವಮಯವಾಗಿರುವುದನ್ನು ಸೂಚಿಸುತ್ತದೆ. ಶಿವನು ಕೇವಲ ಜ್ಞಾನದ ಸಂಕೇತ ಮಾತ್ರವಲ್ಲ, ಕಲಿಕೆಗೆ ಹೆಗ್ಗುರುತು ಕೂಡ ಹೌದು. ಜಗತ್ತಿನೆಲ್ಲೆಡೆ ಜ್ಞಾನವನ್ನು ಹರಡಿದ ಋಷಿಗಳಿಗೆ ಜ್ಞಾನದ ಪ್ರಾಥಮಿಕ ಪಾಠ ಕಲಿಸಿದವನು ಶಿವನೇ! ಅವನು ದಕ್ಷಿಣ ದಿಕ್ಕಿನಲ್ಲಿ ಕುಳಿತು ವಿದ್ಯೆ ಕಲಿಸಿದ್ದರಿಂದ 'ದಕ್ಷಿಣಾಮೂರ್ತಿ' ಎಂಬ ಹೆಸರೂ ಇದೆ.


ಚಿತ್ರ ಕೃಪೆ: ಶ್ರೀನಿವಾಸ್