My Blog List
Thursday, June 18, 2009
Monday, May 04, 2009
ಸೂರ್ಯಮೂರ್ತೇ ನಮೋಸ್ತುತೇ!
ಸೂರ್ಯಮೂರ್ತೇ ನಮೋಸ್ತುತೇ!
ಶನಿವಾರ ಬೆಳಿಗ್ಗೆ ರವಿಯು ಉದಯಿಸುತ್ತಿರುವಾಗ ನಮ್ಮ ಮನೆಯ ಮಹಡಿಯಿಂದ ಹೀಗೆ ಕಾಣಿಸಿದ. ಆಗ ಸೆರೆಹಿಡಿದ ಚಿತ್ರ.
ರವಿಯನ್ನು ನೋಡಿದಾಗ ನೆನಪಾದದ್ದು, ಮುತ್ತುಸ್ವಾಮಿ ದೀಕ್ಷಿತರ ಕೃತಿ ’ಸೂರ್ಯಮೂರ್ತೇ ನಮೋಸ್ತುತೇ!’
ಇದು ಸೌರಾಷ್ಟ್ರ ರಾಗದಲ್ಲಿದ್ದು, ಧೃವತಾಳದಲ್ಲಿದೆ.
ಆ ಕೃತಿ ಇಲ್ಲಿದೆ. ಹಾಗೇ ಇದರ ತಾತ್ಪರ್ಯವನ್ನು ಬರೆದಿದ್ದೇನೆ.
ತಪ್ಪಿದ್ದರೆ ತಿದ್ದಿರಿ.
ಪಲ್ಲವಿ:
||ಸೂರ್ಯಮೂರ್ತೇ ನಮೋಸ್ತುತೇ, ಸುಂದರಚ್ಛಾಯಾಧಿಪತೇ|| (ಸೂರ್ಯ ಮೂರ್ತೇ)
ಅನುಪಲ್ಲವಿ:
||ಕಾರ್ಯಕಾರಣಾತ್ಮಕ ಜಗತ್ಪ್ರಕಾಶಕ, ಸಿಂಹರಾಶ್ಯಾಧಿಪತೇ||
||ಆರ್ಯವಿನುತ ತೇಜಸ್ಫೂರ್ತೇ, ಆರೋಗ್ಯಾದಿ ಫಲ ಕೀರ್ತೇ||
ಚರಣ:
||ಸಾರಸಮಿತ್ರ ಮಿತ್ರಭಾನೋ, ಸಹಸ್ರ ಕಿರಣ ಕರ್ಣಸೂನೋ||
||ಕ್ರೂರ ಪಾಪಹರ ಕೃಶಾನೋ, ಗುರುಗುಹ ಮೋದಿತ ಸ್ವಭಾನೋ||
||ಸೂರಿ ಜನೇಡಿತ ಸುದಿನಮಣೇ, ಸೋಮಾದಿಗ್ರಹ ಶಿಖಾಮಣೇ||
||ಧೀರಾರ್ಚಿತ ಕರ್ಮಸಾಕ್ಷಿಣೇ, ದಿವ್ಯತರ ಸಪ್ತಾಶ್ವರಥಿನೇ||
||ಸೌರಾಷ್ಟ್ರರ್ಣ ಮಂತ್ರಾತ್ಮನೇ, ಸ್ವರ್ಣ ಸ್ವರೂಪಾತ್ಮನೇ||
||ಭಾರತೀಶ ಹರಿಹರಾತ್ಮನೇ, ಭಕ್ತಿ ಮುಕ್ತಿ ವಿತರಣಾತ್ಮನೇ||
ತಾತ್ಪರ್ಯ:
ಸೌಂದರ್ಯ ಮೂರ್ತಿಯೂ ಛಾಯಾದೇವಿಯ ಪತಿಯೂ ಆದ ಸೂರ್ಯಸೇವ! ನಿನಗೆ ನಮಸ್ಕಾರ! ಕಾರ್ಯ ಕಾರಣ ಸ್ವರೂಪದ ಜಗತ್ತನ್ನು ಬೆಳಗುವವನು ನೀನೇ! ಸಿಂಹರಾಶಿಯ ಅಧಿಪತಿಯಾದ ನಿನ್ನನ್ನು ಪೂಜ್ಯರೂ, ಉತ್ತಮರೂ ಸ್ತುತಿಸುವರು. ಲೋಕಕ್ಕೆಲ್ಲಾ ಆರೋಗ್ಯ ಭಾಗ್ಯವನ್ನು ಕರುಣಿಸುವವನು ನೀನೇ! ನಿನಗೆ ಪ್ರಣಾಮ! ದಾನಶೂರ ಕರ್ಣನ ತಂದೆಯೂ, ಕಮಲ ಪುಷ್ಪದ ಮಿತ್ರನೂ, ಸಹಸ್ರ ಕಿರಣಗಳಿಂದ ಪ್ರಕಾಶಿಸುವವನೂ ಆದ ನೀನೇ ನಮ್ಮ ಪಾಪಗಳನ್ನೆಲ್ಲಾ ಹೋಗಲಾಡಿಸುವವನು. ಗುರುಗುಹನ ಸಂತೋಷಕ್ಕೆ ಸ್ವಭಾನುವೂ, ಪ್ರಾಜ್ಞರಿಂದ ಪೂಜಿಸಲ್ಪಡುವ ದಿನಮಣಿಯೂ ಆದ ನಿನಗೆ ನಮಸ್ಕಾರ! ಹೇ ದಿವಾಕರ! ಚಂದ್ರಾದಿಗ್ರಹಗಳಿಗೆಲ್ಲಾ ನೀನೇ ಅಧಿಪತಿ. ಶೂರಾಧಿಶೂರರಿಂದೆಲ್ಲ ಪೂಜಿಸಲ್ಪಡುವ ನೀನು ಲೋಕದ ಚರಾಚರ ವಸ್ತುಗಳಿಗೂ ಸಾಕ್ಷಿಭೂತನಾಗಿದ್ದೀಯೆ. ಸಪ್ತಾಶ್ವಗಳ ರಥದ ಮೇಲೆ ಚಲಿಸುವ ನೀನು ಸೌರಾಷ್ಟ್ರಾರ್ಣ ಮಂತ್ರ ಸ್ವರೂಪನಾಗಿರುವೆ. ದೀಪ್ಯಮಾನವಾಗಿ ಪ್ರಕಾಶಿಸುವ ಸ್ವರ್ಣ ಸ್ವರೂಪನೂ ನೀನೇ. ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪನೂ, ಯೋಗಮೋಕ್ಷದಾಯಕನೂ ಆದ ಸೂರ್ಯಮೂರ್ತಿ! ನಿನಗೆ ನಮಸ್ಕರಿಸುವೆ.