My Blog List

Sunday, July 11, 2010

'ದಶಾವತಾರ' ಪರಿಕಲ್ಪನೆಯ ಹಿಂದಿನ ಅಂತರಾರ್ಥ.

ವಿಷ್ಣುವಿನ ಅವತಾರಗಳಲ್ಲಿ ಹತ್ತು ಅವತಾರಗಳನ್ನು 'ದಶಾವತಾರ' ಎಂದು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ಮೊದಲ ಮೂರು ಅವತಾರಗಳು ಮತ್ಸ್ಯ, ಕೂರ್ಮ, ವರಾಹ ಅವತಾರಗಳನ್ನು ಸಾಂಕೇತಿಕ ಅವತಾರ ಎಂದು ಕರೆಯುತ್ತಾರೆ. ಈ ರೂಪದಲ್ಲಿ ವಿಷ್ಣುವಿನ ಪೂಜೆಯಾಗುವುದು ಅಪರೂಪವೇ. ಪ್ರಳಯದಿಂದ ಕಾಪಾಡಿದ ಎಂದು ನಂಬಲಾದ ಮತ್ಸ್ಯ ಅವತಾರ ಚಲನೆಯನ್ನು ಸೂಚಿಸಿದರೆ, ಸಮುದ್ರ ಮಥನಕ್ಕೆ ಆಧಾರವಾದ ಕೂರ್ಮಾವತಾರ ಸ್ಥಿತಿಯನ್ನು ಸೂಚಿಸುತ್ತದೆ. ಹಾಗೆಯೇ, ಭೂಮಿಯನ್ನು ತನ್ನ ಕೋರೆಗಳಿಂದ ಎತ್ತಿದ ಎಂದು ವಿವರಿಸಲಾದ ವರಾಹವು, ಕ್ರಿಯೆಯನ್ನು ಸೂಚಿಸುವ ಅವತಾರ. ಚಲನೆ, ಸ್ಥಿತಿ ಮತ್ತು ಕ್ರಿಯೆಗಳು ಸೃಷ್ಟಿಯ ಬಹುಮುಖ್ಯ ಲಕ್ಷಣಗಳೆಂಬುದನ್ನು ಈ ಅವತಾರಗಳು ಸೂಚಿಸುತ್ತದೆ. ಇನ್ನು ನರಸಿಂಹ, ವಾಮನ, ಪರಶುರಾಮ. ಈ ಮೂರು ಅವತಾರಗಳನ್ನು ಅರ್ಧಾವತಾರಗಳು ಎಂದು ಕರೆಯುತ್ತಾರೆ. ನರಸಿಂಹ ಅವತಾರದಲ್ಲಿ ಪ್ರಹ್ಲಾದನನ್ನು, ಅವನ ತಂದೆ, ಹಿರಣ್ಯ ಕಶ್ಯಪುವೇ ಹಿಂಸಿಸುತ್ತಿರುವಾಗ ಮಹಾವಿಷ್ಣು ಅರ್ಧಸಿಂಹ ಮತ್ತು ಅರ್ಧ ಮಾನವನ ರೂಪತಾಳಿ, ಹಿರಣ್ಯ ಕಶ್ಯಪುವನ್ನು ಸಂಹರಿಸುತ್ತಾನೆ. ಸಿಂಹ ಪ್ರಾಣಿಗಳಲ್ಲೇ ಬಲಿಷ್ಠವಾದದ್ದು. ಅದಕ್ಕೆ ವೀರ ಗುಣವುಳ್ಳ ಮಾನವ ದೇಹವೂ ಸೇರಿದರೆ ಸರ್ವಶಕ್ತಿ ಜೊತೆಗೂಡಿದಂತೆಯೇ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬುದ್ಧಿಯಲ್ಲಿ ಮಾನವ ಮಿಗಿಲು ಎಂಬುದು ಸಹಜವಾದ ಎಣಿಕೆ. ಆದರೆ, ನರಸಿಂಹ ಅವತಾರದಲ್ಲಿ ತಲೆ ಪ್ರಾಣಿಯದಾಗಿದ್ದು, ದೇಹ ಮಾನವನದು. ಇದು ಅವತಾರದ ಅರ್ಧಸ್ವರೂಪಕ್ಕೆ ನಿದರ್ಶನವಾದಂತೆ ಅದು ಆವೇಶದ ಅಭಿವ್ಯಕ್ತಿ ಎಂಬುದನ್ನು ಸೂಚಿಸುತ್ತದೆ. ಇನ್ನು ವಾಮನ ಬಲಿಯನ್ನು ತ್ರಿವಿಕ್ರಮ ರೂಪತಾಳಿ ಪಾತಾಳಕ್ಕೆ ತಳ್ಳಿದ ಅವತಾರ. ಇಲ್ಲಿ ವಾಮನ ಮತ್ತು ತ್ರಿವಿಕ್ರಮ ಎರಡೂ ಒಂದೇ ಶಕ್ತಿಯ ರೂಪಗಳು ಎಂಬುದನ್ನು ಗಮನಿಸಬೇಕು. ನೋಡಲು ವಾಮನನಂತಿದ್ದರೂ, ಅವನಲ್ಲಿ ತ್ರಿವಿಕ್ರಮಶಕ್ತಿ ಅಡಗಿರಬಹುದು ಎಂಬುದನ್ನು ಈ ಅವತಾರವು ಸೂಚಿಸುತ್ತದೆ. ಪರಶುರಾಮನು ತನ್ನ ಅವತಾರದಲ್ಲಿ ಪ್ರಜಾಪೀಡಕರಾದ ಕ್ಷತ್ರಿಯರನ್ನೆಲ್ಲ ನಾಶ ಮಾಡಿದ ಚಿತ್ರ ಕಣ್ಮುಂದೆ ಬರುತ್ತದೆ. ಆಡಳಿತ ನಡೆಸುವವರು ಅಹಂಕಾರ ತೋರಿದರೆ, ಭಗವಂತನು ಅವರನ್ನು ಶಿಕ್ಷಿಸುತ್ತಾನೆ ಎಂಬುದನ್ನು ಇದು ತೋರಿಸುತ್ತದೆ. ಅಷ್ಟೇ‌ ಅಲ್ಲ, ಮುಂದಿನ ಅವತಾರದಲ್ಲಿ ವಿಷ್ಣುವು ಕ್ಷತ್ರಿಯನಾಗಿಯೇ ಜನಿಸುತ್ತಾನೆ. ಇದು ಈ ಪ್ರಕ್ರಿಯೆಯಲ್ಲಿರುವ ಸಂಕೀರ್ಣತೆಗೆ ನಿದರ್ಶನವಾಗಿದೆ. ಈ ಮೂರು ಅವತಾರಗಳಲ್ಲಿ ಸಂದೇಶವಿದೆ. ಆದರೆ ಭಗವಂತನ ಸ್ವರೂಪ ಇಲ್ಲೆಲ್ಲ ಸೀಮಿತ ಅವಧಿಯಲ್ಲಿ ಬಂದು ಹೋಗುತ್ತದೆ. ಹಾಗಾಗಿಯೇ ಇವುಗಳನ್ನು ಅರ್ಧಾವತಾರಗಳು ಎಂದು ಹೇಳಲಾಗುವುದು. ಇವನ್ನೆಲ್ಲಾ ಆವೇಶಾವತಾರ ಅಥವಾ ವಿಷ್ಣುವು ತಾತ್ಕಾಲಿಕವಾಗಿ ಧರಿಸಿದ್ದ ಅವತಾರ ಎಂದು ವಿಶ್ಲೇಷಿಸುವುದೂ ಇದೆ.

ರಾಮ, ಕೃಷ್ಣರನ್ನು, ವಿಷ್ಣುವಿನ ಪೂರ್ಣಾವತಾರಗಳು ಎಂದು ಹೇಳಲಾಗುತ್ತದೆ. ವಿಷ್ಣುವು ಹೆಚ್ಚಾಗಿ ಪೂಜಿತನಾಗುವುದು ಈ ರೂಪಗಳಲ್ಲೇ. ಶ್ರೀರಾಮನ ಜೀವನ ಚಿತ್ರಣವೇ ಆದರ್ಶದ ಪ್ರತಿರೂಪವಾಗಿದೆ. ಜೀವನದ ವಿವಿಧ ಸವಾಲುಗಳನ್ನು, ಮಾನವನು ಹೇಗೆ ಎದುರಿಸಬೇಕು ಎಂಬುದನ್ನು ಸ್ವತಃ ಭಗವಂತನೇ ಅಭಿನಯಿಸಿ ತೋರಿಸಿದ ಅವತಾರಗಳೇ ಇವು. ಶ್ರೀರಾಮನ ಅವತಾರದಲ್ಲಿ ಬಹಳ ಮುಖ್ಯವಾಗಿ ಕಾಣುವುದು ಕೌಟುಂಬಿಕ ಚಿತ್ರಣ. ಶ್ರೀರಾಮನೊಬ್ಬನೇ ಎಲ್ಲಿಯೂ ಪೂಜಿತನಾಗುವುದಿಲ್ಲ. ಸೀತೆ, ಲಕ್ಷ್ಮಣ, ಹನುಮಂತ, ರಾಮನ ಜೊತೆಯಲ್ಲಿ ಇರುತ್ತಾರೆ. ಕೆಲವೊಮ್ಮೆ ಭರತ ಮತ್ತು ಶತ್ರುಘ್ನ ಕೂಡ ಜೊತೆಗಿರುತ್ತಾರೆ. ಇಂತಹ ತುಂಬಿದ ಕುಟುಂಬವೇ‌ ರಾಮಾವತಾರದ ಸಂದೇಶ. ರಾಮಾಯಣದಲ್ಲಿ ಕುಟುಂಬ ಎಂಬುದು ವಿಶಾಲವಾದ ನೆಲೆಯಲ್ಲಿ ಚರ್ಚಿತವಾಗಿದೆ. ಅದು ಒಂದು ಸಂಸಾರಕ್ಕೆ ಸೀಮಿತವಾದ ಕಲ್ಪನೆಯಲ್ಲ. ಇಡೀ ಮನುಕುಲವೇ ಒಂದು ಎಂಬ ಉನ್ನತ ನೆಲೆಯದು. ಹೀಗಾಗಿ ಅಲ್ಲಿ ಹನುಮಂತ, ಸುಗ್ರೀವ, ಜಾಂಬುವಂತರಂತಹ ವೀರರಿಗೆ ಮಾತ್ರವಲ್ಲ, ಅಳಿಲಿಗೂ ಒಂದು ಮಹತ್ತರ ಸ್ಥಾನವಿದೆ. ಬೇಜವಾಬ್ದಾರಿಯ ಅಗಸನ ಮಾತಿಗೂ ಇಲ್ಲಿ ಒಂದು ಬೆಲೆ ಇದೆ. ಈ ಅರ್ಥದಲ್ಲಿ ಪರಿಪೂರ್ಣತೆ ರಾಮಾವತಾರಕ್ಕೆ ಇದೆ. ಅಷ್ಟೇ‌ ಅಲ್ಲ, ಆಕಾರದಲ್ಲಿಯೂ ಶ್ರೀರಾಮನು ಪರಿಪೂರ್ಣ ಪುರುಷಾಕೃತಿ ಎಂಬುದು ಇಲ್ಲಿ ಗಮನಾರ್ಹ. ಅದಕ್ಕಾಗಿ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ನಮ್ಮ ಜೀವನದಲ್ಲಿ ನಡೆ-ನುಡಿಗಳು ಒಂದೇ ರೀತಿಯಿದ್ದರೆ, ಮಾದರಿಯಾಗಿ ಇತರರಿಗೆ ಸಂದೇಶವಾಗಬಲ್ಲದೇ ವಿನಾ ಕೇವಲ ಆಚರಣೆ ಇಲ್ಲದ ಉಪದೇಶದಿಂದಲ್ಲ ಎಂಬ ಸಂದೇಶ ಶ್ರೀರಾಮನ ಅವತಾರದಲ್ಲಿದೆ.

ಶ್ರೀಕೃಷ್ಣನು ಸಮುದಾಯದ ದೇವತೆ. ಈ ಅವತಾರದ ವ್ಯಾಪ್ತಿಯೂ ಬಹಳ ದೊಡ್ಡದು. ಇವನನ್ನು ಅವತಾರವೆನ್ನದೆ ವಿಷ್ಣುವಿನ ಪರಿಪೂರ್ಣ ಅಂಶವೆಂದೇ ಕರೆಯುವುದೂ ಇದೆ. ಶ್ರೀಕೃಷ್ಣನ ಅವತಾರದ ವೈಶಿಷ್ಟ್ಯವೆಂದರೆ, ಈತ, ತಾನೇ ಘಟನಾವಳಿಯ ಕೇಂದ್ರವಾಗಿ, ಸಾಧಿಸಿದ್ದಕ್ಕಿಂತಲೂ ಹೆಚ್ಚಾಗಿ, ಯಾರಿಂದ ಯಾವ ಕೆಲಸವನ್ನು ತೆಗೆದುಕೊಳ್ಳಬೇಕು ಎಂಬ ಕುಶಲಿಯಾಗಿ ಕಾಣಿಸುತ್ತಾನೆ. ರಾಜನೀತಿ ತಜ್ಞನನ್ನಾಗಿ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಇಡೀ ಮಹಾಭಾರತವೇ‌ ಇದೆ. ಕೃಷ್ಣನ ಬಾಲಲೀಲೆಗಳಲ್ಲಿಯೇ‌ ಅಸುರ ಸಂಹಾರದ ಕಥೆಗಳು ಹಾಸು ಹೊಕ್ಕಾಗಿ ಬಂದಿವೆ. ಸೃಷ್ಟಿ ವ್ಯಾಪಾರವನ್ನು ಮುಗಿಸಿ, ಆಲದೆಲೆಯ ಮೇಲೆ ಮಲಗಿ, ನಿಶ್ಚಿಂತೆಯಿಂದ ನೀರಿನ ಮೇಲೆ ತೇಲುತ್ತಾ, ತಾನು ಆಡುತ್ತಿರುವ ಜೀವನ ನಾಟಕವನ್ನು ನೆನೆಸಿಕೊಂಡು ಆನಂದ ಪಡುವ ಬಾಲಕೃಷ್ಣನ ಚಿತ್ರ ಚಿರಪರಿಚಿತ. ಇದು ಶ್ರೀಕೃಷ್ಣಾವತಾರದ ಸಂದೇಶವೂ ಹೌದು. ಸಂಸಾರದೊಳಗಿದ್ದು ಇಲ್ಲದಂತೆ, ಸಕಲವೂ ತಾನಾಗಿಯೂ, ಸಕಲವನ್ನು ಅನುಭವಿಸುತ್ತಾ ಸ್ಥಿತಪ್ರಜ್ಞನಾಗುವ ಜ್ಞಾನಿಯ ಚಿತ್ರಣ ಇಲ್ಲಿದೆ. ಭಾರತೀಯ ಚಿಂತನಾ ಪರಂಪರೆಯ ಸಾರವೇ ಆಗಿರುವ ಭಗವದ್ಗೀತೆಯ ಬೋಧಕನೇ ಶ್ರೀಕೃಷ್ಣ. ಬದುಕಿನ ಸಾರವನ್ನೇ ಹೇಳುವ ಈ ಗ್ರಂಥವು, ಕೃಷ್ಣಾವತಾರದ ಸಾರರೂಪವೂ‌ ಆಗಿದೆ. ಉಳಿದಂತೆ ಚಾರಿತ್ರಿಕವಾದ ಬುದ್ಧನನ್ನ್ನು ಒಂಭತ್ತನೆಯ ಅವತಾರವೆಂದೂ ಗುರುತಿಸಲಾಗುವುದು. ಕ್ರಿಯಾತ್ಮಕವಾದ ಎಲ್ಲಾ ಅವತಾರಗಳ ಜಂಜಾಟವನ್ನು ಮುಗಿಸಿ ಶಾಂತ ಮನಃಸ್ಥಿತಿ ಪಡೆಯುವ ಚಿತ್ರಣವನ್ನು ಬೌದ್ಧಾವತಾರದಲ್ಲಿ ಕಾಣಬಹುದು. ಬಲರಾಮನನ್ನು ಒಂಭತ್ತನೆಯ ಅವತಾರ ಎಂದು ಕರೆಯುವ ವಾಡಿಕೆಯೂ ಅಲ್ಲಲ್ಲಿ ಇದೆ. ಇದು ಕೃಷಿನಾಯಕನಿಗೆ ಗೌರವ ಸೂಚಿಸುವ ಪ್ರಯತ್ನ ಎಂದು ಹೇಳಬಹುದು. ಪರಮಾತ್ಮನ ಸೃಷ್ಟಿ ನಿರಂತರ ಮತ್ತು ನವನವೀನ ಎಂದು ಸೂಚಿಸುವ ಸಲುವಾಗಿಯೇ ಇನ್ನೂ ಆಗಬೇಕಾಗಿರುವ ಕಲ್ಕಿ ಎಂಬ ಹತ್ತನೆಯ ಅವತಾರವನ್ನು ಸೂಚಿಸಲಾಗಿದೆ.

ದಶಾವತಾರ ಪರಿಕಲ್ಪನೆಯಲ್ಲಿ ಜೀವವಿಕಾಸದ ಚಿತ್ರಣವೂ ಇದೆ. ಮೊದಲು ಕಾಣಿಸಿಕೊಂಡಿದ್ದು ಜಲಚರ ಜೀವಿಗಳು ಎಂಬುದನ್ನು ಮತ್ಸ್ಯಾವತಾರ ಸೂಚಿಸಿದರೆ, ಜಲ ಮತ್ತು ಭೂಮಿಗಳೆರಡರಲ್ಲಿಯೂ ಓಡಾಡಬಲ್ಲ ಉಭಯವಾಸಿ ಜೀವಿಗಳು ಸೃಷ್ಟಿಯಾದವೆಂಬುದನ್ನು ಕೂರ್ಮಾವತಾರವು ಸೂಚಿಸುತ್ತದೆ. ನಂತರ ಬಂದ ಸಸ್ತನಿಗಳನ್ನು ವರಾಹ ಅವತಾರ ಸೂಚಿಸಿದರೆ, ಪ್ರಾಣಿ ಸ್ಥಿತಿಯಿಂದ ಮಾನವ ವಿಕಾಸಗೊಂಡಿದ್ದನ್ನು ನರಸಿಂಹ ಅವತಾರ ಸೂಚಿಸುತ್ತದೆ. ಆರಂಭದಲ್ಲಿ ಕಾಣಿಸಿಕೊಂಡ ಕುಬ್ಜ ಮಾನವರನ್ನು ವಾಮನ ಅವತಾರ ಸೂಚಿಸಿದರೆ, ವಿಕಾಸಗೊಂದ ಆದರ್ಶವಾದಿ ಮಾನವನನ್ನು ರಾಮಾವತಾರ ಸೂಚಿಸುತ್ತದೆ. ರಾಜನೀತಿ ತಜ್ಞನ ಪಾತ್ರವನ್ನು ಕೃಷ್ಣನೂ, ಆಧ್ಯಾತ್ಮಿಕ ವಿಕಸನವನ್ನು ಬುದ್ಧನೂ ಸೂಚಿಸುತ್ತಾನೆ. ಕಲ್ಕಿಯು ಆಧುನಿಕ ಮಾನವನ ಸ್ವರೂಪ. ಹೀಗೆ ದಶಾವತಾರ ಕಲ್ಪನೆಯಲ್ಲಿ ಮಾನವ ವಿಕಾಸ ಚಕ್ರವಿರುವುದನ್ನು ಗಮನಿಸಬಹುದು.

7 comments:

  1. very interesting....

    Thanks for this info.

    ReplyDelete
  2. @ವಿಕಾಸ್, @ಡಾ. ಗುರು,
    ಥ್ಯಾಂಕ್ಯೂ.

    -ಅನಿಲ್.

    ReplyDelete
  3. ಸಂತೋಷ್, ರಘು,
    ’ಅನವರತ’ಕ್ಕೆ ಸ್ವಾಗತ.
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು!

    -ಅನಿಲ್.

    ReplyDelete
  4. tumba dhanyavaadagalu.namma samskrutiya agadha vaijnanika niluvannu saralavagi,strng aagi vivarisiddu tumba istavaayitu.

    ReplyDelete
  5. ಅನುಶ್ರೀ,
    ’ಅನವರತ’ಕ್ಕೆ ಸ್ವಾಗತ.
    ನನ್ನ ಮನೆಗೆ ಬಂದು ನನ್ನು ಮಾತನಾಡಿಸಿ, ಮನೆಯನ್ನು ನೋಡಿಕೊಂದು ಹೋಗಿದ್ದಕ್ಕೆ ಧನ್ಯವಾದಗಳು. ಆಗಾಗ ಬರ್ತಾ ಇರಿ.

    -ಅನಿಲ್.

    ReplyDelete
  6. tumba dhantavadagalu guru, bahala divasadinda hudkta idde.

    ReplyDelete