My Blog List

Friday, December 24, 2021

ಚೌಪದಿ - 180

ಬರೆದಿರುವೆ ಚೌಪದಿಯ ಮತ್ತೊಮ್ಮೆ ನಾನಿಂದು। 
ಮರೆಯದೆಯೆ ನೆನೆದಿಹೆನು ಗುರುಗಳಾ ಕೃಪೆಯ॥ 
ಬರೆಯುತಿರೆ ಸುಖವಿಹುದು ಮನದಲ್ಲಿ ದಿನದಿನವು। 
ಮರೆಯದೇ ಬರೆಯುವೆನು - ಅನಿಕೇತನ॥ 180 ॥ 

ಚೌಪದಿ - 179

ಮತ್ತೆ ನಾ ಬಂದಿಹೆನು ಪದಗಳಾ ಜೋಡಿಸುತ। 
ಹೊತ್ತುತ್ತ ತಂದಿಹೆನು ಪದ್ಯಗಳ ಮೂಟೆ॥ 
ಬಿತ್ತಿರುವೆ ಮನದಲ್ಲಿ ನೂರಾರು ಸಸಿಗಳನು। 
ಮೆತ್ತಗಿಹ ಮನದೊಳಗೆ -  ಅನಿಕೇತನ॥ 179 ॥ 

Sunday, August 08, 2021

ಚೌಪದಿ - 178

ಕಾಲನಿಗೆ ಕೈಮುಗಿದು ಬದುಕುವಾ ಜನರೆಲ್ಲ। 
ಬಾಲವನು ಹಿಡಿಯುತ್ತ ನಡೆದಿಹರು ಹಿಂದೆ॥ 
ಓಲೆಯನು ಮರೆಯುತ್ತ ಭಯವಿರದೆ ಸಾಗಿಹರು। 
ಮೂಲವನ ನೋಡದೆಯೆ - ಅನಿಕೇತನ॥ 178 ॥ 

Saturday, August 07, 2021

ಚೌಪದಿ - 177

ಮನದಲ್ಲಿ ಯೋಜನೆಗಳನು ಮಾಡಿ ಮಾತಾಡೊ। 
ಜನರಿಂದ ಬಲುದೂರ ಹೋಗುವುದು ಕಷ್ಟ॥ 
ಮನವನ್ನು ನಿಜವಾಗಿ ಕೆಡಿಸುವಾ ಕಲೆಯನ್ನು। 
ಮನದಟ್ಟು ಮಾಡಿಹರೊ - ಅನಿಕೇತನ॥ 177 ॥ 

Friday, August 06, 2021

ಚೌಪದಿ - 176

ಅನುದಿನವು ಹೊಗಳುಭಟ್ಟರ ಜೊತೆಗೆ ನಲಿಯುವರು। 
ಮನನೊಂದು ಕೊರಗುವರು ತೆಗಳಿದರೆ ತಮಗೆ॥ 
ಜನರೆಲ್ಲ ತಮ್ಮನ್ನು ಹೀಯಾಳಿಸುವರೆಂದು। 
ದಿನವು ಗೋಳಾಡುವರೊ - ಅನಿಕೇತನ॥ 176 ॥ 

ಚೌಪದಿ - 175

ಹಗೆಯನ್ನು ಸಾಧಿಸುತ ಗೆಳೆಯರನು ನೋಯಿಸುವ। 
ಬಗೆಬಗೆಯ ಜನರಿಂದ ಕಲಿಯುವೆವು ಪಾಠ॥ 
ಸೊಗವಿರದ ಮನದಲ್ಲಿ ಮತ್ಸರವು ತುಂಬಿರಲು। 
ಮೊಗದಲ್ಲಿ ನಗುವಿರದೊ - ಅನಿಕೇತನ॥ 175 ॥ 

Thursday, August 05, 2021

ಚೌಪದಿ - 174

ಔತಣಕೆ ಬಂದವರು ಮೆರೆದಿಹರು ಕೊಬ್ಬಿನಲಿ। 
ಸೋತರೂ ಜಂಬವನು ತೋರಿಹರು ಜಗಕೆ॥ 
ಹೂತಿಹರು ವಿಷಭರಿತ ಸಸಿಯನ್ನು ಮನದೊಳಗೆ। 
ಪಾತಿಯಲಿ ಹಗೆಯಿಹುದೊ - ಅನಿಕೇತನ॥ 174 ॥ 

ಚೌಪದಿ - 173

ಇಲ್ಲ ಸಲ್ಲದ ನೆಪವನೊಡ್ಡುವಾ ಜನರನ್ನು। 
ಮೆಲ್ಲಮೆಲ್ಲಗೆ ದೂರ ಸರಿಸಿದರೆ ಸುಖವು॥ 
ಎಲ್ಲ ಬಲ್ಲವರನ್ನು ನಂಬದಿದ್ದರೆಯೊಳಿತು। 
ಎಲ್ಲರನು ನೋಡುತಿರೊ - ಅನಿಕೇತನ॥ 173 ॥ 

ಚೌಪದಿ - 172

ಮಾತುಗಳು ಹಿತವಿರದೆ ಸಂಬಂಧಗಳು ಮುರಿದು। 
ಜೋತು ಬಿದ್ದಿವೆ ನೋಡು ಸರಪಳಿಯು ಕಳಚಿ॥ 
ಮಾತಿನಲಿ ಮಿತವಿದ್ದು ಭಾವನೆಯು ದಿಟವಿರಲು। 
ಯಾತನೆಯು ಕರಗುವುದೊ - ಅನಿಕೇತನ॥ 172 ॥ 




Monday, August 02, 2021

ಚೌಪದಿ - 171

ಹಿಂಸೆಯನು ಮಾಡುತ್ತ ಜೀವನವ ಕಳೆಯದಿರು। 
ಹಿಂಸೆಯಿಂದಲಿ ಸಿಗದು ಸುಖವದುವು ನಿನಗೆ॥ 
ಹಿಂಸೆಯಾ ನಡವಳಿಕೆ ತರವಲ್ಲವದು ಪರಮ-। 
ಹಿಂಸೆಯಲಿ ನೋವಿಹುದೊ - ಅನಿಕೇತನ॥ 171 ॥ 

Sunday, August 01, 2021

ಚೌಪದಿ - 170

ವನದಲ್ಲಿ ಹುಲಿ ಸಿಂಹ ಕರಡಿಗಳು ಕೋತಿಗಳು। 
ಮನಬಿಚ್ಚಿ ಮಾತುಗಳನಾಡುತಾ ನಗಲು॥ 
ಸನಿಹದಲೆ ಕುಳಿತಿರುವ ನರಿಯೊಂದು ಕೊರಗುತ್ತ। 
ಮನದಲ್ಲೆ ಗೊಣಗಿಹುದೊ - ಅನಿಕೇತನ॥ 170 ॥ 

Friday, July 30, 2021

ಚೌಪದಿ - 169

ನನಗೆಲ್ಲ ತಿಳಿದಿಹುದು ನಾನೆ ದೊಡ್ಡವನನೆಂದು।
ನನಗಿಂತ ಕಿರಿಯರಿಗೆ ದರ್ಪ ತೋರಿಸುತ॥
ನನಗೆ ಕೊಡಲೇಬೇಕು ಗೌರವವನೆಂದೊಡನೆ। 
ನನಗೆ ನಾನೇ ಶತ್ರು - ಅನಿಕೇತನ॥ 169 ॥ 

Thursday, July 29, 2021

ಚೌಪದಿ - 168

ಕೂಸನ್ನು ಗಾಳಿಯಲಿ ಮೇಲೆತ್ತಿಯಾಡಿಸಲು। 
ಮಾಸದೋ ನಗುವದುವು ಮುಖದಲ್ಲಿ ತಾನು॥ 
ಘಾಸಿಯನುಗೊಳಿಸುತ್ತ ಮಗುವನ್ನು ಬೆದರಿಸದೆ। 
ಮೋಸವನು ಮಾಡದಿರೊ - ಅನಿಕೇತನ॥ 168 ॥ 

Tuesday, July 27, 2021

ಚೌಪದಿ - 167

ಪಿಸುಮಾತುಗಳನಾಡಿ ಮನದೊಳಗೆ ಮನೆಮಾಡಿ। 
ಬಿಸಿಯಿಸಿರು ಬೆರೆಯುತಿರಲುಕ್ಕುವುದು ಮೋಹ॥ 
ಟಿಸಿಲೊಡೆದ ಮನಸುಗಳು ಬೆರೆಯುತಿರಲೊಂದಾಗಿ। 
ಉಸಿರಾಟದಲ್ಲೊಲವೊ - ಅನಿಕೇತನ॥ 167 ॥ 

Sunday, July 18, 2021

ಚೌಪದಿ - 166

ಏನು ಮಾಡಿದರೇನು ನೆಮ್ಮದಿಯ ಕಾಣುವೆನೊ। 
ಮೌನದಲ್ಲನುಭವಿಸಿ ಜೀವನದ ಸಾರ॥ 
ಯಾನವನು ಮಾಡುತಲಿ ಬದುಕನ್ನು ಸವೆಯುತ್ತ।  
ನಾನು ಹೋಗುವೆ ದೂರ - ಅನಿಕೇತನ॥ 166 ॥ 

Friday, July 16, 2021

ಚೌಪದಿ - 165

ಗಮನಿಸುತಲೆಲ್ಲರನು ನೋಡಬೇಕಿದೆ ಜಗವ। 
ಗಮನದಲ್ಲಿರಬೇಕು ಮನದಾಳದಲ್ಲಿ॥ 
ಗಮನವಿಡು ಸಮಯಕ್ಕೆ ಕಾಯುತ್ತ ಕುಳಿತು ನಿರ್-। 
ಗಮಿಸು ನೀ ಸದ್ದಿರದೆ - ಅನಿಕೇತನ॥ 165 ॥ 

ಚೌಪದಿ - 164

ಕಾಣದಿಹ ಕೈಗಳನು ದೂಷಿಸುತ ಕೊರಗದಿರು। 
ಕಾಣಿಸುವ ದೈವಗಳ ನೆನೆಯುತ್ತ ಬದುಕು॥ 
ಜಾಣನಾಗಿರು ನೀನು ಸರಿತಪ್ಪುಗಳನರಿತು। 
ಕೋಣೆಯಲಿ ಕೂರದೆಯೆ - ಅನಿಕೇತನ॥ 164 ॥ 

ಚೌಪದಿ - 163

ಕಾಲಕ್ಕೆ ತಕ್ಕಂತೆ ನಡೆಯುತಿರೆ ಜನರೆಲ್ಲ। 
ಸೋಲನ್ನು ಗೆಲ್ಲುವುದು ಬಲು ಸುಲಭವಂತೆ॥ 
ವಾಲುತಿರೆ ತಕ್ಕಡಿಯು ಭಾರವನು ತೂಗುತಲಿ। 
ಪಾಲುಗಳು ಸಮಭಾಗಿ - ಅನಿಕೇತನ॥ 163 ॥ 

Wednesday, July 14, 2021

ಚೌಪದಿ - 162

ಉತ್ತಮನು ನೀನೆಂದು ಬೀಗದೆಯೆ ಬದುಕಿಬಿಡು। 
ಪಿತ್ತವದು ತಲೆಯೊಳಗೆ ಹತ್ತುವುದು ನಿನಗೆ॥ 
ನೆತ್ತಿಯಲಿ ಕುಳಿತಿರಲು ಕೊಬ್ಬು ತಾ ಮದವೇರಿ। 
ಹೊತ್ತುವುದೊ ಮೈಯೆಲ್ಲ - ಅನಿಕೇತನ॥ 162 ॥ 

ಚೌಪದಿ - 161

ಬೇಕಿರದ ಮಾತಾಡಿ ಮೂಲೆಯಾ ಗುಂಪಾಗಿ। 
ಶೋಕಿಗಳ ಮಾಡುತಿಹ ಜನರನ್ನು ಬಲ್ಲೆ॥ 
ಮೂಕನಾಗಿಹೆನೆಂದು ತಪ್ಪನ್ನು ತಿಳಿಯದಿರು। 
ಜೋಕೆಯಿಂದಿರಬೇಕೊ - ಅನಿಕೇತನ॥ 161 ॥ 

Tuesday, July 13, 2021

ಚೌಪದಿ - 160

ಹಾಯನಿಸಿ ನವೆಯಾದ ಚರ್ಮವನು ಮುಟ್ಟುತಿರೆ। 
ಗಾಯವನು ಕೆರೆಯುತ್ತ ಹುಣ್ಣಾಗಿಸಿಹನು॥ 
ಬಾಯನ್ನು ಬಡಿಯುತ್ತ ನೋವಿನಲಿ ನರಳುತ್ತ। 
ಬೇಯುವನು ಕೋಪದಲಿ - ಅನಿಕೇತನ॥ 160 ॥ 

Monday, July 05, 2021

ಚೌಪದಿ - 159

ಕಾಲಕಾಲಕ್ಕೆ ಮಳೆ ಬೆಳೆಯಾಗುತಿರೆ ಜಗದಿ।
ಪೋಲು ಮಾಡದೆ ಕಾಲ ದುಡಿಯುವರು ಜನರು॥
ಮೇಲು ಕೀಳೆನ್ನುವಾ ಬೇಧವನು ತೋರಿಸದ। ಕಾಲಕ್ಕೆ ನಾ ಮಣಿವೆ - ಅನಿಕೇತನ॥ 159 ॥

Saturday, July 03, 2021

ಚೌಪದಿ - 158

ವಾಲದಿರು ನೀನೆಂದು ಯಾರದೇ ಮಾತಿಗೂ। 
ಕಾಲವೇ ಹೇಳುವುದು ಧರ್ಮವನು ನಮಗೆ॥ 
ಸೋಲು ಗೆಲುವುಗಳನ್ನು ಸಮನಾಗಿ ಕಾಣುವಾ। 
ಕಾಲಕ್ಕೆ ನಮಿಸುವೆನು - ಅನಿಕೇತನ॥ 158 ॥ 

ಚೌಪದಿ - 157

ಮೂಲೆಯಲಿ ಕೂರದೆಯೆ ಸಾಧಿಸುವ ಜನರನ್ನು। 
ಕಾಲವೇ ಕಾಯುವುದು ಚಿರಕಾಲ ಹರಸಿ॥ 
ಸಾಲವನು ಕೊಡದೆಯೇ ಲೆಕ್ಕವನು ತೀರಿಸುವ। 
ಕಾಲಕ್ಕೆ ನಾ ಮಣಿವೆ - ಅನಿಕೇತನ॥ 157 ॥ 

ಚೌಪದಿ - 156

ಓಲೆಯನು ಬರೆದಿಟ್ಟು ನೆಮ್ಮದಿಯಲುಸಿರಾಡು। 
ಮೂಲವನು ಹುಡುಕುತ್ತ ಕಳೆಯದಿರು ಕಾಲ॥ 
ಹೋಲಿಕೆಯ ಮಾಡದೆಯೆ ಬದುಕನ್ನು ತೋರಿಸುವ। 
ಕಾಲಕ್ಕೆ ನಮಿಸಯ್ಯ - ಅನಿಕೇತನ॥ 156 ॥ 

Wednesday, June 30, 2021

ಚೌಪದಿ - 155

ಬೊಮ್ಮನನು ನೆನೆಯುತ್ತ ಸಾಗಬೇಕಿದೆ ದಿನವು। 
ತಮ್ಮದೇ ರೀತಿಯಲಿ ತೋರುತ್ತ ಭಕ್ತಿ॥ 
ಹೆಮ್ಮೆಯನು ಪಡುವೆಯೋ ಬದುಕನವಲೋಕಿಸುತ। 
ನೆಮ್ಮದಿಯು ಮೌನದಲೆ - ಅನಿಕೇತನ॥ 155 ॥ 

ಚೌಪದಿ - 154

ಊನವಾಗಿರೆ ಮನವು ಸದ್ದಿರದೆ ಕೊರಗುವುದು। 
ಹೂನಗೆಯ ತೋರುತ್ತ ನೋವುಗಳ ಮರೆತು॥ 
ಯಾನವನು ಮಾಡುತಿರೆ ತಿಳಿವುದೋ ಕೊನೆಯಲ್ಲಿ। 
ಮೌನದಲೆ ನೆಮ್ಮದಿಯು - ಅನಿಕೇತನ॥ 154 ॥ 

Tuesday, June 29, 2021

ಚೌಪದಿ - 153

ಹೂನಗೆಯ ಬೆಳಕಿನಲಿ ನೇಸರನು ಮೂಡಿರಲು। 
ಬಾನಿನಾ ಜೀವಿಗಳು ಹಾರಿಹವು ಮುದದಿ॥ 
ತಾನು ದಿನವೂ ಬೆಳಕ ಚೆಲ್ಲಿರಲು ಸದ್ದಿರದೆ। 
ಮೌನದಲೆ ನೆಮ್ಮದಿಯು - ಅನಿಕೇತನ॥ 153 ॥ 

ಚೌಪದಿ - 152

ನಾನು ನಾನೆಂಬುವಾ ಹುಂಬತನದಲಿ ಮೆರೆದು। 
ಮಾನವನು ಕೊಬ್ಬುವನು ದಿನದಿಂದ ದಿನಕೆ॥ 
ಮಾನ ಮರ್ಯಾದೆಯನು ಕಳೆದುಕೊಳ್ಳುವ ಬದಲು। 
ಮೌನದಲೆ ನೆಮ್ಮದಿಯು - ಅನಿಕೇತನ॥ 152 ॥ 

Monday, June 28, 2021

ಚೌಪದಿ - 151

ತಮ್ಮ ಬೆನ್ನನು ತಾವೆ ತಟ್ಟಿಕೊಳ್ಳುವರಯ್ಯ। 
ಹಮ್ಮಿನಿಂದಲಿ ಬೀಗಿ ಕೊಬ್ಬನ್ನು ತೋರಿ॥ 
ಸುಮ್ಮನಿರುವುದೆ ಲೇಸು ದೂರವಿರುವುದೆ ಸುಖವು। 
ನೆಮ್ಮದಿಯು ಮೌನದಲೆ - ಅನಿಕೇತನ॥ 151 ॥ 

ಚೌಪದಿ - 150

ನೋಡು ನೀ ಭಕ್ತಿಯಲಿ ಕಣ್ಣನ್ನು ಮಿಟುಕಿಸದೆ। 
ಹೂಡು ನೀ ಬಾಣವನು ಬದಲಿಸದೆ ಗುರಿಯ॥ 
ಕೇಡು ನೀ ಬಯಸದಿರು ಯಾರಿನೂ ಮೂದಲಿಸಿ। 
ಮಾಡು ನೀ ಕ್ರಾಂತಿಯನು - ಅನಿಕೇತನ॥ 150 ॥ 

ಚೌಪದಿ - 149

ಜಗಳವನು ಶುರುಮಾಡಿ ಗುಂಪನ್ನು ಕಟ್ಟುತಲಿ। 
ಹೊಗಳುಭಟರನ್ನೆಲ್ಲ ಕರೆಯುತಿರೆ ಕೂಗಿ॥ 
ತೆಗಳುವುದಕೆಂದೇನೆ ಜನರನ್ನು ಹುರಿದುಂಬಿ। 
ರಗಳೆಯನು ಮಾಡುವರೊ - ಅನಿಕೇತನ॥ 149 ॥ 

ಚೌಪದಿ - 148

ಹೊಲಸನ್ನು ತಾ ತಿಂದು ಬೇರೊಬ್ಬರಿಗೆ ಬಳಿದು। 
ಕಲಹವನು ಶುರುಮಾಡಿ ನಲಿದಾಡುವವರು॥ 
ಬಲವನ್ನು ತೋರಿಸದೆ ಮುಖವನ್ನು ಮುಚ್ಚುತ್ತ। 
ಬಲಿಪಶುವ ನಾಟಕವನಾಡುವವರು॥ 148 ॥ 

ಚೌಪದಿ - 147

ಬೇಕಾದ ಹಾಗೆಲ್ಲ ಮಾತನ್ನು ತಿರುಚುತ್ತ। 
ಸಾಕಾಗಿ ಕೊನೆಯಲ್ಲಿ ಕೆಸರೆರೆಚುವವರು॥ 
ಯಾಕಾದರೂ ಕೆಲರು ಹೀಗೆಂದು ಯೋಚಿಸಲು। 
ಸಾಕಾಗಿಹುದು ಮಾತು - ಅನಿಕೇತನ॥ 147॥ 

Thursday, June 24, 2021

ಚೌಪದಿ - 146

ಅರಚಾಡಿ ಗಂಟಲಿಗೆ ನೋವನ್ನು ಕೊಡದಿರೋ। 
ನರಳಾಡಿ ಕೂರುವುದು ನೋವಿನಲಿ ತಾನು॥ 
ಹೊರಗಟ್ಟು ಕೋಪವನು ಸಹನೆಯಾ ತೋರುತ್ತ। 
ವಿರಮಿಸೋ ಮೌನದಲಿ - ಅನಿಕೇತನ॥ 146 ॥ 

Wednesday, June 23, 2021

ಚೌಪದಿ - 145

ಹೇಳು ನೀನೆಲ್ಲವನು ಹಗುರವಾಗಿಸಿ ಮನವ। 
ಕೇಳು ನಿನ್ನಯ ಸರದಿ ಬರುವಾವರೆಗೂ॥ 
ಹೇಳಬೇಕಿಹುದೆಲ್ಲವನು ಮನದಿ ನೆನಪಿಟ್ಟು। 
ಕೇಳು ಮಾತನು ಮೊದಲು - ಅನಿಕೇತನ॥ 145 ॥ 

ಚೌಪದಿ - 144

ಪರಬೊಮ್ಮ ಜಗವನ್ನು ಹರಸುತಿರಲನುದಿನವು। 
ನರಜಂತುಗಳು ತಾವು ಬಾಳುವರು ಸುಖದಿ॥ 
ಪರಬೊಮ್ಮನನು ನೆನೆದು ಭಕ್ತಿಯಲಿ ಬೇಡಿದರೆ। 
ಚಿರಕಾಲ ಸುಖವಿಹುದೊ - ಅನಿಕೇತನ॥ 144 ॥ 

Monday, June 21, 2021

ಷಟ್ಪದಿ - 7

ಯೋಗ ಮಾಡುತ ಕಲಿಯುತಿರುವೆನು 
ಯೋಗದಲ್ಲಿಯ ಜೀವ ಕಲೆಯನು 
ಯೋಗವಿದ್ದರೆ ಸಿಗುವುದೆಲ್ಲವು ಬದುಕಿನಲಿ ತಾನು। 
ಯೋಗ ಮಾಡುತ ದಿನವ ಕಳೆದರೆ 
ರೋಗರುಜಿನವು ದೂರವಿರುವುದು 
ಯೋಗ ಬಂದಿದೆಯೆಂದು ಬೀಗದೆ ಮಾಡು ಕೆಲಸವನು॥ 7 ॥ 

ಚೌಪದಿ - 143

ಇಲ್ಲಿರುವುದೇ ಸಗ್ಗವೆಂದರಿತು ಬದುಕಿಬಿಡು। 
ಅಲ್ಲಿರುವುದೇ ನರಕವೆಂದು ಮರೆತುಬಿಡು॥ 
ಇಲ್ಲಿದ್ದು ಗೆಲ್ಲುತ್ತ ನೀನೆಂದು ಮರೆಯದಿರು। 
ಎಲ್ಲವೂ ಅವನಿಚ್ಛೆ - ಅನಿಕೇತನ॥ 143 ॥

Sunday, June 20, 2021

ಚೌಪದಿ - 142

ಬೆಲ್ಲ ಬೇವಿನ ಹಾಗೆ ಬದುಕನ್ನು ಸಾಗಿಸಲು। 
ಚೆಲ್ಲು ನೀ ಸಿಹಿಯನ್ನು ಕಹಿಯನ್ನು ನುಂಗಿ॥ 
ಇಲ್ಲಸಲ್ಲದ ನೆಪವ ಮಾಡುತ್ತ ಹೇಳದಿರು। 
ಎಲ್ಲವೂ ಅವನಿಚ್ಛೆ - ಅನಿಕೇತನ॥ 142 ॥ 

ಚೌಪದಿ - 141

ಮೆಲ್ಲಮೆಲ್ಲನೆಯುಲಿದು ಸದ್ದಿಲ್ಲದೇ ದುಡಿವು-। ದೆಲ್ಲ ಜೀವಿಗಳಿಗೂ ದೊರಕುವುದು ಸಗ್ಗ॥ ಎಲ್ಲೆಯೋ ಹುಟ್ಟುತ್ತಲೆಲ್ಲಿಯೋ ಸಾಯುತಿರ-। ಲೆಲ್ಲವೂ ಅವನಿಚ್ಛೆ - ಅನಿಕೇತನ॥ 141 ॥

Saturday, June 19, 2021

ಚೌಪದಿ - 140

ಎಲ್ಲವೂ ತನ್ನಿಂದಲೆನ್ನುತ್ತ ಬೀಗಿದರೆ। 
ಸಲ್ಲುವಾ ಸಗ್ಗವೂ ಸಾಗುವುದು ದೂರ॥ 
ಕಲ್ಲೊಂದು ಕರಗಲೂ ಕಾರಣವ ಹುಡುಕಿರಲು। 
ಎಲ್ಲವೂ ಅವನಿಚ್ಛೆ - ಅನಿಕೇತನ॥ 140 ॥ 

ಚೌಪದಿ - 139

ಒಲ್ಲದೆಯೆ ಮಾಡದಿರು ಕಾಯಕವನೆಂದೆಂದು। 
ಬಲ್ಲವರು ಹೇಳಿಹರು ನಮ್ಮೊಳಿತಿಗಾಗಿ॥ 
ಹುಲ್ಲುಕಡ್ಡಿಯು ತಾನು ತೂಗತಿರಲನುದಿನವು। 
ಎಲ್ಲವೂ ಅವನಿಚ್ಛೆ - ಅನಿಕೇತನ॥ 139 ॥ 

ಚೌಪದಿ - 138

ಭಯವನ್ನು ಪಡದೆಯೇ ಸಾಗುತಿರೆ ಮುಂದೆ ನಿರ್-।
ಭಯವಾಗಿ ನಡೆಯುವುದು ನಮ್ಮಯಾ ಬದುಕು॥ 
ಜಯಪರಾಜಯಗಳಿಗೆ ಹೆದರದೇ ನಿಂತು ನಿರ್-। 
ಭಯನಾಗಿ ಹೋರಾಡು - ಅನಿಕೇತನ॥ 138 ॥ 

Thursday, June 17, 2021

ಚೌಪದಿ - 137

ಹೊಸ ವಿಷಯವೇನಿಲ್ಲವಾದರೂ ಬರೆಯುತಿರು। 
ಕಸಿಯಾಗುವುದು ಮನವು ದಿನದಿಂದ ದಿನಕೆ॥ 
ಪಸರಿಸುತಲರಿವನ್ನು ಮುಂದಕ್ಕೆ ಹೋಗುತಿರೆ। 
ಹೊಸತನ್ನು ಬರೆಯುವೆಯೊ - ಅನಿಕೇತನ॥ 137 ॥ 

Tuesday, June 15, 2021

ಚೌಪದಿ - 136

ಸದ್ದಿಲ್ಲದೇ ಮಾಡುತಿರೆ ಕಾಯಕವ ದಿನವು। 
ಗೆದ್ದು ಬರಬಹುದಂತೆ ವಿಘ್ನಗಳನಳಿಸಿ॥ 
ಬಿದ್ದೊಡನೆ ಬೊಬ್ಬಿಡುತ ನಾಟಕವನಾಡದೆಯೆ 
ತಿದ್ದಿಕೊಳೊ ನಿನ್ನನ್ನು - ಅನಿಕೇತನ॥ 136 ॥ 

ಭಾಮಿನಿ ಷಟ್ಪದಿ - 6

ಹಾಗೆ ಸುಮ್ಮನೆ ಕುಳಿತು ಬರೆದೆನು
ಭಾಗಿ ಗುಣಿಸುತ ಕೂಡಿ ಕಳೆಯುತ 
ತೂಗಿ ಆಡುತ ತಾಳ ಹಾಕುತ ಹಾಡಿ ರಾಗದಲಿ। 
ರಾಗತಾಳಗಳೆರಡು ಹೊಂದಲು 
ಬೇಗ ಬೇಗನೆ ಪದ್ಯ ಮುಗಿಸುತ 
ಬಾಗಿ ನಮಿಸಿಹೆ ದೇವ ದೇವಿಗೆ ಭಕ್ತಿ ತೋರುತಲಿ॥ 6 ॥ 

Monday, June 14, 2021

ಚೌಪದಿ - 135

ಬಾಳಲ್ಲಿ ತೊಡಕುಗಳು ಬಹಳಷ್ಟು ಬಂದರೂ। 
ಗಾಳಕ್ಕೆ ಸಿಲುಕದೆಯೆ ನಯವಾಗಿ ಸಾಗು॥ 
ಏಳುಬೀಳುಗಳಲ್ಲಿ ಬದುಕನ್ನು ಗಮನಿಸುವ। 
ಧೂಳಕಣ ನೀನಾಗೊ - ಅನಿಕೇತನ॥ 135 ॥ 

Sunday, June 13, 2021

ಚೌಪದಿ - 134

ಹಿಂದೊಂದು ಮಾತಾಡಿ ಚೂರಿಯನು ಹಾಕುತ್ತ। 
ಮುಂದೊಂದು ಮಾತಾಡಿ ಮುಗ್ಧನಾಗದಿರು॥ 
ಒಂದೊಂದೆ ನಂಟುಗಳ ಕಳಚುತ್ತ ಸಾಗುದವ-। 
ನೆಂದೆಂದು ಒಬ್ಬಂಟಿ - ಅನಿಕೇತನ॥ 134 ॥ 

ಚೌಪದಿ - 133

ಮಾಯೆಯಾ ಲೋಕದಲಿ ವಿಹರಿಸುತ ನಲಿಯುವರು। 
ಕಾಯಕವ ಮಾಡುವರು ಮನವ ನೋಯಿಸದೆ॥ 
ಗಾಯವನು ಕೆರೆಯದೇ ಮರೆಯದಾ ನೆನಪುಗಳ। 
ಛಾಯೆಯಲಿ ನೀ ನಲಿಯೊ - ಅನಿಕೇತನ॥ 133 ॥ 

Friday, June 11, 2021

ಚೌಪದಿ - 132

ಹೂತಿಹುದು ಮನದೊಳಗೆ ಹೇಳಲಾಗದ ಭಯವು। 
ಮಾತನಾಡದೆ ಜಗಳವಾಡಿಹರು ಜನರು॥ 
ಸೋತರೂ ಸರಿಯೆಂದು ಸಂಬಂಧಗಳನುಳಿಸೆ। 
ಮಾತಾಡಿ ಬಗೆಹರಿಸೊ - ಅನಿಕೇತನ॥ 132 ॥ 

Thursday, June 10, 2021

ಚೌಪದಿ - 131

ಹತ್ತಿಯಾ ಮೃದುತನವು ಮನದಲ್ಲಿ ನೆಲೆಯಾಗೆ। 
ಮೆತ್ತನೆಯ ಹೊದಿಕೆಯಲಿ ಮೈಯನ್ನು ಮುಚ್ಚು॥ 
ಬಿತ್ತು ಸಂಬಂಧಗಳನೆಲ್ಲರೊಳಗೊಂದಾಗಿ। 
ಕತ್ತಿಯನು ಮಾರದೆಯೆ  - ಅನಿಕೇತನ॥ 131 ॥ 

ಚೌಪದಿ - 130

ಚೆಲ್ಲುತಿರೆ ಮಮತೆಯನು ಹೂನಗೆಯ ಮಾತಿನಲಿ। 
ಕಲ್ಲಿನಂತಿರುವವರು ಕರಗುವರು ನಿಜದಿ॥ 
ಮಲ್ಲಿಗೆಯ ಪರಿಮಳವ ಬೀರುತಿರಲನುದಿನವು। 
ಎಲ್ಲರೂ ನನ್ನವರೆ - ಅನಿಕೇತನ॥ 130 ॥ 

Wednesday, June 09, 2021

ಚೌಪದಿ - 129

ಸಮಯವದು ಸಾಗುತಿರೆ ಯಾರಿಗೂ ಕಾಯದೆಯೆ। 
ಸಮವಾಗಿ ನೋಡುತ್ತ ಜನರೆಲ್ಲರನ್ನು॥ 
ಗಮನಿಸುತ ಕಾಯುವನು ಪಾಠವನು ಕಲಿಸುತ್ತ। 
ನಮಗೆಲ್ಲ ತಿಳಿಸುವನು  - ಅನಿಕೇತನ॥ 129 ॥ 

ಚೌಪದಿ - 128

ಕಾಲನನು ನಿಲ್ಲಿಪುದು ಬಲುಕಷ್ಟವೆಂದರಿತು। 
ಓಲೆಯನು ಬರೆದಿಟ್ಟು ಹಬ್ಬವನು ಮಾಡು॥ 
ಹಾಲನ್ನು ನೀ ಕುಡಿದು ಚಿಂತಿಸದೆ ಮಲಗುತ್ತ। 
ಕಾಲನಿಗೆ ಶರಣಾಗೊ  - ಅನಿಕೇತನ॥ 128 ॥ 

Monday, June 07, 2021

ಚೌಪದಿ - 127

ಉಪಯೋಗವಾಗುವಾ ಸಮಯವನು ಕಳೆಯುತ ದು-। 
ರುಪಯೋಗವಾಗುವಾ ಯೋಜನೆಯ ಮರೆಯೊ॥ 
ಅಪಕಾರವನು ಮಾಡಿ ಹೀನಾಯವಾಗದೆಯೆ। 
ಉಪಕಾರವನೇ ಮಾಡೊ - ಅನಿಕೇತನ॥ 127 ॥ 

Sunday, June 06, 2021

ಚೌಪದಿ - 126

ಶುದ್ಧತೆಯ ಕಾಪಾಡಿ ತನುವಲ್ಲಿ ಮನದಲ್ಲಿ।  
ಬದ್ಧತೆಯ ಬಿಡದೆಯೇ ಜೀವನವ ನಡೆಸು॥  
ಉದ್ಧರಿಸೆ ಧರ್ಮವನು ಬದುಕಿನಲಿ ದಿನದಿನವು।  
ಪದ್ಧತಿಯದಾಗುವುದೊ - ಅನಿಕೇತನ॥ 126 ॥ 

Saturday, June 05, 2021

ಭಾಮಿನಿ ಷಟ್ಪದಿ - 5

ಹರಿಯ ಜೊತೆಯಲಿ ರಮೆಯು ಕುಳಿತಿರೆ 
ಹರನು ಬಂದನು ಗೌರಿಯೊಂದಿಗೆ 
ಸುರರ ಲೋಕಕೆ ಮೆರಗು ತುಂಬುತ ಬೆಳಕ ಚೆಲ್ಲುತಲಿ। 
ಹರುಷ ಪಡುತಿಹ ದೈವ ಲೋಕವ 
ಕರುಣೆಯಿಂದಲಿ ಕಾಯುತಿರುವರು 
ಬೆರಗುಗೊಳಿಸುತ ಜಗವನೆಲ್ಲವ ತಮ್ಮ ಶಕ್ತಿಯಲಿ॥ 5 ॥ 

ಭಾಮಿನಿ ಷಟ್ಪದಿ - 4

ಗಿರಿಯನೇರುತ ರವಿಯು ಮೂಡಿರೆ 
ಧರೆಯು ಸೊಬಗಲಿ ನಾಚಿ ನಿಂತಿದೆ 
ಮೆರುಗಿನಿಂದಲಿ ನದಿಯು ಹರಿದಿದೆ ಸಾಗರದ ಕಡೆಗೆ। 
ಮರದ ಮೇಲಿನ ಹಕ್ಕಿ ಹಾಡಿಗೆ  
ಕರುವು ಕುಣಿಯುತಲಾಟವಾಡಿದೆ
ಇರುವುದೆಲ್ಲವ ನೆನೆಯುತಿರುವೆನು ಕೈಗಳನುಮುಗಿದು॥ 4 ॥ 

Friday, June 04, 2021

ಚೌಪದಿ - 125

ಪಾರಾಗಬೇಕೆಂದು ಬಿಡುಗಡೆಯ ಬೇಡದೆಯೆ। 
ಹೋರಾಟ ಮಾಡುತ್ತ ಜೀವನವ ಕಲಿಯೊ॥ 
ನೂರಾರು ಕಷ್ಟಗಳು ಬಂದರೂ ಧೃತಿಗೆಡದೆ। 
ಹೋರಾಡಿ ಪಾರಾಗು - ಅನಿಕೇತನ॥ 125 ॥ 

Thursday, June 03, 2021

ಚೌಪದಿ - 124

ನೆಲದಲ್ಲಿ ಬೇರೂರಿ ಹುಟ್ಟುವಾ ಸಸಿಯೊಂದು। 
ಫಲಕೊಡುವ ಮರವಾಗಿ ಬೆಳೆಯುವಾ ಹಾಗೆ॥ 
ಹಲವಾರು ಮನಗಳಿಗೆ ಹುರುಪನ್ನು ತುಂಬುತ್ತ। 
ಒಲವಿಂದ ನೀ ಬದುಕು - ಅನಿಕೇತನ॥ 124 ॥ 

Wednesday, June 02, 2021

ಚೌಪದಿ - 123

ತಾರಾಟದಿಂದೇನು ಫಲವಿಲ್ಲವೆಂದರಿತು। 
ಯಾರಾದರೇನಂದು ಕಾದಾಡಬೇಡ॥ 
ಬೇರೂರಬೇಕಾದ ಸಂಬಂಧಗಳ ಕಡಿದು। 
ಹಾರಾಡ ಬೇಡವೋ - ಅನಿಕೇತನ॥ 123 ॥ 

Tuesday, June 01, 2021

ಚೌಪದಿ - 122

ಯೋಗವನು ಮಾಡುತ್ತ ಜೀವನವ ನಡೆಸಿದರೆ। 
ಸಾಗುವೆವು ಬಲುದೂರ ಸುಖವಾಗಿ ನಾವು॥ 
ಮಾಗುತಿಹ ಮೈಮನವು ಜಡರಹಿತವಾಗುತಿರೆ। 
ಯೋಗಾನುಯೋಗವದು - ಅನಿಕೇತನ॥ 122 ॥ 

ಚೌಪದಿ - 121

ನೋಡುತಿರೆ ಬಾನಿನಲಿ ಮುಸ್ಸಂಜೆಯಾ ಸೊಬಗ। 
ಮೂಡಿಹುದು ಮನದೊಳಗೆ ನೇಸರನ ಮೊಗವು॥ 
ಹಾಡಿತಿರೆ ರಾಗದಲಿ ಭಾವನೆಯ ತುಂಬುತ್ತ। 
ಮೋಡಗಳು ಸರಿದಿಹವೊ - ಅನಿಕೇತನ॥ 121 ॥ 


ಭಾಮಿನಿ ಷಟ್ಪದಿ - 3

ಉಗಮವಾಗುತಲೆನ್ನ ಮನದೊಳು 
ಸುಗಮವಾಗಿಹ ನದಿಯು ಹರಿದಿದೆ
ಮೊಗದಲನುದಿನ ಕಾಂತಿ ಮೂಡುತಲರಿವು ಬೆಳಗುತಿದೆ
ಜಗವ ಮರೆಸುವ ಭಕ್ತಿಬಾವದೆ  
ಮುಗುಳುನಗುತಿಹ ತಾಯ ನೋಡಲು 
ಗಗನ ಕುಸುಮವೆ ದೊರಕಿದಂತಿದೆ ಗುರುವಿನಾಶ್ರಯದೆ॥ 3 ॥ 

Monday, May 31, 2021

ಭಾಮಿನಿ ಷಟ್ಪದಿ - 2

ತಾಯಿ ಶಾರದೆ ಲೋಕ ಪೂಜಿತೆ
ಮಾಯೆಯಿಂದುದ್ಧರಿಸಿ ಎನ್ನನು
ಕಾಯುತಿರುವಳು ತಿಳಿವನೂಡಿಸಿ ತನ್ನ ಮಡಿಲಿನಲಿ। 
ತಾಯ ಕರುಣೆಯ ಮನದಿ ನೆನೆಯುತ
ಕಾಯಿ ಹೂಗಳ ದೇವಿಗರ್ಪಿಸಿ 
ಬಾಯಿ ತೆರೆದವಳನ್ನೆ ಹಾಡುತಲಿಂದು ನಲಿದಿಹೆನು॥ 2 ॥

Sunday, May 30, 2021

ಚೌಪದಿ - 120

ಬಗೆಬಗೆಯ ಮಾತಿನಲಿ ಬಡಿವಾರವನು ನೋಡಿ। 
ಹಗೆಯನ್ನು ಸಾಧಿಸಲು ಮುಂದಾಗಬೇಡ॥ 
ಜಗದಲ್ಲಿ ಬಹಳಷ್ಟು ಜನರೆಲ್ಲ ಹೀಗೆಯೇ। 
ಗಗನದಲಿ ಹಾರುವರೊ - ಅನಿಕೇತನ॥ 120 ॥ 

Saturday, May 29, 2021

ಭಾಮಿನಿ ಷಟ್ಪದಿ - 1

ನಮಿಸುತಿರುವೆನು ವಿಘ್ನರಾಜಗೆ 
ನಮಿಸಿ ಬೇಡಿಹೆ ಶಾರದಾಂಬೆಗೆ
ನಮಿಸಿ ಬಾಗುತ ಶಿವನ ಪಾದಕೆ ವರವ ಕೇಳಿಹೆನು। 
ಕಮಲನಯನನು ನಗುತಲಿರುವನು 
ಗಮನ ಹರಿಸುತಲೆನ್ನ ಭಕುತಿಗೆ 
ರಮೆಯ ಕರೆದಿಹನೋದಲೆನ್ನಯ ಮೊದಲ ಷಟ್ಪದಿಯ॥ 1 ॥ 

ಚೌಪದಿ - 119

ಯಾವುದೋ ವಿಷಯಕ್ಕೆ ಮನವನ್ನು ಹದಗೆಡಿಸಿ। 
ಭಾವನೆಗೆಯಡಿಯಾಳು ನೀನಾಗಬೇಡ॥ 
ನೋವುಗಳ ನೆನೆಯದೇ ನಸುನಗುತ ಸಾಗುವುದೆ। 
ಜೀವನದ ಧರ್ಮವೋ - ಅನಿಕೇತನ॥ 119 ॥ 

Wednesday, May 26, 2021

ಚೌಪದಿ - 118

ಬದುಕೆಂಬ ಚರ್ಮವದು ದಿನದಿನವು ಸವೆದಿರಲು। 
ಹದವಾದ ಕೆನೆಹಾಲಿನಾರೈಕೆ ಮಾಡು॥ 
ಮದವನ್ನು ಬಿಟ್ಟುಬಿಡೆ ಮನವರಿಕೆಯಾಗುವುದು। 
ಬದುಕಲ್ಲೆ ಧರ್ಮವಿದೆ - ಅನಿಕೇತನ॥ 118 ॥ 

Tuesday, May 25, 2021

ಚೌಪದಿ - 117

ಕರ್ಮವನು ಮಾಡುತಿರು ಫಲದ ಚಿಂತೆಯ ಬಿಟ್ಟು। 
ಧರ್ಮವನು ಬಿಡದೆಯೇ ಸಾಗುತಿರು ಮುಂದೆ॥ 
ಕರ್ಮವದು ತೂಗುವುದು ಬದುಕಿನಾ ಹಾದಿಯನು। 
ಧರ್ಮವದು ಕಾಯುವುದೊ - ಅನಿಕೇತನ॥ 117 ॥

Monday, May 24, 2021

ಚೌಪದಿ - 116

ಮಾಯೆಯಾ ಲೋಕಕ್ಕೆ ಕರೆದೊಯ್ದ ಶಾರದೆಯು। 
ಪಾಯಸವ ಬಡಿಸಿಹಳು ಬಲು ಕರುಣೆಯಿಂದ॥ 
ಬಾಯಿಂದ ಸ್ತೋತ್ರಗಳ ಪಠಣವಾ ಮಾಡುತಿರೆ। 
ತಾಯಿಯೇ ಹರಸಿಹಳೊ - ಅನಿಕೇತನ॥ 116 ॥ 

ಭಗವದ್ಗೀತೆಯಲ್ಲಿ "ಭಗವಾನ್ ಉವಾಚ‌" ಏಕೆ?

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಉವಾಚ‌ ಏಕಿಲ್ಲ? 

ಭಗವದ್ಗೀತೆಯಲ್ಲಿ ಸಂಜಯ ಹೇಳಿದ್ದು - ಸಂಜಯ ಉವಾಚ.
ಅರ್ಜುನ ಹೇಳಿದ್ದು - ಅರ್ಜುನ ಉವಾಚ.
ದೃತರಾಷ್ಟ್ರ ಹೇಳಿದ್ದು - ದೃತರಾಷ್ಟ್ರ ಉವಾಚವಾಯಿತು.
ಹಾಗಿದ್ದಲ್ಲಿ, ಶ್ರೀಕೃಷ್ಣ ಹೇಳಿದ್ದು - ಶ್ರೀಕೃಷ್ಣ ಉವಾಚ‌ ಎಂಬ ಉಲ್ಲೇಖ ಏಕಿಲ್ಲ? 

ಭಗವದ್ಗೀತೆಯನ್ನು ಓದುವವರ ಸಂಖ್ಯೆಯು ಕಡಿಮೆಯೇನಿಲ್ಲ. ನಮಗೆ ಭಗವದ್ಗೀತೆಯಲ್ಲಿನ ಕನಿಷ್ಠ ಒಂದು ಶ್ಲೋಕವಾದರೂ ಸದಾ ನೆನಪಿನಲ್ಲಿ ಉಳಿದಿರುವುದು ಸಹಜ. ಇನ್ನು ಕೆಲವು ಮಂದಿ ಅದರಲ್ಲಿ ಅಂತಹುದೇನಿದೆ ಎಂಬ ಕುತೂಹಲಕ್ಕೆ ಓದಲು ಪ್ರಾರಂಭಿಸಿ, ಕೊನೆಗೆ ತಮಗೆ ಅರಿವಿಲ್ಲದೆಯೇ ಅದರ ಆಳಕ್ಕೆ ಇಳಿದವರೂ ಇದ್ದಾರೆ. 

ಭಗವದ್ಗೀತೆ ಭೋದನೆ, ಪಾಂಡವರ ಹಾಗೂ ಕೌರವರ ನಡುವೆ ಕುರುಕ್ಷೇತ್ರ ಯುದ್ಧ ಪ್ರಾರಂಭ ಆಗುವ ಸಂಧರ್ಭ. ಅರ್ಜುನ ತನ್ನ ರಥದ ಸಾರಥಿಯಾದ ಶ್ರೀಕೃಷ್ಣನಲ್ಲಿ ತನ್ನ ಅಳಲನ್ನು ತೋಡಿಕೊಂಡು, ಯುದ್ಧದಲ್ಲಿ ತನಗೆ ಆಸಕ್ತಿ ಇಲ್ಲ, ನನಗೆ ಯುದ್ಧ ಮಾಡುವ ಮನಸ್ಸಿಲ್ಲ, ಎಂದು ಹೇಳಿ ತನ್ನ ಬಿಲ್ಲು ಬಾಣಗಳನ್ನು ಕೆಳಗೆ ಇಳಿಸಿದ. ರಥವು ಎರಡು ಸೇನೆಗಳ ಮಧ್ಯದಲ್ಲಿ ನಿಲ್ಲಿಸಲಾಯಿತು. 

ಇನ್ನು, ಶ್ರೀಕೃಷ್ಣನು ಯುದ್ಧ ಮಾಡಲೇಬೇಕಾದ ಅನಿವಾರ್ಯತೆ ಏನು ಎಂಬುದನ್ನು ಅರ್ಜುನನಿಗೆ ಹದಿನೆಂಟು ಅಧ್ಯಾಯಗಳಲ್ಲಿ ಶ್ಲೋಕಗಳ ಮೂಲಕ ಮನದಟ್ಟು ಮಾಡಿಕೊಟ್ಟ. ಇದನ್ನು ಸಂಜಯನು ತನ್ನ ರಾಜನಾದ ದೃತರಾಷ್ಟ್ರನಿಗೆ ವಿವರಿಸುತ್ತಿದ್ದ. ಇದಿಷ್ಟು ಭಗವದ್ಗೀತೆ ಭೋದನೆ ಮಾಡಿದ ಸಂಧರ್ಭ. 

ಇಲ್ಲಿ ಭಗವದ್ಗೀತೆಯ ಸಾರ ಏನಿದೆ ಎಂಬುದನ್ನು ಬದಿಗಿಟ್ಟು, ಸರ್ವ ಧರ್ಮೀಯರಿಗೂ ಭಗವದ್ಗೀತೆ ಉಪದೇಶ ಹೇಗೆ ಅನ್ವಯ ಆದೀತು ಎಂಬುದನ್ನು ಶ್ರೀಕೃಷ್ಣ ಮಾರ್ಮಿವಾಗಿ ತಿಳಿಸಿದ್ದಾನೆ ಎಂಬುದು ಗಮನಾರ್ಹ.

ಭಗವದ್ಗೀತೆಯಲ್ಲಿ ಅರ್ಜುನನ ಸಂದೇಹಗಳು! 
ಪ್ರಶ್ನೆಗಳನ್ನು = ಅರ್ಜುನ ಉವಾಚ ಎಂದು ಸೂಚಿಸಲ್ಪಟ್ಟಿದೆ.
ಹಾಗೇಯೆ, ಧೃತರಾಷ್ಟ್ರ= ಉವಾಚ.
ಸಂಜಯ = ಉವಾಚ 
ಈ ರೀತಿಯಲ್ಲಿ ಉಲ್ಲೇಖಿಸಲಾಗಿದೆ.

ಹಾಗಿದ್ದಲ್ಲಿ, ಶ್ರೀಕೃಷ್ಣ ಹೇಳಿದ್ದನ್ನು ಶ್ರೀಕೃಷ್ಣ ಉವಾಚ ಎನ್ನಬಹುದಾಗಿತ್ತಲ್ಲ! ಭಗವದ್ಗೀತೆಯಲ್ಲಿ ಎಲ್ಲಿಯೂ ಶ್ರೀಕೃಷ್ಣ ಉವಾಚ ಎಂಬ ಉಲ್ಲೇಖವಿಲ್ಲ. ಶ್ರೀಕೃಷ್ಣ ಹೇಳಿದ್ದನ್ನು "ಶ್ರೀ ಭಗವಾನ್ ಉವಾಚ" ಎಂಬುದಾಗಿ ಮಾತ್ರ ಉಲ್ಲೇಖಿಸಲಾಗಿದೆ. 

ಭಗವಾನ್ ಅಥವಾ "ಭಗವಂತ" ಎನ್ನುವುದು ಯಾವುದೋ ನಮಗೆ ಇಷ್ಟವಾದ ಒಬ್ಬ ದೇವರೋ, ಒಂದು ಧರ್ಮಕ್ಕೋ ಅಂಟಿಕೊಂಡದ್ದಲ್ಲ.‌ ಅದೊಂದು ಅಗೋಚರ ನಿರಾಕಾರ ಸಕಲ ಚರಾಚರಗಳಲ್ಲಿಯೂ ಅಡಗಿರುವ ಚೇತನ, ಅದು ಸರ್ವಸ್ವವನ್ನೂ ಆವರಿಸಿದೆ. ಅದು ನಮ್ಮ ಪ್ರತಿಯೊಬ್ಬರ ನಂಬಿಕೆ. ಹಾಗಾಗಿ ಶ್ರೀಕೃಷ್ಣ ಭಗವದ್ಗೀತೆಯು 'ತನ್ನ' ಭೋದನೆ ಎಂದು ಎಲ್ಲಿಯೂ ಗುರುತಿಸಲ್ಪಡುವುದನ್ನು ಇಚ್ಚಿಸಲಿಲ್ಲ. 

ಭಗವದ್ಗೀತೆಯ ಬೋಧನೆ ಏನಿದ್ದರೂ, ಅದು ಭಗವಂತನ ಗೀತೆ, ಭಗವಂತನ ಭೋದನೆ. ಪ್ರತಿ ಮಾನವನ ವಿಭಿನ್ನ ಧರ್ಮದವರಿಗೂ ಯಾವ ಭಗವಂತನಲ್ಲಿ ನಂಬಿಕೆ ಇದೆಯೋ, ಅದು ಆ ಭಗವಂತನ ಭೋದನೆಯಾಗಿಲಿ, ಎಂಬ ಮಾರ್ಮಿಕವಾದ ಶ್ರೀಕೃಷ್ಣನ ಸಂದೇಶ. 

| ಕೃಷ್ಣಂ ವಂದೇ ಜಗದ್ಗುರುಮ್ | 

ಚೌಪದಿ - 115

ಕತೆಕವನಗಳನೋದಿ ಬರೆಯುತ್ತ ಬಲು ಮಂದ-। 
ಗತಿಯಲ್ಲಿ ಹೊರಟಿಹರು ಗೆಳೆಯರೊಡಗೂಡಿ॥ 
ಜೊತೆಯಾಗಿ ಪಾಠಗಳನೊಂದಂದೆ ಕಲಿಯುತ್ತ। 
ಜತನದಲಿ ಸಾಗಿಹರೊ - ಅನಿಕೇತನ॥ 115 ॥  

Saturday, May 22, 2021

#PrayForLokaKalyana Initiative - A positive vibe.

When a few like-minded people came together as a part of the #PrayForLokaKalyana initiative at the beginning of the month of May, I was extremely happy to be part of it. Initially, it was an impromptu session of the Chanting for which we got a great response and then a small group was created within and it continued for 11 days. 

For 11 days, we witnessed some wonderful voices who were part of the #VishnuSahasranama Chanting and other Shlokas too. 

We also planned for the 7pm session which was divine in its own sense. Here too, we witnessed some divine voices who chanted the #LalithaSahasranama along with some great #DeviStutis 

The chanting began on the auspicious day of the Ekadashi and culminated on the auspicious occasion of the #ShankaraJayanti where we listened to some beautiful KRtis by #AdiShankaracharya

Even after five days of the culmination of the program, the mind and the body have become more active. The mind is confident and the body is responding very well and vice-versa. Some sessions were really mesmerizing and we experienced a lot of positivity within the core team. 

What started as a small group has become bigger with a lot of divine souls volunteering to do sessions by taking responsibilities. Though they are using their own platforms to continue, a new journey towards the spiritual path has just begun. Let us hope to continue this journey with our loved ones as we #PrayForLokaKalyana 

Thanks to all the people who are involved in this noble cause. I am happy to be part of this initiative. There was so much positivity every day. I hope the positivity in all of us stays forever to make these kinds of programs in the future as well. 


ಚೌಪದಿ - 114

ಅರಿವು ಕೊಡುವನು ತಾನು ದಿನದಿನವು ಹೊರಹೊಮ್ಮಿ। 
ಬರವಿರದ ಬೆಳಕನ್ನು ಚೆಲ್ಲುತ್ತ ಜಗಕೆ॥ 
ನರಜಂತುಗಳಿಗೆ ದಯೆಯಿಂದನುಗ್ರಹಿಸೆ ತಾ।  
ಬರುತಿರುವನೆಡೆಬಿಡದೆಯನಿಕೇತನ॥ 114 ॥ 

Friday, May 21, 2021

ಚೌಪದಿ - 113

ಮರದಂತೆ ನಿಂತುಬಿಡು ಬೇರುಗಳ ಹರಡುತ್ತ। 
ನೆರಳನ್ನು ಕೊಡುವಂಥ ಬದುಕನ್ನು ಕಟ್ಟು॥ 
ಕರುಣೆಯಲಿ ಮಾತಾಡಿ ವಿಶ್ವಾಸವನು ತೋರೊ। 
ಸರಳತೆಯಲೇ ಸುಖವೊ - ಅನಿಕೇತನ॥ 113 ॥ 

Thursday, May 20, 2021

ಚೌಪದಿ - 112

ಬೀಗವನು ಹಾಕಿಬಿಡು ಬೇಕಿರದ ವಿಷಯಕ್ಕೆ। 
ಮಾಗುವುದು ಜ್ಞಾನದಾ ಕಡಲಿನಲಿ ಮನವು॥ 
ಬೇಗೆಯದು ತೀರದೋ ಕುಡಿಯುತಿರಲರಿವನ್ನು। 
ನೀಗದಾ ದಾಹವದು - ಅನಿಕೇತನ॥ 112 ॥ 

Wednesday, May 19, 2021

ಚೌಪದಿ - 111

ಹರಿಯುತಿರೆ ಜ್ಞಾನವದು ನದಿಯಾಗಿ ಮನದಲ್ಲಿ। 
ಹರಸುವರು ಚಿರಕಾಲ ನಲುಮೆಯಲಿ ಗುರುವು॥ 
ಹರಡುತಿರೆಯರಿವದನು ಚೌಪದಿಯ ಚೌಕದಲಿ। 
ಹರಿಹರರು ಹರಸುವರೊ - ಅನಿಕೇತನ॥ 111 ॥ 

Tuesday, May 18, 2021

ಚೌಪದಿ - 110

ಅರಿವನ್ನು ಕೊಡುವವಗೆ ನಮಿಸುತ್ತ ನಡೆಯುತಿರೆ। 
ಸರಿಯಾದ ದಾರಿಯಲಿ ದೊರಕುವುದು ಜ್ಞಾನ॥ 
ಗುರಿಯನ್ನು ತಲುಪಿದೊಡೆ ತುಳಿಯದಿರು ಯಾರನೂ।
ಗುರುವನ್ನು ಮರೆಯದಿರು - ಅನಿಕೇತನ॥ 110 ॥ 

#PrayForLokaKalyana Initiative.

A few like-minded people came together as a part of the #PrayForLokaKalyana initiative at the beginning of the month of May. Initially, it was an impromptu session for which we got great feedback and it continued for 11 days. 

For 11 days, we witnessed some wonderful voices who were part of the #VishnuSahasranama Chanting. 

We also planned for the 7pm session which was divine in its own sense. Here too, we witnessed some divine voices who chanted the #LalithaSahasranama along with some great #DeviStutis 

The chanting began on the auspicious day of the Ekadashi and culminated on the auspicious occasion of the #ShankaraJayanti where we listened to some beautiful KRtis by #AdiShankaracharya

Thanks to all the people who were involved in this noble cause. I am happy to be part of this initiative. There was so much positivity every day. I hope the positivity in all of us stays forever to make these kinds of programs in the future as well. 


Monday, May 17, 2021

।ಅದ್ವೈತ ಹಾಗೂ ಕಗ್ಗ।

ಅದ್ವೈತ ಹಾಗೂ ಕಗ್ಗ

ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು।
ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ॥
ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ।
ಜಡವೆ ಜೀವದ ವಸತಿ - ಮಂಕುತಿಮ್ಮ॥

ಶಾಲೆಯಲ್ಲಿ ನಾವು Living and Nonliving things ಬಗ್ಗೆ ಓದಿ ತಿಳಿದುಕೊಂಡಿದ್ದೇವೆ. ಆದರೆ, ಇದರ ಬಗ್ಗೆ ಶಾಲೆಯಲ್ಲಿ ಕಲಿತದ್ದಕ್ಕು, ವಾಸ್ತವತೆಗೂ ವ್ಯತ್ಯಾಸ ಇದೆಯಂತೆ ಎಂಬುದನ್ನು ಅನೇಕ ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ. 

ಆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರವೂ ಯಾವುದೇ 'ಜಡ' ಎಂದು ಸೂಚಿಸುವ ವಸ್ತುಗಳಲ್ಲೂ ಅದ್ಯಾವುದೋ 'ಅಣು' (atoms) ರೂಪದ electron's, neutron, protonsಗಳು ತಮ್ಮ ಸೀಮಿತವಾದ ಪಥದಲ್ಲಿ ಸುತ್ತುತ್ತಿರುತ್ತವಂತೆ.‌ ಇಂತಹ ವೈಜ್ಞಾನಿಕ ಸಂಶೋಧನೆಗಳಿಗೂ ಮೊದಲೇ ಶ್ರೀ ಆದಿ ಶಂಕರರು ಇದರ ಬಗ್ಗೆ ತಮ್ಮ ಭಾಶ್ಯಗಳಲ್ಲಿ ವಿಸ್ತಾರವಾಗಿ ಜಗತ್ತಿಗೆ ತಿಳಿಸಿದ್ದಾರೆ.  ಮೇಲಿನ "ಕಗ್ಗ"ದ ತಿರುಳೂ ಸಹಾ ಅದನ್ನೇ ಪ್ರತಿಪಾದಿಸುತ್ತದೆ.

ಪ್ರಾಯಶಃ 'ಜಡ' ಮತ್ತು 'ಜೀವ' ವಸ್ತುಗಳ (living and non-living) ನಡುವೆ ಇರುವ ಅವಿನಾಭಾವ ಸಂಬಂಧಗಳನ್ನು ಇದಕ್ಕಿಂತ ಸುಲಭವಾಗಿ ಸ್ಪಷ್ಟವಾಗಿ ಡಿವಿಜಿಯವರಿಗಿಂತ ಮತ್ತೊಬ್ಬರು ಸ್ಪಷ್ಟೀಕರಿಸಲು ಸಾಧ್ಯವಿಲ್ಲವೇನೋ. ಆ ಆಯಾಮದಲ್ಲಿ ಚಿಂತನೆ ಮಾಡಿದಾಗ ಜಡ ವಸ್ತು, ಜೀವ ವಸ್ತುಗಳ ನಡುವೆ ಮೇಲ್ನೋಟಕ್ಕೆ ವ್ಯತ್ಯಾಸಗಳಿವೆ ಎನಿಸಿದರೂ ಅವು ಒಂದರಮೇಲೊಂದು ಅವಲಂಬಿಸಿರುವುದು ಸತ್ಯ. ಜಡವಸ್ತುಗಳಲ್ಲೂ ಯಾವುದೋ ಒಂದು ಚೈತನ್ಯ ಅಡಿಗಿರುವುದು ಖಚಿತ ಎಂಬುದು ಮೇಲಿನ ಕಗ್ಗದ ಸಾರಾಂಶ.

ಇದನ್ನೆ ಅಲ್ಲವೇ ಶ್ರೀ ಶ್ರೀ ಶ್ರೀ ಶಂಕರರು ತಮ್ಮ‌ ಅದ್ವೈತ ಸಿದ್ಧಾಂತದಲ್ಲಿ ಹೇಳಿದ್ದು: 
ಜೀವ, ಜಗತ್ತು ಮತ್ತು ಈಶ್ವರ.

||ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ||

ಜೀವ + ಜಗತ್ತು ಒಂದೇ, ಅದು ಮಿತ್ಯ. ಈಶ್ವರ ಒಬ್ಬನು ಮಾತ್ರವೇ ಸತ್ಯ. ಹಲವು ಅದ್ವೈತ ವಿರೋಧಿಗಳು ಇಲ್ಲಿನ 'ಮಿತ್ಯ' ಎಂಬುದನ್ನು 'ಸುಳ್ಳು' ಎಂದು ತಿರಿಚುವ ಪ್ರಯತ್ನಗಳಿಗೆ ಕೊರತೆಯಿಲ್ಲ. ಬಿಡಿ,ಅದು ಅವರವರ ಪ್ರಾರಬ್ಧ ಕರ್ಮವಷ್ಟೇ.

|'ಜಡ' ವಸ್ತುವಿನಲ್ಲಿ 'ಜೀವ'ದ ಚೈತನ್ಯ ಇರುವುದಾದರೂ ಹೇಗೆ?|

ನಾಗಾರಾಧನೆಯ ದಿನ ಬೆಳಗಿನಿಂದ ಉಪವಾಸ. ಎಲ್ಲರೂ ತನಿ ಎರೆದ ನಂತರ ಶ್ರೀ ಶ್ರೀನಿವಾಸ ದೇವಾಲಯದಲ್ಲಿ ಮಹಾ ಮಂಗಳಾರತಿ ಪ್ರಾರಂಭ. ಅದು ಕೊಂಚ ತಡವಾಗೋದು ಮಾಮೂಲು. ಆದರೆ, ಮಹಾ ಮಂಗಳಾರತಿಯ ನಂತರವೇ ಮಹಾ ಪ್ರಸಾದ, ವಿನಿಯೋಗ. ಮೊದಲೇ ಕೆಲವರಿಗೆ ಮಧುಮೇಹ, ಹೊಟ್ಟೆ ಚುರುಗುಟ್ಟುತ್ತಿದೆ. ಅಷ್ಟರಲ್ಲಿ "ಅನ್ನ ಸಂತರ್ಪಣಾ ನಿಧಿಗೆ'' ಒಂದಷ್ಟು ಹಣ ಸಂದಾಯ ಮಾಡಲು ಹೋದಾಗ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ವಿನಮ್ರತೆಯಿಂದ ಹಣ ಸ್ವೀಕರಿಸಿ, ರಸೀತಿ ಜೊತೆ ಒಂದು ತುಣುಕು 'ಕಲ್ಲು ಸಕ್ಕರೆ' ಕೊಟ್ಟಾಗ ಅದನ್ನು ಪ್ರಸಾದ ಎಂದು ಸ್ವೀಕರಿಸಿ ನಾಲಗೆಯ ಮೇಲಿಟ್ಟಾಗ, ಆ ನಿರ್ಜೀವ-ಜಡ ಕಲ್ಲುಸಕ್ಕರೆಯಿಂದ ದಕ್ಕಿದ ಚೈತನ್ಯವು ಉರುವಲಾಗಿ ದೇಹಕ್ಕೆ ಕ್ಷಣಕಾಲ ತಾತ್ಕಾಲಿಕ ನಿರಾಳ.

ಅಂತೂ ಊಟಕ್ಕೆ ಕೂತಾಯ್ತು, ಒಂದೊಂದೆ ಪಾಕಿಸಿದ ಪದಾರ್ಥಗಳು  ಎಲೆಯ ಮೂಲೆಗಳಲ್ಲಿ ಕುಳಿತಾಯ್ತು. ಅನ್ನದ ಮೇಲಿನ ತೊವ್ವೆ, ತುಪ್ಪ ಬರುವಷ್ಟರಲ್ಲಿ ಹಸಿವು ಮತ್ತೂ ಹೆಚ್ಚಾಯ್ತು. 'ಹರ ಹರ ಮಹಾದೇವ್' ಗೋವಿಂದ, ಗೋವಿಂದಾ, ಎಂಬ ನಾಮ ಸ್ಮರಣೆಯ ಸಮಯ ಬಂದಾಯ್ತು. ಪರಿಶಂಚನೆ, ಆಪೋಶನದ ನಂತರ ಪಾಯಸಕ್ಕೆ ಕೈ ಹಾಕಿದಾಗ ನೆಮ್ಮದಿಯ ನಿಟ್ಟುಸಿರು. 

ಇಲ್ಲಿ ಊಟಕ್ಕೆ ಬಡಿಸಿದ ಪದಾರ್ಥಗಳೆಲ್ಲವೂ ಜೀವ ಇಲ್ಲದ 'ಜಡ' ಪದಾರ್ಥಗಳು. ಅವು ಒಂದೊಂದೆ ನಮ್ಮ ದೇಹದೊಳಗೆ ಸೇರಿದಾಗ ಕೊಂಚ ಕೊಂಚವಾಗಿ ಜೀವಕ್ಕೆ ಚೈತನ್ಯ. ಅಂದರೆ ಜಡ ವಸ್ತುವಿನಲ್ಲಿ ಜೀವಕ್ಕೆ ಚೇತನ, ಚೈತನ್ಯ ನೀಡುವ ಅದಾವುದೋ ಅಗೋಚರ ಶಕ್ತಿ ಇದೆ ಎನ್ನುವುದು ಸತ್ಯವಾಯಿತಲ್ಲ. ಅದನ್ನೇ ನಾವು ನಿರಾಕಾರನಾದ 'ಬ್ರಹ್ಮನ್' ಈಶ್ವರ, ಶಕ್ತಿ, ಚೇತನ ಎನ್ನೋಣ. ನಮ್ಮಲ್ಲಿ ಒಂದು ಮಾತಿದೆ. "ಅನ್ನ (ಆಹಾರ) ಪರಬ್ರಹ್ಮ ಸ್ವರೂಪ" ಎನ್ನುವುದು ವಾಡಿಕೆ. 

ಲೋಹ, ಗಾಜು, ಪ್ಲಾಸ್ಟಿಕ್ ಗಳಿಂದ ತಯಾರಿಸಿದ ವಾಹನ 'ಜಡ' ವಸ್ತು. ಅದಕ್ಕೆ ಅನುಕೂಲವಾದ ಇಂಧನ ತುಂಬಿ, ಅದ್ಯಾವುದೋ ಗುಂಡಿ (button) ಒತ್ತಿದಾಗ, ವಾಹನ ಚಲಿಸುವುದು. ಅಲ್ಲಿನ ತಾಂತ್ರಿಕ ಕ್ರಿಯೆಗಳು ಏನೇ ಇರಲಿ, ಜಡ ಎನಿಸಿದ ವಾಹನ ಮತ್ತು ಇಂಧನದ ನಡುವಿನ ಕ್ರಿಯೆಯನ್ನು ತಾರ್ಕಿಕವಾಗಿ ಅಗೋಚರ ಚೇತನ, ಚೈತನ್ಯ, ಈಶ್ವರ, ಬ್ರಹ್ಮನ್ ಎನ್ನಬಹುದಲ್ಲಾ!

ಎರಡು ನುಣುಪಾದ ಕಲ್ಲುಗಳನ್ನು ಸತತವಾಗಿ ಉಜ್ಜಿದಾಗ ಆಗುವ ಘರ್ಷಣೆಯಿಂದ ಶಾಖ ಉತ್ಪನ್ನವಾದಾಗ, ಅಗ್ನಿಯ ಉಗಮ. ಜಡ ಕಲ್ಲಿನ ಚೂರುಗಳು ಮತ್ತು ಘರ್ಷಣೆಯ ಕ್ರಿಯೆಯಗಳ ನಡುವೆ ಇಟ್ಟ 'ಹತ್ತಿ'ಯ ಸಣ್ಣ ಚೂರಿನ ಮೂಲಕ ಜ್ವಾಲೆ ಉತ್ಪತ್ತಿಯಾಗಿದ್ದು ಹೇಗೆ.? ಅವುಗಳಲ್ಲಿ ಅಡಗಿರುವ ಚೈತನ್ಯ ಯಾವುದು?

ಎಲ್ಲೋ ಕಾಡಿನ ಮಧ್ಯದಲ್ಲಿ ಧುಮುಕುವ ಜಲಪಾತ, ಅದಕ್ಕೆ ಯಾವುದೋ ಯಂತ್ರಗಳನ್ನು ಕ್ರಮದಲ್ಲಿ ಜೋಡಿಸಿದಾಗ, ನೀರಿನ ಧುಮುಕುವ ರಭಸಕ್ಕೆ ಯಂತ್ರ ತಿರುಗಿತು. ಅಲ್ಲಿ ವಿದ್ಯುತ್ ಉತ್ಪತ್ತಿಯಾಯಿತು. ಅಲ್ಲಿಂದ ದೂರದ ಮನೆಗೆ ತಂತಿಯಲ್ಲಿ ವಿದ್ಯುತ್ ಹರಿದು ಮನೆಗೆ ಬಂತು. ಗುಂಡಿ ಒತ್ತಿದೊಡನೆ ಮನೆಯ ದೀಪ ಬೆಳಗಿತು. ಇಲ್ಲಿ ವಿದ್ಯುತ್ ಎಂಬ ಶಕ್ತಿ, ಚೈತನ್ಯ ಅಗೋಚರ. ನೀರು, ಯಂತ್ರ, ತಂತಿ, ವಿದ್ಯುತ್ ದೀಪದ ಬಲ್ಬು ಎಲ್ಲವೂ ಜಡ ವಸ್ತುಗಳು. ಹಾಗಿದ್ದಲ್ಲಿ ದೀಪದ ಬಲ್ಬಿಗೆ ತಂತಿಯ ಮೂಲಕ ಅಗೋಚರವಾದ ಚೇತನವೆಂಬ ವಿದ್ಯುತ್ ಹರಿದು ಬಂದದ್ದಾದರೂ ಹೇಗೆ?

ಈ ಎಲ್ಲ ಸಂದೇಹಗಳಿಗೆ ತಮ್ಮ ಸಿದ್ಧಾಂತಗಳ ಮೂಲಕ ನಮಗೆ ಸಮರ್ಪಕವಾದ ಉತ್ತರ ಕೊಟ್ಟು ನಮಗೆ ದಾರಿದೀಪವಾದ ಶ್ರೀ ಶ್ರೀ ಶ್ರೀ ಶಂಕರ ಭಗವದ್ಪಾದರಿಗೆ ಅನಂತಾನಂತ ನಮನಗಳು.

"ನಮಾಮಿ ಶಂಕರ"

ಎಲ್ಲಾ ಸನಾತನ ಬಂಧುಗಳಿಗೂ "ಶಂಕರ ಜಯಂತಿ"ಯ ಶುಭಕಾಮನೆಗಳು. 

Sunday, May 16, 2021

ಚೌಪದಿ - 109

ಅರಿವು ಗರಿಗೆದರಿರಲು ಲೋಕವನು ನೋಡುತಿರೆ। 
ಗುರಿಯು ಕಾಣಿಸುತಿಹುದು ಗುರುಗಳಿರೆ ಮುಂದೆ॥ 
ಗುರಿಯಿಲ್ಲದವನಿಗೇ ಸರಿದಾರಿಯಲಿ ನಡೆಸೊ। 
ಗುರುಗಳಿಗೆ ನೀ ನಮಿಸೊ - ಅನಿಕೇತನ॥ 109 ॥ 

Saturday, May 15, 2021

An auspicious milestone - An emotional moment.

I was going through my blogs on https://anil-ramesh.blogspot.com/

While I reading my Chaupadis, I started to think about the journey so far and tears rolled down involuntarily. 

A cousin of mine called me during that moment and appreciated my work by encouraging me to write more verses in Kannada. I couldn’t speak to her because I was overwhelmed by her gesture. 


With a heavy throat, I told her that I would call her later. She understood my situation and asked me if I was in tears. I said Yes and she teased me as always and the conversation ended with smiles on our faces. 


My wife was observing me all this while and she started to tease me as if I was a crybaby. Later, I got an emotional hug from her before she went to the kitchen to make some Coffee. 

ಚೌಪದಿ - 108

ನೂರೆಂಟು ನಾಮಗಳ ಸ್ತೋತ್ರವನು ಪಠಿಸಿರಲು। 
ನೂರೆಂಟು ಮಣಿಗಳಾ ಜಪಮಾಲೆ ಹಿಡಿದು॥ 
ನೂರೆಂಟು ವಿಘ್ನಗಳು ಕಳೆಯುತಿರಲನುದಿನವು। 
ನೂರೆಂಟು ಶುಭಫಲವೊ - ಅನಿಕೇತನ॥ 108 ॥ 

Friday, May 14, 2021

ಚೌಪದಿ - 107

ಹೆಕ್ಕಿಹೆನು ನೆನಪುಗಳನೊಂದೊಂದೆ ನಾನಿಂದು। 
ರೆಕ್ಕೆಯನು ಬಿಚ್ಚುತ್ತ ಹಾರುತಿರೆ ಮನವು॥ 
ದಿಕ್ಕುತಪ್ಪದೆ ಸಾಗಿಹೆನು ನೆನೆದು ಹಳೆಯದನು। 
ಉಕ್ಕುತಿರಲುನ್ಮಾದವನಿಕೇತನ॥ 107 ॥ 

Thursday, May 13, 2021

ಚೌಪದಿ - 106

ಆತುರವ ಪಡುವವಗೆ ತಾಳ್ಮೆಯದು ಬಲು ಕಡಿಮೆ। 
ಹಾತೊರೆಯುತಿರೆ ಮನವು ಸಂತಸವ ತುಂಬಿ॥ 
ಕಾತರವು ಹೆಚ್ಚುತಿರಲಾತುರವು ಹೆಚ್ಚುವುದು। 
ಆತುರವ ಬಿಟ್ಟಬಿಡೊ - ಅನಿಕೇತನ॥ 106 ॥ 

ಚೌಪದಿ - 105

ಅವಕಾಶಗಳು ಹಲವು ಬರುತಿರಲು ಬಾಳ್ಕೆಯಲಿ। 
ಸವಿನಯದಿ ಮನವಿಟ್ಟು ಮಾಡುನೀ ಕೆಲಸ॥ 
ಅವಿರತವುತಾನಿರಲು ಭಕ್ತಿಯದು ದುಡಿಮೆಯಲಿ। 
ನವ ಬದುಕು ಪಲ್ಕಿರಿವುದನಿಕೇತನ॥ 105 ॥ 

Wednesday, May 12, 2021

ಚೌಪದಿ - 104

ಹುರುಳಿರದೆ ಮಾತನಾಡುವ ಜನರು ಬಹಳಿಹರು। 
ಅರಿವನ್ನು ಅರ್ಥೈಸಿ ಕೊಳುವವರ ನಡುವೆ॥ 
ತಿರುಳಿರದ ವಿಷಯವನು ಕೆದಕುತ್ತ ಬದುಕುತಿರೆ। 
ನಿರುಪಯೋಗವು ಕೆಲರಿಗನಿಕೇತನ॥ 104 ॥ 

ಚೌಪದಿ - 103

ಜೀವನದೊಳುನ್ಮಾದವಾಗಿಹುದು ಹಲವರಿಗೆ।
ದೈವಾನುಭೂತಿಯನು ಭಕ್ತಿಯಲಿ ನಂಬಿ॥
ಸಾವಕಾಶದಿ ಬದುಕಿನವಕಾಶ ಹುಡುಕುತಿರೆ।
ದೈವವೇ ಮೆಚ್ಚುವುದು - ಅನಿಕೇತನ॥ 103 ॥

ಚೌಪದಿ - 102

ಹಾಯಾಗಿ ಹರಿದಿಹಳು ಪಾಪಗಳ ತೊಳೆಯುತ್ತ। 
ಆಯಾಸ ಮರೆಸುವಳು ಮಮತೆಯನು ತೋರಿ॥ 
ಮಾಯಾವಿ ನದಿಯಾಗಿ ಭಕ್ತರನು ಕಾಯುವಳು। 
ತಾಯಾಗಿ ಪೊರೆಯುವಳು - ಅನಿಕೇತನ॥ 102 ॥ 

Tuesday, May 11, 2021

ಚೌಪದಿ - 101

ಕಾರಿರುಳು ಕವಿದಿರಲು ಹೆದರಿಕೆಯದಾಗಿಹುದು। 
ದೂರದಲಿ ಗೆಜ್ಜೆಯಾ ಸಪ್ಪಳವ ಕೇಳಿ॥ 
ತೂರಿಬರುತಿದೆ ಗಾಳಿ ಜೋರಾದ ವೇಗದಲಿ। 
ಊರಿಹುದು ಭಯ ಮನದೆ - ಅನಿಕೇತನ॥ 101 ॥ 


ಚೌಪದಿ - 100

ಕಾರಣವ ಕೇಳಿದೊಡೆ ದಿಗಿಲಾಗುವುದುಯೆನಗೆ। 
ಪಾರುಗಾಣಿಸಲೆನ್ನ ಬಂದಿಹನು ದೊರೆಯು॥ 
ಸೇರಿಸಿಹೆನೊಂದೊಂದೆ ಹೆಕ್ಕಿಹೂಗಳ ದಿನವು। 
ನೂರು ಪದ್ಯದ ಮಾಲೆ - ಅನಿಕೇತನ॥ 100 ॥ 

Monday, May 10, 2021

ಚೌಪದಿ - 99

ಹೂರಣವನನುಭವಿಸಿ ತಿಂದಷ್ಟು ಸುಲಭವೇ। 
ಬಾರದಿಹ ಯೋಚನೆಯ ಕವಿತೆಯಾಗಿಸಲು॥ 
ಮೀರಿರುವ ಸತ್ಯವನು ಅನುಭವಿಸಲೋಸುಗವೆ। 
ಹೀರು ತತ್ವದ ಮಧುವ - ಅನಿಕೇತನ॥ 99 ॥ 

ಚೌಪದಿ - 98

ರಾಮನಿಗೆ ಕೌಸಲ್ಯೆ ಲಾಲಿಯನು ಹಾಡಿದಳು। 
ಶ್ಯಾಮನಿಗೆ ದೇವಕಿಯು ಜನ್ಮವನು ಕೊಡಲು॥ 
ನೇಮದಲಿ ನಾವೆಲ್ಲ ಪೂಜಿಸುತ ಹಾಡಿರಲು। 
ತಾಮಸವು ನೀಗುವುದೊ - ಅನಿಕೇತನ॥ 98 ॥ 


Sunday, May 09, 2021

ಚೌಪದಿ - 97

ಅಮ್ಮನಿಗೆ ದಿನದಿನವು ನಮಿಸುತಾ ಬಂದವಗೆ। 
ಅಮ್ಮನೇಯಾಗಿಹಳು ಜಗವೆಲ್ಲ ತನಗೆ॥ 
ಅಮ್ಮನಿಗೆ ತೋರಿಸಲು ಭೂಮಿಯನು ಬಾಯಲ್ಲಿ। 
ಅಮ್ಮನಿಗೆ ಭಾಗ್ಯವದೊ - ಅನಿಕೇತನ॥ 97 ॥ 

Saturday, May 08, 2021

ಚೌಪದಿ - 96

ಚಾರಣದ ಕಥೆಗಳನು ಕೇಳುತ್ತ ನಾವೆಲ್ಲ। 
ಹಾರಿದೆವು ಕಲ್ಪನೆಯ ಲೋಕಕ್ಕೆ ಜಿಗಿದು॥ 
ದಾರಿಗಳ, ಬೆಟ್ಟಗಳ, ಪಯಣಗಳ, ನೆನಪಿಸಿತು। 
ಚಾರಣದ ಕಥೆಗಳಲಿ - ಅನಿಕೇತನ॥ 96 ॥ 

Friday, May 07, 2021

ಚೌಪದಿ - 95

ಪರಬೊಮ್ಮ ಕೇಳಿರಲು ಭೀಷ್ಮನಾ ಮೊರೆಯನ್ನು। 
ಹರಸಿದನು ಸಂತಸದಿ ದೇವವ್ರತನನು॥ 
ಶರಶಯ್ಯೆಯಲಿ ಮಲಗಿ ಪಠಿಸಿರಲು ನಾಮಗಳ। 
ಹರಿಯೊಲುಮೆ ದೊರಕಿತ್ತು - ಅನಿಕೇತನ॥ 95 ॥ 

ಚೌಪದಿ - 94

ಅನುಭೂತಿ ತುಂಬಿಹುದು ವಿಷ್ಣುವಿನ ಒನಾಮದಲಿ। 
ವನಮಾಲಿಯನು ನೆನೆದು ದಿನದಿನವು ಸಾಗಿ॥ 
ಅನುದಿನವು ಹೇಳುತಿರೆ ಸಾವಿರದ ಹೆಸರುಗಳ। 
ಮನವಾಗುವುದು ಹಗುರವನಿಕೇತನ॥ 94 ॥ 

Thursday, May 06, 2021

ಚೌಪದಿ - 93

ಮನದಲ್ಲಿ ದಿನದಿನವು ಬೆಳೆಯುತಿರಲನುಭೂತಿ। 
ತನುವಲ್ಲಿ ಮೂಡುವುದು ಸಹನೆಯಾ ಶಕ್ತಿ॥ 
ಧನದಲ್ಲಿಯಳೆಯದೇ ಜನರನ್ನು ನೋಡಿದರೆ। 
ಒನಪಿನಲಿ ಬದುಕಬಹುದನಿಕೇತನ॥ 93 ॥






Monday, May 03, 2021

ಚೌಪದಿ - 92

ಅನುಭೂತಿಯನುತೋರು ಸುಖಪಡುವೆ ಬದುಕಿನಲಿ। 
ಮನುಕುಲಕೆ ಬೇಕಿಹುದು ಹೆಚ್ಚಾಗಿ ಸಹನೆ॥ 
ಅನುದಿನವು ಮಾಡುತಿರೆ ಕೆಲಸಗಳನೆಡೆಬಿಡದೆ। 
ಮನುಕುಲವೆ ಹರಸುವುದೊ - ಅನಿಕೇತನ॥ 92 ॥ 

Saturday, May 01, 2021

ಚೌಪದಿ - 91

ದುಡಿಯುತ್ತ ಹಗಲಿರುಳು ಬೇಸರವ ಪಡದೆಯೇ| 
ಮಿಡಿಯುವರು ಮನೆಮಂದಿಯಾ ಭಾವಗಳಿಗೆ|| 
ಹಿಡಿಯುವರು ಕೈಗಳನು ಜೊತೆಯಲ್ಲಿ ಸಾಗುತ್ತ| 
ನುಡಿದಂತೆ ನಡೆಯುವರೊ - ಅನಿಕೇತನ|| 91 || 

ಚೌಪದಿ - 90

ಹರಟೆಯಾ ಕಟ್ಟೆಯಲಿ ಭಾಗಿಯಾದವರೆಲ್ಲ। 
ಸರದಿಯಲಿ ಮಾತಾಡಿ ಹಾಡಿರಲು ನಲಿದು॥ 
ಬರಗಾಲದಲಿ ಮಳೆಯು ಹಿತವನೀಡುವ ಹಾಗೆ। 
ಪರಕಾಯ ಮನೆಮಾಡಲನಿಕೇತನ॥ 90 ॥ 

Thursday, April 29, 2021

ಚೌಪದಿ - 89

ಬಾಡಿರುವ ಮನಸುಗಳನೊಂದುಕಡೆ ಸೇರಿಸಲು। 
ಹಾಡಿದರು ರಾಗದಲಿ ಹಲವಾರು ಜನರು॥ 
ಹಾಡುಗಳ ಹಾಡುತ್ತ ಬೇಸರವ ಕಳೆಯುತ್ತ। 
ಆಡುತಂತ್ಯಾಕ್ಷರಿಯನನಿಕೇತನ॥ 89 ॥ 

Wednesday, April 28, 2021

ಚೌಪದಿ - 88

ಅಣುವಣುವಿನಲಿ ನಗೆಯು ಮೂಡುತಿರೆ ದಿನದಿನವು। 
ಕಣಕಣದಲೂ ಕೂಡ ಜಿನುಗುವುದು ಮನವು॥ 
ರಣಭೀಕರತೆಯಲ್ಲು ರಸಪಾಕದಂತಿರಲು। 
ಮಣಭಾರವಿಳಿಯುವುದೊ - ಅನಿಕೇತನ॥ 88 ॥ 

ಚೌಪದಿ - 87

ಕೆಸರೆರೆಚಿ ಹಾರಾಡಿ ಗಾಳಿಯಲಿ ಗುದ್ದಾಡಿ। 
ಕಸವನ್ನು ತಿನ್ನುತ್ತ ಹೊಲಸನುಗುಳುವರು॥ 
ಬಿಸಿಯುಸಿರಿನಲಿ ತಾವು ಮಾಡಿದ್ದೆ ಸರಿಯೆನುತ। 
ಮಸಿಬಳಿದುಕೊಳ್ಳುವರು - ಅನಿಕೇತನ॥ 87 ॥ 

ವೇದಗಳು, ಉಪನಿಷತ್ತುಗಳು

|ವೇದಗಳು , ಉಪನಿಷತ್ತುಗಳು| 
ಸನಾತನ ಧರ್ಮ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಚರ್ಚೆಯ ವಿಷಯ ಬಂದಾಗ "ವೇದಗಳು, ಉಪನಿಷತ್ತು"ಗಳ ಉಲ್ಲೇಖ ಸಾಮಾನ್ಯ. ಹಾಗಾದರೆ, 'ವೇದ' ಎಂದರೇನು? ಇದನ್ನು ರಚಿಸಿದ್ದು ಯಾರು? ನಾವು ಇದರ ಬಗ್ಗೆ ತಲೆಕೆಡಿಕೊಳ್ಳುವ ಗೋಜಿಗೆ ಹೋಗದಿದ್ದರೂ, ವೇದಗಳು, ಉಪನಿಷತ್ತುಗಳ ಬಗ್ಗೆ ಸಂದರ್ಭಕ್ಕನುಸಾರವಾಗಿ ಆಗಾಗ್ಗೆ ಉಲ್ಲೇಖ ಮಾಡುವುದು ನಮ್ಮಲ್ಲಿ ರೂಢಿಯಲ್ಲಿದೆ. 

|ವೇದ| 
ನಾನೇನು ವೇದಗಳ ಅಧ್ಯಯನ ಮಾಡಿದವನಲ್ಲ. ಕೆಲವು ಉಪನ್ಯಾಸಗಳ ಮೂಲಕ ಕೇಳಿದ್ದು (ಶೃತಿ) ಅವು ನನ್ನ ಜ್ಞಾಪಕದಲ್ಲಿ (ಸ್ಮೃತಿ) ಉಳಿದಿರುವುದು ಮತ್ತು ಅಲ್ಪ ಸ್ವಲ್ಪ ಓದಿ ಗ್ರಹಿಸಿದ್ದು. ಆದರೆ, ಅವುಗಳನ್ನು ಎಷ್ಟರಮಟ್ಟಿಗೆ ಅರ್ಥೈಸಿಕೊಂಡಿದ್ದೇನೆ ಹಾಗೂ ಲೇಖನಿಸುತ್ತಿದ್ದೇನೆ? ನಿಖರವಾದ ಉತ್ತರವಿಲ್ಲ. ವೇದಗಳ ಬಗ್ಗೆ ಅಲ್ಪವಾಗಿ ಗ್ರಹಿಸಿ ಅರ್ಥೈಸಿಕೊಂಡದ್ದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ. 

'ವೇದ' ಎಂಬುದರ ಸಂಕ್ಷಿಪ್ತ ಅರ್ಥವೇ - ಜ್ಞಾನ.
ಯಾವುದರ ಬಗ್ಗೆ ಜ್ಞಾನ - ಜೀವನ, ಬದುಕಿನ ಜ್ಞಾನ.
ಇವು, ಜೀವ,ಜಗತ್ತು,ಪರತತ್ವ (ಬ್ರಹ್ಮ, ಶ್ರೀಹರಿ, ಈಶ್ವರ) ಇದೇ 'ತ್ರಿಕೂಟ' ರಹಸ್ಯ.
ಜೀವ ಮತ್ತು ಜಗತ್ತು ಇವೆರಡು ನಮ್ಮ ಕಣ್ಣಿಗೆ ಕಾಣುವಂತಹುದು. 
ಇನ್ನು ಪರತತ್ವ ಯಾವುದು?
ಈ 'ಜೀವ' ಮತ್ತು 'ಜಗತ್ತು' ಇರುವುದಾದಲ್ಲಿ ಅದರ ಸೃಷ್ಟಿಕರ್ತ, ಅಗೋಚರ ಶಕ್ತಿ,ಇಂದ್ರಿಯಗಳ ಅನುಭವಕ್ಕೆ ಬಾರದ ಚೇತನ ಒಂದಿರಬೇಕಲ್ಲವೇ.! ಅದೇ ಬ್ರಹ್ಮ, ಶ್ರೀಹರಿ, ಈಶ್ವರ ಅಥವ ಪರತತ್ವ. 

ವೇದಗಳನ್ನು ರಚಿಸಿದ್ದು ಒಬ್ಬಿಬ್ಬರಲ್ಲ, ಅದು 'ಅಪೌರುಷೇಯ'ವಾದವು. ಆದರೆ, ಅವುಗಳ, ಅಸ್ತಿತ್ವದ ಮೂಲ ವಸ್ತು ನಮಗೆ ದೊರೆತಿರುವ ಕಾರಣದಿಂದ ಅವನ್ನು ಆಯಾ ಕಾಲಕ್ಕೆ, ಅವಶ್ಯಕತೆಗಳಿಗೆ ಅನುಗುಣವಾಗಿ ತಕ್ಕ ಮಾರ್ಪಾಡುಗಳೊಂದಿಗೆ, ಜೀವನದ ಸತ್ವಗಳು, ಸತ್ಯತೆಯನ್ನು ಕಂಡುಕೊಂಡ ಮಹಾ ಜ್ಞಾನಿಗಳು, ತಪಸ್ವಿಗಳು, ಋಷಿ ಮುನಿಗಳು ರಚಿಸಿದ್ದು ಈ ವೇದಗಳು.
ಹಾಗಿದ್ದಲ್ಲಿ ಉಪನಿಷತ್ತುಗಳ ವಿವರಣೆ ಏನು?

ವೇದದ ಸಂಕ್ಷಿಪ್ತ ತಿರುಳು, ಸಾರವೇ ಉಪನಿಷತ್ತುಗಳು.
ವೇದಗಳು ಎಷ್ಟು?
ಮುಖ್ಯವಾದುವು ನಾಲ್ಕು.
೧.ಋಗ್ವೇದ, ೨.ಯಜುರ್ವೇದ, ೩.ಸಾಮವೇದ, ೪.ಅಥರ್ವವೇದ (ಅಥರ್ವಣ).
ಇವುಗಳಲ್ಲಿ ಕೇವಲ ಯಜುರ್ವೇದದಲ್ಲಿ ಮಾತ್ರವೇ ಎರಡು ಕವಲು ಅಥವಾ ಉಪ-ವೇದಗಳುಂಟು.
೧. ಕೃಷ್ಣ ಯಜುರ್ವೇದ.
೨. ಶುಕ್ಲ ಯಜುರ್ವೇದ.
ಯಜುರ್ವೇದವು ಎರಡು ಕವಲಾದದ್ದು ಹೇಗೆ, ಏಕೆ?

ಜೀವ - ನಾನು
ಜಗತ್ತು - ನಮ್ಮೊಂದಿಗೆ ಇರುವುದು
ಪರತತ್ವ - ಕಣ್ಣಿಗೆ ಕಾಣದ ಶಕ್ತಿ,ಬೆಳಕು.
ಇವನ್ನು ಅನೇಕ ಋಷಿ ಮುನಿಗಳು, ತಪಸ್ವಿಗಳು, ಜ್ಞಾನಿಗಳು ಕಂಡುಕೊಂಡ ಸತ್ಯ.
ಇವು ನಿತ್ಯ ಜೀವನದ ನಿಸ್ವಾರ್ಥ  ಬದುಕಿನ ಜ್ಞಾನಮಾರ್ಗ - ವೇದಗಳಾದವು.
ಈ ಮಾರ್ಗಗಳು ಆಯಾ ಕಾಲಘಟ್ಟ, ಪ್ರಾಂತ್ಯ, ವಿವೇಚನೆ, ಅನುಭವ, ಜ್ಞಾನಕ್ಕೆ ತಂಕಂತೆ ಕವಲೊಡೆದು ವಿವಿಧ ಭಾಗಗಳಾದವು. ಇವು ಕೆಲವೊಮ್ಮೆ ನಿಜ ಬದುಕಿನ ಮಾರ್ಗಕ್ಕೆ ಯಾವುದು ಸರಿ, ಯಾವುದು ಸರಿಯಿಲ್ಲದ್ದು ಎಂಬ ತಿಳುವಳಿಕೆಯ ನ್ಯೂನತೆ, ಆಚರಣೆ, ವಿಧಿವಿಧಾನಗಳಲ್ಲಿ ಗೊಂದಲಗಳು ಉಂಟಾದಾಗ ಅವುಗಳನ್ನು ಒಟ್ಟು ಸಂಗ್ರಹಿಸಿ, ಪರಿಶೀಲಿಸಿ, ಬೇಕು ಬೇಡಗಳನ್ನು ಪರಿಷ್ಕರಿಸಿ ನಾಲ್ಕು  ಭಾಗಗಳನ್ನಾಗಿ ಮಾಡಿದವರು 'ಕೃಷ್ಣ ದ್ವೈಪಾಯನರು' ಹಾಗೆ ವೇದಗಳನ್ನು ಭಾಗಗಳಾಗಿ ವಿಂಗಡಿಸಿದ್ದರಿಂದ ಕೃಷ್ಣ-ದ್ವೈಪಾಯನರು - 'ವೇದ-ವ್ಯಾಸ'ರಾದರು. 

| ಯಜುರ್ವೇದದ ಕವಲು |
ವೇದಗಳು ನಾಲ್ಕು ಭಾಗಗಳಾಗಿ ವಿಂಗಡಣೆ ಆದನಂತರ, ಜ್ಞಾನಿಗಳು ಆಯಾ ಪ್ರಾಂತ್ಯ, ಆಸಕ್ತಿ, ನಂಬಿಕೆ, ಇಚ್ಛೆಯಂತೆ  ವಿಧಿವಿಧಾನಗಳ ಆಚರಣೆಯಲ್ಲಿ ಒಂದನ್ನು ಆಯ್ದುಕೊಂಡು ತಮ್ಮನ್ನೂ, ತಮ್ಮ ಶಿಷ್ಯರು, ಅನುಯಾಯಿಗಳನ್ನು ಒಟ್ಟುಗೂಡಿಸಿ ಜ್ಞಾನಮಾರ್ಗದಲ್ಲಿ ಮುಂದುವರೆದರು.

| ವೈಶಂಪಾಯನರು | 

ಯಜುರ್ವೇದದ ಆರಾಧಕರು,ಜ್ಞಾನಿಗಳು, ಗುರುಗಳು. ಇವರ ಶಿಷ್ಯಗಣದಲ್ಲಿ ಪ್ರಮುಖರಾದವರು ಯಾಜ್ಞವಲ್ಕ್ಯರು. ಅಸಾಧಾರಣ ಪ್ರತಿಭೆ, ತೀಕ್ಷ್ಣವಾದ ಗ್ರಹಣಶಕ್ತಿ, ಜ್ಞಾನ ಉಳ್ಳವರು ಯಾಜ್ಞವಲ್ಕ್ಯರು.

ಒಂದೊಮ್ಮ ಗುರುಗಳಾದ ವೈಶಂಪಾಯನರಿಗೂ, ಶಿಷ್ಯರಾದ ಯಾಜ್ಞವಲ್ಕ್ಯರಿಗೂ ಒಂದು ಶ್ಲೋಕ, ಮಂತ್ರ ಪ್ರಯೋಗದ ಬಗ್ಗೆ ಸಣ್ಣದೊಂದು ಭಿನ್ನಾಭಿಪ್ರಾಯ ಪ್ರಾರಂಭವಾಯಿತು. ಅದು ತರ್ಕ, ವಿವಾದ, ವಾಗ್ವಾದದ ಮಟ್ಟಕ್ಕೆ ಏರಿದಾಗ ಕೋಪಗೊಂಡ ವೈಶಂಪಾಯನರು, ಗುರುಭಕ್ತಯಿಲ್ಲದ ನಿನ್ನಂತಹ ಶಿಷ್ಯ ಗುರು ದ್ರೋಹ ಬಗೆದಂತೆ, ಹಾಗಾಗಿ ನೀನು ನನ್ನಲ್ಲಿ ಇಲ್ಲಿಯತನಕ ಕಲಿತ ವಿದ್ಯೆಯನ್ನು ವಾಂತಿ (ವಮನ) ಮಾಡಲು ಆಗ್ರಹಿಸಿದರು. [ಇಲ್ಲಿ ವಿದ್ಯೆಯನ್ನು ವಾಂತಿ ಮಾಡುವುದು ಎಂಬುದರ ಗೂಢಾರ್ಥ, ಕಲಿತು ಅರಗಿಸಿಕೊಂಡ ವಿದ್ಯೆಯನ್ನು ಹೊರಹಾಕುವುದು ಎಂಬ ಅರ್ಥ] ಗುರುಗಳ ಆಗ್ರಹದಂತೆ ಯಾಜ್ಞವಲ್ಕ್ಯರು ತಾವು ಕಲಿತ ಯಜುರ್ವೇದ ವಿದ್ಯೆಯನ್ನು ಹೊರಹಾಕಿದಾಗ ಅಲ್ಲಿದ್ದ ಇತರೆ ಶಿಷ್ಯರು 'ತಿತ್ತಿರಿ' ಪಕ್ಷಿಗಳ ರೂಪತಾಳಿ ಹೊರಹಾಕಿದ ವಿದ್ಯೆಯನ್ನು ತಿಂದು (ಗ್ರಹಿಸಿ) ಜೀರ್ಣಿಸಿಕೊಂಡರು. 

ಇನ್ನುಮುಂದೆ ಇಲ್ಲಿದ್ದು ವೈಶಂಪಾಯನರಲ್ಲಿ ವಿದ್ಯೆಯನ್ನು ಮುಂದುವರೆಸುವ ಅವಶ್ಯಕತೆ ಇಲ್ಲವೆಂದು ನಿರ್ಧರಿಸಿದ ಯಾಜ್ಞವಲ್ಕ್ಯರು ಅಲ್ಲಿಂದ ಹೊರಟರು.

ಮುಂದೆ ಸೂರ್ಯದೇವರನ್ನು ಕುರಿತು ಕಠೋರವಾದ ತಪಸ್ಸು ಮಾಡಿದ ನಂತರ, ಸೂರ್ಯದೇವ ಪ್ರತ್ಯೇಕವಾಗಿ ಯಜುರ್ವೇದದ ಹೊಸ ವಿಧಿವಿಧಾನಗಳ ಸಾರವನ್ನು ಬೋಧನೆ ಮಾಡಿದ. ಅಲ್ಲಿಂದ ಯಜುರ್ವೇದವು ಕವಲೋಡೆದು "ಶುಕ್ಲ ಯಜುರ್ವೇದ" ಉಗಮವಾಯಿತು. ಹೀಗೆ ಶುಕ್ಲ ಯಜುರ್ವೇದದ ಉಗಮದ ಕೀರ್ತಿ ಯಾಜ್ಞವಲ್ಕ್ಯರಿಗೆ ಸಲ್ಲತಕ್ಕದ್ದು. 

Tuesday, April 27, 2021

ಚೌಪದಿ - 86

ಎದೆಬಗೆದು ಹನುಮನೇ ತೋರಿರಲು ರಾಮನಿಗೆ। 
ನದಿಯಂತೆ ಹರಿದಿಹುದು ಕಣಕಣದೆ ಭಕ್ತಿ॥ 
ಪದಗಳಿಗೆ ನಿಲುಕದಾ ಭಕ್ತಿಯನು ನೋಡುತ್ತ। 
ಎದೆಗಪ್ಪಿಕೊಂಡಿಹನು - ಅನಿಕೇತನ॥ 86 ॥



ಚೌಪದಿ - 85

ರಾಮನಾಮವನುಲಿಯೆ ಸುರಿದಿಹುದು ಪನ್ನೀರು। 
ನೇಮದಲಿಯಾರಾಧಿಸುತಲಿರಲು ತಾನು॥ 
ರಾಮನಾ ಭಕ್ತಿಯಲಿ ಮೈಮರೆತಿರಲು ಹನುಮ। 
ರಾಮನೇ ನಲಿದಿಹನು - ಅನಿಕೇತನ॥ 85 ॥ 

Monday, April 26, 2021

ಚೌಪದಿ - 84

ಬಿಕ್ಕಿಬಿಕ್ಕಿಯಳುವಾ ಮನವನ್ನು ಬಿಡದೆಯೇ। 
ನಕ್ಕುನಗಿಸುತಲಿರಲು ಕಣ್ಣೀರು ಸುರಿಯೆ॥ 
ಬಿಕ್ಕಳಿಕೆ ನಿಲ್ಲುವುದು ಹೊಟ್ಟೆ ಹುಣ್ಣಾಗುವುದು। 
ನಕ್ಕಿಬಿಡು ನೋವಿನಲು - ಅನಿಕೇತನ॥ 84 ॥ 

Sunday, April 25, 2021

ಚೌಪದಿ - 83

ಅತಿಯಾದ ಬುದ್ಧಿಯನುಪಯೋಗಿಸಿ ಮಾಡುವರು। 
ಮತಿಹೀನ ಕೆಲಸವನು ಹೀನ ಮತಿಯವರು॥ 
ಮತಿಗೆಟ್ಟು ಮಾಡಿರುವ ಹೀನಾಯ ಕೆಲಸವನು। 
ಅತಿಯಾಗಿ ಹೊಗಳುವರೊ - ಅನಿಕೇತನ॥ 83 ॥ 
 


Saturday, April 24, 2021

ಚೌಪದಿ - 82

ನಗುನಗುತ ಬದುಕಿಬಿಡು ಮನವನ್ನು ನೋಯಿಸದೆ। 
ದುಗುಡಗಳ ನೀ ಮರೆತು ಪಯಣವನು ಮಾಡು॥ 
ಜಗದಲ್ಲಿ ಕಷ್ಟಗಳು ಮನುಕುಲಕೆ ಹೊಸತಲ್ಲ। 
ರಗಳೆಗಳ ಬದಿಗಟ್ಟೊ - ಅನಿಕೇತನ॥ 82 ॥ 

ಚೌಪದಿ - 81

ವಾರಗಳುರುಳುತಿರಲು ಬಲುಬೇಗ ವರ್ಷದಲಿ। 
ಮೂರುದಿನಗಳ ಬದುಕನರಿತಿಹೆವು ನಾವು॥ 
ಭಾರಗಳನೊಂದೊಂದೆ ಕಡಿಮೆಮಾಡುತ ನಡೆಯೆ। 
ಸಾರವಿದೆ ಜೀವನಕೆ - ಅನಿಕೇತನ॥ 81 ॥ 

Friday, April 23, 2021

ಚೌಪದಿ - 80

ಮಳೆಯಿಂದ ಭೂಮಿಯನು ಮುಟ್ಟುತಿರೆ ಒಲವಿನಲಿ। 
ಇಳೆಯು ತಾ ನಾಚಿಹಳು ನೀರಾಗಿ ಕರಗಿ॥ 
ಹೊಳೆದಿಹಳು ಭೂಮಿ ತಾ ಸೂಕ್ಷ್ಮದಲಿ ಹಸಿರಾಗಿ। 
ಮಳೆರಾಯ ಸುರಿಸಿರಲು ಮುಸಲಧಾರೆ॥ 80 ॥  

Thursday, April 22, 2021

ಚೌಪದಿ - 79

ಗಗನದಲಿ ಗುದ್ದಾಡಿ ಮೋಡಗಳು ಹೋರಾಡಿ। 
ಹಗಲೆಲ್ಲ ಬೆಂದಿದ್ದ  ಧರಣಿಯನು ತಣಿಸೆ॥ 
ಧಗಧಗಿಸಿ ಉರಿದಿದ್ದ ಭೂಮಿಯನು ಸೂಕ್ಷ್ಮದಲಿ। 
ಹಗುರಾಗಿಸಿದ ಮಳೆಯೊ - ಅನಿಕೇತನ॥ 79 ॥ 

Wednesday, April 21, 2021

ಚೌಪದಿ - 78

ಕಾಮನೆಯದೀಡೇರೆ ಮಾಡುನೀಂ ತಪವನ್ನು। 
ನೇಮದಲಿ ನಿಷ್ಠೆಯಲಿ ಭಜಿಸುತಿರೆ ದಿನವು॥ 
ನಾಮಜಪ ಮಾಡುತಿರೆ ಹಗುರಾಗುವುದು ಮನವು। 
ರಾಮನಾಮವ ಜಪಿಸೊ - ಅನಿಕೇತನ॥ 78 ॥ 

Monday, April 19, 2021

ಚೌಪದಿ - 77

ಬಿಗುಮಾನ ತೊರೆದರೇ ಸುಲಭವೋ ಮಾತದುವು। 
ನಗುಮೊಗವ ಬೀರುತ್ತಲಿದ್ದರೇ ಸೊಗಸು॥ 
ಹಗೆತನವ ಕೊಂದುಬಿಡು ಹಳೆಯದನು ಮರೆತುಬಿಡು। 
ಹೊಗೆಯಾಡದದು ಬೆಂಕಿ - ಅನಿಕೇತನ॥ 77 ॥ 

Friday, April 16, 2021

ಚೌಪದಿ - 76

ಹೊಸತರಲ್ಲಗಸತಾನೆತ್ತೆತ್ತಿಯೊಗೆದಂತೆ। 
ಹೊಸತಲ್ಲಿ ಹಲುಬುತನದಿಂದ ಸುಖವಿಹುದು॥ 
ತುಸುಕಾಲ ಕಳೆದಂತೆ ಕರುಬುವುದು ನಿಲ್ಲದೇ। 
ಮಸಿಬಳಿದು ಹೋಗುವುದೊ - ಅನಿಕೇತನ॥ 76 ॥ 

ಚೌಪದಿ - 75

ಮಾವಿನಾ ಹಣ್ಣುಗಳ ಸಿಹಿಯನ್ನು ಸವಿಯುತ್ತ। 
ಬೇವಿನಾ ಕಹಿಯನ್ನು ಬಾಯಲ್ಲಿ ಹೀರಿ॥ 
ಮಾವುಬೇವುಗಳಿಂದ ಬದುಕನ್ನು ಅರಿತಿರಲು। 
ನೋವು ನಲಿವುಗಳಿದುವೆ - ಅನಿಕೇತನ॥ 75 ॥ 

Tuesday, April 13, 2021

ಚೌಪದಿ - 74

ಹೊಸವರುಷ ಬಂದಿರಲು ಹೊಸಬಾಳು ಬೆಳಗುವುದು। 
ಹೊಸಹುರುಪು ಮೂಡುವುದು ಹಳೆಯದನು ಮರೆತು॥ 
ಹೊಸತೊಡಕು ಹಬ್ಬದಲಿ ಹೊಸತನವೆ ಮೆರೆಯುವುದು। 
ಹೊಸತಿರಲಿ ಜೀವನವು - ಅನಿಕೇತನ॥ 74 ॥

Monday, April 12, 2021

ಚೌಪದಿ - 73

ಮದ್ದಿಲ್ಲವಸೂಯೆಗೆ ನಿಲ್ಲೊಲ್ಲ ಕರುಬುವಿಕೆ। 
ಗೆದ್ದಿಲ್ಲ ಮತ್ಸರವು ಯಾವ ಸಮಯದಲು॥ 
ಬಿದ್ದಿಹುದಹಂಕಾರ ಮೀಸೆಯದು ಮಣ್ಣಾಗೆ।   
ಮದ್ದಿಹುದು ಬಿದ್ದೊಡನೆ - ಅನಿಕೇತನ॥ 73 ॥ 

ಚೌಪದಿ - 72

ರಣಬಿಸಿಲು ತಿವಿದಿರಲು ಭೂಮಿಯನು ದಿನದಿನವು। 
ಮಣಭಾರ ಕೆಲಸವನು ಮಾಡುವನು ತಾನು॥ 
ಪಣತೊಟ್ಟ ರೈತನಿಗೆ ಸರಿಸಾಟಿ ಯಾರಿಹರು। 
ಕ್ಷಣಕೂಡ ಕರುಬದೆಯೆ - ಅನಿಕೇತನ॥ 72 ॥ 

ಚೌಪದಿ - 71

ಕರುಬಿದ ಸುಯೋಧನನು ಪಾಂಡುಸುತರನು ನೋಡಿ। 
ಕರುಬಿದನು ಕೌರವರ ಶಪಿಸುತ್ತ ಶಕುನಿ॥ 
ಕರುಬಿದನು ಶಿಶುಪಾಲ ವಾಸುದೇವನ ಹಳಿದು। 
ಕರುಬುವಿಕೆ ಹಿತಶತ್ರು - ಅನಿಕೇತನ॥ 71 ॥ 

Sunday, April 11, 2021

ಚೌಪದಿ - 70

ನರಿಬುದ್ಧಿಯಿದ್ದವರಸೂಯೆಯನು ಪಡದೆಯೇ। 
ಸರಿಯಾದ ದಾರಿಯಲಿ ಮಾಡಿದರೆ ಪಯಣ॥ 
ಹರಿಹರರು ತೋರುವರು ಮುಕ್ತಿಯಾ ಹಾದಿಯನು। 
ಪರಿಗಣಿಸಿ ಲೆಕ್ಕವನು - ಅನಿಕೇತನ॥ 70 ॥ 

Friday, April 09, 2021

ಚೌಪದಿ - 69

ಬಿಸಿಲಿನಲಿ ಬೇಯುತ್ತ ಹಗಲೆಲ್ಲ ದುಡಿಯುವರು। 
ಸಸಿನೆಟ್ಟು ಕಸಿಮಾಡಿ ಕೈಮುಗಿದು ಭುವಿಗೆ॥ 
ಹಸಿಯಾದ ಭೂಮಿಯನು ಫಲವತ್ತು ಮಾಡುತ್ತ। 
ಹಸಿರಿನಲೆ ಬದುಕುವರೊ - ಅನಿಕೇತನ॥ 69 ॥ 

ಚೌಪದಿ - 68

ಮೆಲ್ಲುಸಿರ ಮಾತಿನಲಿ ನಾಕವೇ ಅಡಗಿಹುದು। 
ಸಲ್ಲುವುದು ಫಲವದುವು ನಿನ್ನ ನುಡಿಯಲ್ಲಿ॥ 
ಕಲ್ಲುಸಕ್ಕರೆಯಂಥ ರುಚಿಯಿರಲಿ ಪದಗಳಲಿ। 
ಬೆಲ್ಲವನು ನೀ ಸವಿಯೊ - ಅನಿಕೇತನ॥ 68 ॥

Thursday, April 08, 2021

ಚೌಪದಿ - 67

ಪದಗಳಿಗೆ ನಿಲುಕದಾ ಭಾವನೆಯು ಮೂಡಿಹುದು। 
ಹದವಾಗಿರುವ ಮನವು ಪುಳಕಗೊಂಡಿಹುದು॥ 
ಕದತೆರೆದು ಹಾಡಿಹೆನು ಕುಣಿದಿಹೆನು ನಲಿದಿಹೆನು। 
ಬದಲಾದ ಸಮಯಗಳಲನಿಕೇತನ॥ 67 ॥ 

Wednesday, April 07, 2021

ಚೌಪದಿ - 66

ರಸವಾದ ಪಾಕವನು ಒಲವಿಂದ ಬಡಿಸುತ್ತ। 
ಹಸನಾದ ಜೀವನಕೆ ಬೆಳೆದು ನಿಂತಿಹಳು॥ 
ಬಸಿರಾಗಿಹಳು ಭೂಮಿ ವರುಣನಾ ಸ್ಪರ್ಶಕ್ಕೆ। 
ಹಸಿರಾಗಿಹಳು ಧರಣಿ - ಅನಿಕೇತನ॥ 66 ॥ 

ಚೌಪದಿ - 65

ಹುಚ್ಚು ಮನಸಿನಾ ಹತ್ತು ಮುಖಗಳು ಬರುತ ಹೂ-। 
ಗುಚ್ಛವನು ತಂದಿಹವು ಸಂತಸವ ಬೀರಿ॥ 
ರಚ್ಚೆ ಹಿಡಿದಿಹ ಮನವ ಸ್ವಚ್ಛಗೊಳಿಸಿ ದಿನವು। 
ಹಚ್ಚ ಹಸಿರಾಗಿರಿಸೊ - ಅನಿಕೇತನ॥ 65 ॥ 

Tuesday, April 06, 2021

ಚೌಪದಿ - 64

ಮಾಡದೆಯೆ ನಿರೀಕ್ಷೆ ಯಾರಿಂದ ಏನನೂ। 
ಹಾಡುವುದು ಹಕ್ಕಿಯದು ರಾಗದಲಿ ದಿನವು॥ 
ನೋಡದನು ಕಲಿಯುವುದು ನಮಗಿದೆಯೊ ಸಾಕಷ್ಟು। 
ಗೂಡನ್ನು ಬಿಟ್ಟು ನಡೆ - ಅನಿಕೇತನ॥ 64 ॥ 

ಚೌಪದಿ - 63

ಅರಿಶಿನದ ಕೊಂಬುಗಳು ಪರಿಮಳವ ಬೀರುತಿರೆ। 
ಗರಿಗೆದರಿ ತೂಗಿಹುವು ಅಡಿಕೆ ತೆಂಗುಗಳು॥ 
ಗರಿಬಿಚ್ಚಿ ಕುಣಿಯುತಿರೆ ನವಿಲುಗಳು ಮಳೆಯಲ್ಲಿ। 
ಪರಿಸರದ ಹಸಿರಿದುವೆ - ಅನಿಕೇತನ॥ 63 ॥ 

Monday, April 05, 2021

ಚೌಪದಿ - 62

ಎಲೆಯೊಂದು ಚಿಗುರುವುದು ಕೆಂಬಣ್ಣವಾಗುತಲಿ। 
ಎಲೆಯೊಂದು ಬೆಳೆಯುವುದು ಹಸಿರಾಗಿ ತಾನು॥ 
ಎಲೆಯೊಂದು ಉದುರುವುದು ಒಣಗುತ್ತ ಹಣ್ಣಾಗಿ। 
ಎಲೆಗಳಾ ಕಥೆಯಿದುವೆ - ಅನಿಕೇತನ॥ 62 ॥ 

ಚೌಪದಿ - 61

ಹುಸಿಯಾದ ಬಡಿವಾರ ಒಳಿತಲ್ಲ ಯಾರಿಗೂ। 
ಹಸಿರೆಲೆಯು ಒಣಗುವುದು ಮೆರೆಯುತ್ತ ದಿನವು॥ 
ಕಸಿಮಾಡೆ ಮನವನ್ನು ಆಗುವುದು ಸುಂದರವು। 
ನಸುನಗುತ ಜಗ ನೋಡು- ಅನಿಕೇತನ॥ 61 ॥ 

Sunday, April 04, 2021

ಒಬ್ಬಟ್ಟು ಪುರಾಣ.

ಬೇಳೆ ಒಬ್ಬಟ್ಟು - ಶ್ರೀವರಮಹಾಲಕ್ಷ್ಮೀ ವ್ರತ 
ಕಾಯಿ ಒಬ್ಬಟ್ಟು - ಶ್ರೀಸ್ವರ್ಣಗೌರೀ ವ್ರತ 
ಕೊಬ್ಬರಿ ಒಬ್ಬಟ್ಟು - ಶ್ರೀ ಅನಂತಪದ್ಮನಾಭ ವ್ರತ 
ಕೊಬ್ಬರಿ ಒಬ್ಬಟ್ಟು - ಯುಗಾದಿ 

ನಮ್ಮ ಮನೆಯಲ್ಲಿ, ನಮ್ಮ ಅಜ್ಜಿಯ ಕಾಲದಿಂದಲೂ, ಈ ಪದ್ಧತಿ ನಡೆದುಕೊಂಡು ಬಂದಿದೆ. 
And the ಒಬ್ಬಟ್ಟು ಪುರಾಣ continues... 

ಚೌಪದಿ - 60

ಕಾಯಕವ ನೀ ಮಾಡು ಭಕ್ತಿಯಲಿ ಮನವಿಟ್ಟು।
ಬಾಯನ್ನು ಮುಚ್ಚುತ್ತ ಸದಾಕಾಲವೂ॥
ನೋಯಿಸದೆ ಯಾರನೂ ಆದರಿಸೆ ಒಲವಿನಲಿ।
ಕಾಯುವುದು ಧರ್ಮವದು - ಅನಿಕೇತನ॥ 60 ॥

ಚೌಪದಿ - 59

ಆಳುವವ ನೀನಾಗು ಜಯಿಸುತ್ತ ಲೋಕವನು। 
ಬಾಳಿನಾ ಹಾದಿಯಲಿ ಹಗಲಿರುಳು ದುಡಿದು॥ 
ಏಳುಬೀಳಿನ ನಡುವೆ ರಗಳೆಯನು ಮರೆತರೇ। 
ಬಾಳು ಹಸಿರಾಗುವುದು - ಅನಿಕೇತನ॥ 59 ॥ 

Friday, April 02, 2021

ಚೌಪದಿ - 58

ಇಳೆಯೆಲ್ಲ ಹೊತ್ತುರಿದು ಆಗುತಿರೆ ಯುದ್ಧವದು। 
ಹೊಳೆಯಾಗಿ ಹರಿದಿಹುದು ರಕ್ತದೋಕುಳಿಯು॥ 
ಕಳವಳವ ನೀಗಿಸಲು ಬೇಡುತ್ತ ದೇವರಲಿ। 
ಮಳೆಗಾಗಿ ಕಾಯುತಿಹ - ಅನಿಕೇತನ॥ 58 ॥

Wednesday, March 31, 2021

ಚೌಪದಿ - 57

ಅರಳುತಿರೆ ಹೂವೊಂದು ನಿರೀಕ್ಷೆಯನಿಡದೆಯೆ। 
ಮರಳುತಿದೆ ಜೀವನವು ಮೊದಲಿನಾ ಹಾಗೆ॥ 
ಸರಿಯಾದ ಹಾದಿಯಲಿ ಪಯಣವದು ಸಾಗುತಿರೆ। 
ಬರಡಾಗದೀಬದುಕು - ಅನಿಕೇತನ॥ 57 ॥ 


Tuesday, March 30, 2021

ಚೌಪದಿ - 56

ಕನವರಿಸಿ ನಿದಿರೆಯಲಿ ಕಾದಿಹೆನು ಹಗಲಿರಳು। 
ಕನಸೊಂದ ಕಟ್ಟುತ್ತ ಜೀವವನೆ ತೇಯ್ದು॥ 
ನನಸಾಗಬೇಕೆಂದು ಸಂಕಲ್ಪ ಮಾಡಿಹೆನು। 
ಮನದಲ್ಲಿ ಛಲವಿಟ್ಟು - ಅನಿಕೇತನ॥ 56 ॥ 

ಚೌಪದಿ - 55

ದಿನದಿನವು ಹೊಸತನ್ನು ಹುಡುಕುತ್ತ ಸಾಗುವೆವು। 
ಕನಸುಗಳ ಕಟ್ಟುತ್ತ ನನಸದನು ಮಾಡಿ॥ 
ಅನುದಿನವು ಸಂತಸವು ಮನದಲ್ಲಿ ಕಾಯುತಿರೆ। 
ಘನವಾಗುವುದು ಬದುಕು - ಅನಿಕೇತನ॥ 55 ॥ 




Monday, March 29, 2021

ಚೌಪದಿ - 54

ಜಗ್ಗದೆಯೆ ಜಗವನ್ನು ಜಯಿಸುವಾ ನಿಟ್ಟಿನಲಿ। 
ಹಿಗ್ಗುತಲಿ ಹೋರಾಡು ಎದುರಾಗೆ ಸೋಲು॥ 
ಕುಗ್ಗದೆಯೆ ಕಣ್ತೆರೆದು ಕಾಯುತಿರೆ ಸಮಯಕ್ಕೆ। 
ಸಗ್ಗವನೆ ಕಾಣುವೆಯೊ - ಅನಿಕೇತನ॥ 54 ॥ 

ಚೌಪದಿ - 53

ಬೇಯುತಿದೆ ಅನ್ನವದು ಮಧ್ಯಾಹ್ನದೂಟಕ್ಕೆ। 
ಹಾಯೆನಿಸಿ ಬಾಳೆಲೆಗೆ ನೀರನ್ನು ಚಿಮುಕಿ॥ 
ಪಾಯಸವ ತಿನ್ನುತಿರೆ ಹರಿನಾಮ ಜಪಿಸುತಲಿ। 
ಕಾಯುವಿಕೆಯಲೆ ಸುಖವು - ಅನಿಕೇತನ॥ 53 ॥ 

Sunday, March 28, 2021

ಚೌಪದಿ - 52

ರಾಮನಾ ಬರುವಿಕೆಗೆ ಕಾಯುತ್ತ ಕುಳಿತಿಹಳು। 
ನೇಮದಲಿ ಆರಿಸುತ ಬೋರೆ ಹಣ್ಣುಗಳ॥ 
ಕಾಮನೆಯು ಕೈಗೂಡಿ ಶಬರಿಯನನುಗ್ರಹಿಸೆ। 
ರಾಮನೇ ಬರುತಿಹನು - ಅನಿಕೇತನ॥ 52 ॥ 

ಚೌಪದಿ - 51

ಶರಶಯ್ಯೆಯಲಿ ಮಲಗಿ ಜೀವವನು ಹಿಡಿದಿಹನು। 
ಪರಲೋಕವನು ಸೇರೆ ಉತ್ತರಾಯಣದಿ॥ 
ಮರಣಕ್ಕೆ ಕಾದಿಹನು ಗಂಗೆಯಾ ಮಗನವನು। 
ಕುರುವಂಶದಾ ಹಿರಿಯ - ಅನಿಕೇತನ॥ 51 ॥








ಎಲ್ಲರಲೂ ಓರ್ವ ಬರಹಗಾರ.

ದೊಡ್ಡ ದೊಡ್ಡ ಬರವಣಿಗೆಗಾರರು ಹುಟ್ಟಿನಿಂದಲೇ ಬರಹಗಾರರಾಗಿರುವುದಿಲ್ಲ. ಅವರು, ತಮ್ಮ ಮನದಾಳದಲ್ಲಿ ಮೂಡುವ ಮಾತುಗಳಿಗೆ ಅಕ್ಷರದ ರೂಪ ಕೊಟ್ಟಾಗ, ಅದೊಂದು ಲೇಖನವಾಗಿ, ಕಥೆಯಾಗಿ, ಕವನವಾಗಿ, ಅಥವಾ ಮಹಾಗ್ರಂಥವಾಗಿ ರೂಪುಗೊಳ್ಳುತ್ತದೆ.

ಪ್ರತಿಯೊಬ್ಬರಲ್ಲೂ ವೈವಿಧ್ಯವುಳ್ಳ ವಿಚಿತ್ರ ಮನಸ್ಸು ಇರುತ್ತದೆ. ಆ ಮನಸ್ಸು ಹಲವು ರೀತಿ ಯೋಚಿಸಿ, ಅಂತೆಯೇ ಹಲವು ರೀತಿಯ ಸಲಹೆ, ಸೂಚನೆ, ಅನಿಸಿಕೆಗಳನ್ನು ನೀಡುತ್ತಿರುತ್ತವೆ. ಆದರೆ, ನಾವು ಆ ಮನಸ್ಸನ್ನು ನಿಯಂತ್ರಿಸಿ, ನಮ್ಮ ಪ್ರತಿಭೆಗಳನ್ನು ಹೊರಹೊಮ್ಮಲು ಬಿಡುವುದೇ ಇಲ್ಲ.

ಇನ್ನು ಕೆಲವರು, ಮನಸ್ಸು ಹೇಳಿದಂತೆಯೇ ಮಾಡಿ, ಮಹಾನ್ ವ್ಯಕ್ತಿಗಳಾಗಿಯೂ, ರಾಜಕಾರಣಿಗಳಾಗಿಯೂ, ಬರಹಗಾರರಾಗಿಯೂ ರೂಪುಗೊಳ್ಳುತ್ತಾರೆ. ಮಿಕ್ಕವರು, ಅದು ನನ್ನಿಂದ ಸಾಧ್ಯವೇ? ಎಂಬ ಪ್ರಶ್ನೆಯನ್ನು ತಮ್ಮ ಮುಂದೆ ಇರಿಸಿಕೊಂಡು ಶೂನ್ಯತಾಭಾವದಲ್ಲೇ ಜೀವನವನ್ನು ಸವೆಸುತ್ತಾರೆ.

ನಮ್ಮೊಳಗಿರುವ ಚಿಂತಕನ, ಬರಹಗಾರನ, ಅಥವಾ ಚಿತ್ರಕಾರನನ್ನು ಕಟ್ಟಿಹಾಕದೇ, ಹರಿಯಬಿಟ್ಟರೆ, ಮನಸ್ಸಿನ ಆಲೋಚನೆಗಳಿಗೆ, ಆಕೃತಿಯನ್ನು ನೀಡುವ ಸಾಧನಗಳನ್ನು ಕೈಯಲ್ಲಿ ಹಿಡಿದಾಗ ಮನಸ್ಸಿನ ಆಕೃತಿಗಳು ಹೊರಹೊಮ್ಮುತ್ತವೆ. ಆಕೃತಿಯ ಸಾಧಕ-ಬಾಧಕಗಳ ಬಗ್ಗೆ ತಲೆಕೆಡಸಿಕೊಳ್ಳಬಾರದು. ಎಲ್ಲರು ಮೆಚ್ಚುವಂತಿರಬೇಕೆಂದಿಲ್ಲ. ಬೆರಳೆಣಿಕೆಯಷ್ಟು ಮಂದಿಯಾದರೂ ಮೆಚ್ಚಿದರೆ ಸಾಕು, ನಮ್ಮೊಳಗಿನ ಆ ವ್ಯಕ್ತಿಯಲ್ಲಿ ಸಾರ್ಥಕ ಮನೋಭಾವ ಉಂಟಾಗುತ್ತದೆ.

‪#‎ಅನುಭವ‬

Half Century

I never knew I could ever write a four-line poem. The journey so far has been very interesting. 


I always thought I could never write a poem. Also, when I started to write the poem, it was nowhere near to the rhythm, rhyme, or whatsoever. As I started to understand the concept of the poems, I got hold of the rhythm and the rhymes. 


Now that I have reached the 50-mark, this journey so far has been very exciting. 


Thanks to my lovely friends who have taught and inspired me. I hope this journey of literature continues till my last breath. 

Saturday, March 27, 2021

ಚೌಪದಿ - 50

ಅಹಂಕಾರದ ಕಿಚ್ಚು ಯುದ್ಧದಲಿ ಅಳಿದಿರಲು। 
ಅರ್ಹಂತ ಜನಿಸಿದನು ಭರತನನು ಜಯಿಸಿ॥ 
ಮಹಂತದ ದೀಕ್ಷೆಯ ಪಡೆದು ತಾನಾಗಿಹನು। 
ಅರ್ಹಂತ ಬಾಹುಬಲಿ - ಅನಿಕೇತನ॥ 50 ॥ 

Friday, March 26, 2021

ಚೌಪದಿ - 49

ಹಾಲುಕುಡಿಯುತ ಬೆಳೆದು ವಿದ್ಯೆಯನು ಕಲಿಯುತ್ತ। 
ಕಾಲಮೇಲೆಯೆ ನಿಂತು ಹೋರಾಡುತಿರಲು॥ 
ಗಾಲಿಯದು ತಿರುಗುತಿರೆ ಜೀವನವು ಸಾಗುವುದು। 
ಲಾಲಿ ಚರಮದ ನಡುವೆ - ಅನಿಕೇತನ॥ 49 ॥ 

Thursday, March 25, 2021

ಚೌಪದಿ - 48

ಅರಿವಿನಾ ಅಲೆಗಳಲಿ ಅರಿತವರು ಮುಳುಗುತಿರೆ।
ಅರಿಯುವುದು ಸರಿತಪ್ಪು ಮನದಾಳದಲ್ಲಿ॥ 
ಅರಿವಿನಲಿ ಅರಿಯನ್ನು ಅರಿತರೇ ಅರಿಯುವುದು। 
ಅರಿವಿನಲೆ ಅರಿವಿಹುದು - ಅನಿಕೇತನ॥ 48 ॥ 

Wednesday, March 24, 2021

ಚೌಪದಿ - 47

ಸೋರುತಿದೆ ಬೆವರಹನಿ ಬಿಸಿಲನಾ ಬೇಗೆಯಲಿ। 
ಏರಿರಲು ತಾಪವದು ಬೇಸಿಗೆಯ ದಿನದೆ॥
ಊರಿನಲಿ ಬತ್ತಿರಲು ಬಾವಿಗಳು ಒಂದೊಂದೆ। 
ನೀರಿಗಾಗಿಯೆ ಕದನ - ಅನಿಕೇತನ॥ 47 ॥ 

ಚೌಪದಿ - 46

ಮೊಳಗೆ ಪಾಂಚಜನ್ಯವು ಬೋಧನೆ ಶುರುವಾಯಿತು। 
ಕಳೆಗುಂದದೆ ಕೇಳಿದನು ಕಿವಿಯಾ ಕೊಟ್ಟು॥ 
ಒಳಗಿನಾ ಕಣ್ತೆರೆಯೆ ವಿರಾಟವನು ನೋಡುತ। 
ಮೊಳಗಿದನು ಶಂಖವನು ಧನಂಜಯನು॥ 46 ॥ 

Tuesday, March 23, 2021

ಚೌಪದಿ - 45

ಕೇಡಿ ಗುಪ್ತರ ಸೊಕ್ಕನಡಗಿಸಲು ಛಲದಲ್ಲಿ। 
ಹೇಡಿತನವಿರದ ಸೇನೆಯನು ಬೆಳೆಸುತ್ತ॥ 
ನಾಡಲಿ ಸನಾತನದ ಧರ್ಮದುತ್ಥಾನಕ್ಕೆ। 
ಸೇಡಿನಾ ಯುದ್ಧವದು - ಅನಿಕೇತನ॥ 45 ॥ 

Monday, March 22, 2021

ಚೌಪದಿ - 44

ಹೊಸಕನಸ ಕಾಣುತ್ತ ಹೊಸಯುಕ್ತಿ ಬೆಳೆಸುತ್ತ। 
ಹೊಸಬದುಕ ಜೀವಿಸಲು ಅಣಿಯಾಗು ನೀನು॥ 
ಹೊಸವೈರಿ ಎದುರಾಗೆ ಸದೆಬಡಿದು ಮುನ್ನುಗ್ಗು। 
ಹೊಸಯುದ್ಧ ದಿನದಿನವು - ಅನಿಕೇತನ॥ 44 ॥ 

Sunday, March 21, 2021

ಚೌಪದಿ - 43

ಬದ್ಧವೈರಿಯು ಮನದ ಮೂಲೆಯಲಿ ಅವಿತಿರಲು। 
ಯುದ್ಧವೇ ಆಗಿಹುದು ನಮ್ಮೊಳಗೆ ಹೊರಗೆ॥ 
ಶುದ್ಧಮಾಡಲು ಮನವ ಇದನೆಲ್ಲ ನೋಡುತ್ತ। 
ಬುದ್ಧನೇ ಬರುತಿಹನು - ಅನಿಕೇತನ॥ 43 ॥

Saturday, March 20, 2021

ಚೌಪದಿ - 42

ಹಲವಾರು ವರ್ಷಗಳು ಕಳೆದರೂ ಸಮಯಕ್ಕೆ। 
ಫಲಕೊಡುವನೆಲ್ಲರಿಗು ಬೇಸಿಗೆಯು ಮುಗಿಯೆ॥ 
ಛಲವಂತ ಲಯವಂತ ಧೀಮಂತ ಕರುಣಾಳು।
ಬಲಶಾಲಿ ಮಳೆರಾಯ - ಅನಿಕೇತನ॥ 42 ॥ 

ಚೌಪದಿ - 41

ಅಳುತಲಿದೆ ಆಗಸವು ನೆಲದ ಕಷ್ಟವನೋಡಿ।
ತೊಳಲುತಾ ಶಿರದಲ್ಲಿ ಭಾರವನು ತುಂಬಿ॥ 
ಬಳುಕುತಾ ಗುಡುಗುತಾ ಸುರಿಯುತಿರೆ ಕಣ್ಣೀರು। 
ಮಳೆಯಾಗಿಹುದು ಇಳೆಗೆ - ಅನಿಕೇತನ॥ 41 ॥ 

Friday, March 19, 2021

ಚೌಪದಿ - 40

ಬಂಗಾರದಂತಹಾ ದಿನಕರನು ಮುಳುಗಿರಲು। 
ರಂಗಾದ ಬಾನಿನಲಿ ಕವಿದಿಹುದು ಮೋಡ॥ 
ತಂಗಾಳಿ ಬೀಸಿರಲು ಮುಸ್ಸಂಜೆ ವೇಳೆಯಲಿ। 
ಸಂಗಾತಿ ಮಳೆಯದುವೆ - ಅನಿಕೇತನ॥ 40 ॥ 

ಚೌಪದಿ - 39

ಬೆಳೆಯುತ್ತ ಬಿಸಿಲಲ್ಲಿ ಬಾಡುತ್ತ ಚಳಿಯಲ್ಲಿ। 
ಹೊಳೆಯುತ್ತ ಮಳೆಯಲ್ಲಿ ಬದುಕುವೆವು ನಾವು॥ 
ಸುಳಿಯಲ್ಲಿ ಸಿಲುಕದೇ ಸಾಗುತಿರೆ ಮನವದುವು।
ಸೆಳೆಯುವುದು ದೈವವದು  - ಅನಿಕೇತನ॥ 39 ॥ 

ಚೌಪದಿ - 38

ಹಳೆಯದನು ನೆನೆನೆನೆದು ಜೀವನವೆ ಹೊರೆಯಾಗಿ। 
ಅಳುತಿಹುದು ಮನವು ನೋವಿನಾ ಬೇಗೆಯಲಿ॥ 
ತಳಮಳವು ದುಗುಡಗಳು ಎದೆಯಲ್ಲಿ ಉಮ್ಮಳಿಸಿ। 
ಮಳೆಯಾಗಿಹುದು ಮನದೆ - ಅನಿಕೇತನ॥ 38॥ 

ಚೌಪದಿ - 37

ವನಕುಸುಮ ಅರಳಿದೊಡೆ ಮಣ್ಣಿನಾ ಪರಿಮಳಕೆ। 
ನನಗದುವೆ ಉತ್ಸಾಹ ಮನವೆಲ್ಲವರಳಿ॥ 
ಕನಸುಗಳು ನನಸಾಗಿ ಹಸನಾಗುತಿರೆ ಬದುಕು। 
ಮನದೊಳಗೆ ಮಳೆಯಿದುವೆ - ಅನಿಕೇತನ॥ 37 ॥ 

Wednesday, March 17, 2021

ಚೌಪದಿ - 36

ಕಗ್ಗದರಸರ ಹುಟ್ಟು ಹಬ್ಬದಾ ದಿನವಿದುವೆ। 
ಅಗ್ಗಳದ ಸರಳತೆಯ ಮೆರೆದ ಗುಂಡಪ್ಪ॥ 
ಲಗ್ಗೆಯಿಡೆ ಭಾಷಾಂತರಂಗದ ಆಳದಲಿ। 
ಸಗ್ಗವದೊ ಸಾಹಿತ್ಯ ಅನಿಕೇತನ॥ 36 ॥ 

Friday, March 12, 2021

ಚೌಪದಿ - 35

ಜಡಹಿಡಿದ ಮೈಮನಕೆ ಸಾಗರನೆ ಸಂಜೀವಿ। 
ತಡೆರಹಿತ ಅಲೆಗಳಲಿ ಬೀಳುತಿರೆ ನಾವು॥ 
ಸಡಿಲವಾಗುವುದು ಜಡ ಸೋಕಿದೊಡೆ ಮರಳಿನಲಿ। 
ಕಡಲ ಬೆಳದಿಂಗಳಲಿ - ಅನಿಕೇತನ॥ 35 ॥ 

Thursday, March 11, 2021

ಚೌಪದಿ - 34

ಸಶಕ್ತರನು ಮಾಡುವ ಪರಮೇಶನೀ ಈಶ। 
ನಿಶೆಹಗಲು ಎನದೆ ಭಕ್ತರನು ಕಾಯ್ವನ್॥ 
ರಕ್ಷಿಸಲು ಲೋಕವನು ಹಾಲಾಹಲವ ಕುಡಿದ। 
ವಿಷಕಂಠನಿರುಳಿದುವೆ - ಅನಿಕೇತನ॥ 34 ॥ 

ಚೌಪದಿ - 33

ರಾಮನಾ ಭಕ್ತಿಯಲಿ ಪ್ರೀತಿಯನು ಕಂಡೆನು। 
ಶ್ಯಾಮನ ಮಾತಿನಲಿ ತರ್ಕವನು ಕಂಡೆ॥ 
ಕಾಮನನು ಕೊಂದವನ ತ್ರಿನೇತ್ರವ ಕಂಡೆ। 
ಈ ಮೂವರ ಪೂಜಿಸೊ - ಅನಿಕೇತನ॥ 33 ॥ 

ಚೌಪದಿ - 32

ಮಹಾಭಕ್ತರಿಗನುಗ್ರಹನೀಡುತಹರಸುವ। 
ಮಹಾಪಿತನವನುಗಣಪಗುಹಗಣಗಳಿಗೆ॥  
ಸಹಾಯಹಸ್ತವತೋರಿಸಲಹುವದೇವನಿಗೆ। 
ಮಹಾಶಿವರಾತ್ರಿಯು - ಅನಿಕೇತನ॥ 32 ॥ 

Wednesday, March 10, 2021

ಚೌಪದಿ - 31

ನಿಶಾಚರನಿರುಳ ಕಾವಲುಗಾರನಾಗಿರಲು।
ಪಿಶಾಚಿ ಪ್ರೇತಗಳನೋಡಿಸಲು ಬರುವ॥ 
ವಿಶೇಷವಿರುವುದವನವದನವಾ ಸಮಯದೀ। 
ಸಶೇಷದ ಪಹರೆಯದು - ಅನಿಕೇತನ॥ 31 ॥ 

Tuesday, March 09, 2021

ಚೌಪದಿ - 30

ಹಾಲಿನಂತಹ ಬೆಳಕ ಚೆಲ್ಲಿರಲು ಚಂದಿರನು। 

ತೇಲಿಬಂದಿದೆ ಗಾಳಿ ಬಲು ದೂರದಿಂದ॥ 

ಆಲಿಸಿಹೆನಿಂಪಾದ ಗೀತೆಯನು ಮಲಗುತ್ತ। 

ಲಾಲಿಹಾಡಿಹುದಿರುಳು - ಅನಿಕೇತನ॥ 30 ॥

Monday, March 08, 2021

ಚೌಪದಿ - 29

ಇಂಪಾಗಿ ಹಾಡುವಾ ಹಕ್ಕಿಗಳು ಮಲಗಿಹವು। 
ಸೊಂಪಾಗಿ ಬೆಳೆದಿರುವ ಮರದ ಗೂಡಿನಲಿ॥ 
ಕಂಪನ್ನು ಚೆಲ್ಲಿಹನು ಚಂದಿರನು ಮೇಲೇರಿ। 
ಚಂದ್ರೋದಯವಿದುವೆ - ಅನಿಕೇತನ॥ 29 ॥

Sunday, March 07, 2021

ಚೌಪದಿ - 28

ಕತ್ತಲಲಿ ಎಲ್ಲರೂ ಜೊತೆಗೂಡಿ ತಿನ್ನುತಿರೆ। 
ಹೆತ್ತವಳು ಹಾಕುವಾ ಕೈತುತ್ತಿನೂಟ॥ 
ಬತ್ತುವುದು ಹಸಿವು ಬೆಳದಿಂಗಳಾ ಬೆಳಕಿನಲಿ। 
ಮತ್ತು ಬರುವುದು ನಿದಿರೆ - ಅನಿಕೇತನ॥ 28 ॥

ಚೌಪದಿ - 27

ಬಾಳಿನಾ ಕಡಲಲ್ಲಿ ಮುಳುಗದೇ ಈಜುತಿರು। 
ಹಾಳುಮಾಡಿಕೊಳದೇ ಜೀವನವ ನೀನು॥ 
ಆಳವನು ನೋಡುತಿರೆ ಬೆಳಕಿನಲೆ ಕಾಣುವುದು। 
ಏಳುಬೀಳುಗಳಿದುವೆ - ಅನಿಕೇತನ॥ 27 ॥ 

Friday, March 05, 2021

ಚೌಪದಿ - 26

ಹೋಗಿಹುದು ಮುಸ್ಸಂಜೆ ಹೊಸತೊಂದು ದಿನತರಲು। 
ಆಗಸವ ಸಿಂಗರಿಸಿ ಒಲವಿಂದ ತಾನು॥ 
ಸಾಗುತಿದೆ ಕತ್ತಲೆಯು ಮುಂಜಾವಿನೌತಣಕೆ। 
ಆಗಲಿದೆ ನಲ್ಬೆಳಗು- ಅನಿಕೇತನ॥ 26 ॥ 

ಚೌಪದಿ - 25

ಬೇಸರವ ಪಡದೆಯೇ ನಡೆಸಿಬಿಡು ಜೀವನವ। 
ನೇಸರನ ನೋಡುತಾ ಬದುಕುವುದ ಕಲಿಯೊ॥ 
ಘಾಸಿಗೊಳಗಾಗದೆಯೆ ಬೆಳಗುವವನೆಂದೆಂದು। 
ಆಸೆಗಳ ಹುಟ್ಟಿಸುತ - ಅನಿಕೇತನ॥ 25 ॥ 


Thursday, March 04, 2021

ಚೌಪದಿ - 24

ಕಾನನವು ಕರೆದೊಡೇ ಭಯವೇಕೆ ಪಡುವೆನೀಂ?। 
ಮಾನವನ ಮುಸ್ಸಂಜೆ ಮುಗಿಯುವುದು ಹೀಗೆ॥ 
ಯಾನವನು ಮಾಡುತಿರೆ ಸುಖವಾಗುವುದು ಪಯಣ। 
ಹೂನಗೆಯ ಬೆಳಗಿದುವೆ - ಅನಿಕೇತನ॥ 24 ॥ 

Wednesday, March 03, 2021

ಚೌಪದಿ - 23

ನಗುವೊಂದು ಬೇಕಿಹುದು ಹಗುರಾದ ಮನಸಿಗೂ। 
ಬಗೆಹರಿಯೆ ದುಗುಡಗಳು ಹೋಗುವುದು ನೋವು॥ 
ನಗುನಗುತ ಇರುವಾಗ ಕಣ್ಣುಗಳು ತುಂಬಿದರೆ। 
ಸೊಗಸಾದ ಬದುಕದುವೆ - ಅನಿಕೇತನ॥ 23 ॥ 

ಚೌಪದಿ - 22

ಹಿಮಕರಗಿ ನೀರಾಗಿ ಹರಿದಿರಲು ಬೆಟ್ಟದಿಂ।
ಸುಮವರಳಿ ಪರಿಮಳವ ಚೆಲ್ಲಿರಲು ಕಂಪು॥
ಡಮರುಗವ ನುಡಿಸುತಲಿ ಎದ್ದಿರಲು ಶಂಕರನು।
ನಮಿಸಿಹೆನು ನೋಡುತಲಿ ಶಿವನ ಮೊಗವ॥ 

ಪರಮಶಿವ ಪಾರ್ವತಿ ಜೊತೆಗೂಡಿ ನಗುತಿಹರು।
ಹರಸಿಹರು ಮಮತೆಯನು ತೋರಿಸುತ ನನಗೆ॥
ಕರಮುಗಿದು ನಾನಿಂದು ಭಕುತಿಯಲಿ ಹಾಡಿತಿರೆ।
ಸುರಿದಿಹುದು ಕಣ್ಣೀರು ಸಂತಸದಲಿ॥ 

ಹಣತೆಯನು ಹಚ್ಚುತ್ತ ದೀಪವನು ಬೆಳಗುತ್ತ।
ಗಣಪನಿಗೆ ನಮಿಸುತ್ತ ಬಾಗಿಹುದು ಶಿರವು॥ 
ಕಣಕಣದಿ ಹರಿದಿಹುದು ಭಕುತಿಯಾ ರಸಧಾರೆ। 
ಗುಣವಿರುವ ಮುಂಜಾವು - ಅನಿಕೇತನ॥ 22 ॥ 

Tuesday, March 02, 2021

ಚೌಪದಿ - 21

ಅದೇ ಬೆಳಕು ಅದೇ ಸೊಬಗು ಎಲ್ಲವೂ ಅದೇ।
ಅದೇ ಹೊಳಪು ಅದೇ ಸೊಗಸು ಸದಾ ಜೊತೆಗೆ॥
ಅದೇ ಇರಲಿ ಸದಾ ನಮಗೆ ಕಾಲಕಾಲವೂ।
ಅದೇ ಮುಂಜಾವಿರಲಿ - ಅನಿಕೇತನ॥ 21 ॥ 

Monday, March 01, 2021

ಚೌಪದಿ - 20

ಮೂಡಣದ ಆಗಸದಿ ಹೊಮ್ಮಿಹುದು ಚಿತ್ತಾರ।  
ಗೂಡಿನಾ ಹೊರಬಂದು ಇಣುಕಿಹನು ರವಿಯು॥ 
ನೋಡುತಿರೆ ಬಾನಿನಾ ಸೊಬಗನ್ನು ನಾವುಗಳು। 
ಹಾಡಿಹುದು ಮುಂಜಾವು - ಅನಿಕೇತನ॥ 20॥

Friday, February 26, 2021

ಚೌಪದಿ - 19

ನೆನಪುಗಳು ಶಾಪವೂ ಮರೆವೊಂದು ವರವೆಂದು।
ಮನಸಿನಲಿ ನೆನಪಿರಲಿ ಚಿರಕಾಲ ನಿನಗೆ॥ 
ನೆನಪುಗಳ ಮರೆಯದೆಯೆ ಮರೆತುಬಿಡು ಚಿಂತಿಸದೆ। 
ಮರೆವಿನಲಿ ಸುಖವಿಹುದೊ - ಅನಿಕೇತನ॥ 19 ॥ 

Thursday, February 25, 2021

ಚೌಪದಿ - 18

ಜೀವದಲಿ ಉಸಿರಿಹುದು ಮನದಲ್ಲಿ ನೆನಪಿಹುದು। 

ನೋವಿನಲಿ ಅಳುವಿಹುದು ನಗುವಿನಲಿ ನಲಿವು॥ 

ಬೇವಿನಲಿ ಕಹಿಯಿಹುದು ಮಾವಿನಲಿ ಸಿಹಿಯಿಹುದು। 

ಸಾವಿನಲಿ ದಿಟವಿಹುದು - ಅನಿಕೇತನ॥ 18 ॥ 



Tuesday, February 23, 2021

ಚೌಪದಿ - 17

ಉದಯದಲಿ ತಿಳಿಯಾಗಿ ನೇಸರನು ಬಂದಿರಲು। 
ಪದರಗಳ ಎಳೆಯಾಗಿ ಬಿಡಿಸಿಹುದು ಹೂವು॥ 
ಕದಗಳನು ಸಡಗರದಿ ತೆರೆದಾಗ ದೊರಕುವುದು। 
ಹದವಿರುವ ಮುಂಜಾವು - ಅನಿಕೇತನ॥ 17A ॥ 

ಉದಯದಲಿ ಬಾಲರವಿ ಎಳೆಗದಿರ ಚೆಲ್ಲಿರಲು। 
ಪತರಗಳನೊಂದೊಂದೆ ಬಿಡಿಸಿಹುದು ಹೂವು॥ 
ಕದಗಳನು ಸಡಗರದಿ ತೆರೆದಾಗ ದೊರಕುವುದು। 
ಹದವಿರುವ ಮುಂಜಾವು - ಅನಿಕೇತನ॥ 17B ॥ 





Monday, February 22, 2021

ಚೌಪದಿ - 16

ಬದುಕ ಈ ಪಾಠವನು ತಿಳಿದುಕೊಳೊ ಓ ಮನುಜ।
ಕದವ ಹಾಕಿಬಿಡು ಬೇಕಿರದ ವಿಷಯಕ್ಕೆ॥
ಬದುಕ ಈ ಹಾದಿಯನು ಹಿಡಿದರೇ ನಾವುಗಳು।
ಹದವಾಗುವುದು ಬದುಕು  - ಅನಿಕೇತನ॥ 16 ॥







Sunday, February 21, 2021

ಚೌಪದಿ - 15

ಬೆಳಕಿನಾ ಸಾಲುಗಳು ಎಂದೆಂದಿಗೂ ಇರಲು। 

ಕಳವಳವ ನೀಗಿಸಿದೆ ಗೆಲುವಿನಾ ಹಾದಿ॥ 

ತಳಮಳವು ದೂರಾಗೆ ಬಾಳಿನಾ ದಾರಿಯಲಿ। 
ಪಳಗಬೇಕಿದೆ ಮನವು - ಅನಿಕೇತನ॥ 15 ॥ 

ಚೌಪದಿ - 14

ಮೊಗದಗಲ ನಗುವಿನಾ ಛಾಯೆಯೂ ಮೂಡಿರಲಿ। 
ಜಗವಿರುವ ಸೊಬಗಿನಲಿ ಜಯವು ನಿನಗಿರಲಿ॥ 
ನಗುತಿರುವ ಮನಸಿನಲಿ ನೋವೆಂದು ಬರದಿರಲಿ। 
ನಗುವಿನಲಿ ಸುಖವಿರಲಿ - ಅನಿಕೇತನ॥ 14 ॥ 

Thursday, February 18, 2021

ಚೌಪದಿ - 13

ದುಂಡುಮಲ್ಲಿಯ ಕೈಪಿಡಿದ ಪಾದಪುಷ್ಪವನು। 
ಕಂಡಂಕುಡೊಂಕ ಹೆಡ್ಡರಸರೊಂದಾಗಿ॥ 
ಕೊಂಡಾಡೆ ಮುದ್ದುರಂಗನಾಂತರಾತ್ಮದಲಿ। 
ಗುಂಡಿಗೆಯನಂಜಳಿವುದನಿಕೇತನ॥ 13 ॥ 

ರಿಂಗಣದ ದಿಬ್ಬಣದಿ ಭಟ್ಟವಾಕ್ಯವ ಕೇಳು। 
ರಂಗಮಂಚದಿ ನಲಿವ ಶುಭಕರನ ನೋಡು॥ 
ರಂಗನಾಥನ ಭಕ್ತ ಮಂಗರಾಯನು ನುಡಿವ। 
ರಂಗಿನಾ ವಿದ್ಯೆಯಿದು - ಅನಿಕೇತನ ॥ 13.1 ॥ 

Tuesday, February 16, 2021

ಚೌಪದಿ - 12

ಸಾಕುಬೇಕುಗಳ ನಡವೆ ತೊಳಲುವುದು ಬಡಜೀವ।
ಅಂಕೆಯಿಲ್ಲವೊ ಬಯಕೆಗಳಿಗೆ ಬಾಳಲ್ಲಿ॥
ನಾಕನರಕಗಳೆರಡು ಇಲ್ಲಿಹವು ಮನದಲ್ಲಿ।
ಸಾಕುಬೇಕುಗಳದುವೆ - ಅನಿಕೇತನ॥ 12 ॥ 

ಚೌಪದಿ - 11

ಬೇಕಿಹುದು ಜೀವನಕೆ ಹೊಸದೊಂದು ಹುಡುಕಾಟ। 
ಬೇಕಿಹುದು ಜೀವನಕೆ ಗೆಲುವಿನಾ ಆಟ॥ 
ಬೇಕಿಹುದು ಜೀವನಕೆ ಹಗಲಿರುಳು ಹೋರಾಟ। 
ಬೇಕಿಹುದು ಜೀವನಕೆ - ಅನಿಕೇತನ॥ 11 ॥ 

Monday, February 15, 2021

ಚೌಪದಿ - 10

ಸಿಂಗರಿಸೆ ಆಗಸವ ಮೋಡಗಳು ಕವಿದಿಹುದು। 
ಕಂಗೊಳಿಸೆ ಸಾಗರವ ಹೊರಟಿಹುದು ನದಿಯು॥ 
ಮುಂದಿರಿಸಿ ಕಾಗದವ ಕುಳಿತಿಹನು ಗಾಯಕನು। 
ಸಂತಸದಿ ಹಾಡಿದವ - ಅನಿಕೇತನ॥ 10 ॥ 

ಚೌಪದಿ - 9

ಹೊಲದಲೇ ದುಡಿಯುತಾ ಕಳೆಯುವನು ಜೀವನವ। 
ಬಲವಿಹುದು ತೋಳಿನಲಿ ನೇಗಿಲನು ಹೊತ್ತು॥ 
ನೆಲದಲೇ ಬೆಳೆದುದನು ತಿನಿಸುವನು ನಮಗೆಲ್ಲ। 
ಒಲವಿನಲಿ ಬಾಳುವನು - ಅನಿಕೇತನ॥ 9 ॥ 

Sunday, February 14, 2021

ಚೌಪದಿ - 8

ಬಾಳ ಹೋರಾಟದಲಿ ಬಂಧುಗಳು ನಾವುಗಳು।
ತೊಳಲಾಡುವುದು ಜೀವ ಸೇವಿಸುತ ನೋವು॥
ತಿಳಿದುಕೋ ಮನುಜನೇ ನಗುನಗುತ ಬದುಕುನೀಂ॥ 
ಬಾಳಿನಾ ಗೆಲುವದುವೆ - ಅನಿಕೇತನ॥ 

Saturday, February 13, 2021

Writer’s Block

It’s been five years now since I stopped writing any articles, poems, captured anything interesting moment in my DSLR. I was wondering what happened to me in those five years. 

Sometimes, we have to give time to ourselves to introspect and let them grow inside us. 

Well, this was what I did in the past five years. 

1. I have been reading a lot of books during this period, including Mankutimmana Kagga, by DVG, mainly. It is considered as the Bhagavadgeete for us. The kagga has been a life-changer for me personally. It is truly a wonderful masterpiece in terms of personality development. 

2. I completed a 200 Hour of Yoga Teacher Training from a reputed Yoga Academy in Bangalore. 

3. I had a good spiritual tour to Uttarakhand in 2019. I had a good trekking experience in those high altitude conditions where breathing was difficult as well. 

Yes, I am excited to be back to writing days. 
I hope to write my experiences slowly, but steadily. 

Watch this space for more writings. 

ಚೌಪದಿ - 7

ಕಲೆತಿಹುದು ಕಣ್ಣುಗಳು ಬೆರೆತಿಹವು ಮನಸುಗಳು।
ನಲಿವಿನಾ ಬದುಕಿನಲಿ ಅರಳಿಹುದು ಹೂವು॥
ಕಲರವವು ಮೂಡಿಹುದು ಮನದೊಳಿಹ ಗೂಡಿನಲಿ।
ಒಲವಿನಾ ಫಲವಿದುವೆ - ಅನಿಕೇತನ॥ 7 ॥ 


ಚೌಪದಿ - 6

ಕಿಟಕಿಯಾ ಹೊರಗಿಹುದು ಬೆಳಕಿನಾ ಲೋಕವದು।
ಕಿಟಕಿಯಾ ಒಳಗಿಹುದು ನೆಮ್ಮದಿಯ ಬದುಕು॥
ಹಟಮಾಡಿ ಹೋಗುನೀಂ ತಡಮಾಡದೇ ಗೆಳೆಯ।
ಚಟವಾಗುವುದದುವೇ - ಅನಿಕೇತನ॥ 6 ॥ 

ಚೌಪದಿ - 5

ಕಡಲೊಳಗೆ ಮುಳುಗುತಿಹ ಮುಸ್ಸಂಜೆ ಮಾಯಾವಿ।
ದಡದೊಳಿಹ ದೋಣಿಯನು ಮೋಹದಲಿ ನೋಡಿ॥
ಸಡಗರದಿ ನಾಚಿಹನು ಬಾನ ರಂಗೇರಿಸುತ।
ಪಡುವಣದ ಸೊಬಗಿದುವೆ - ಅನಿಕೇತನ॥ 5 ॥ 

ಚೌಪದಿ - 4

ಮೂಡಣದಿ ಮೂಡಿಹನು ಮೋಹಿತನು ದಿನದಿನವು।
ನೋಡುತಿಹನೆಲ್ಲರನು ಮನಸೂರೆಗೊಂಡು॥
ಹಾಡುತಿಹನವನು ರಮಣೀಯ ರಾಗದಲಿ।
ತಡವರಿಸನವನೆಂದು - ಅನಿಕೇತನ॥ 4 ॥ 

ಚೌಪದಿ - 3

ಅಲೆಗಳನು ನೋಡುತಿರೆ ಪಡುವಣದ ದಿಕ್ಕಿನಲಿ।
ಬಲೆಗಳನು ಬೀಸಿಹನು ದಿನಕರನು ನಮಗೆ॥
ತಲೆಯೊಳಿಹ ದುಗುಡಗಳು ಏನನೂ ಹೇಳದೇ।
ಮೂಲೆಯನು ಸೇರಿಹುದು - ಅನಿಕೇತನ॥ 3 ॥

ಚೌಪದಿ - 2

ಅನುಭವಿಸು ಜೀವನದ ಕಲೆಯನೀಂ ಒಳಿತಿಹುದು।
ಕನಸುಗಳ ಕಾಣುತಾ ಮಲಗಿರಲು ನೀನು॥ 
ನನಸದನು ಮಾಡಲೇಬೇಕೆನಿಸಿ ಹೋರಾಡು।
ಅನುಭವವ ಸಾರುನೀ - ಅನಿಕೇತನ॥ 2 ॥ 

ಚೌಪದಿ - 1

ಪದಗಳನು ಭಾವಗಳನಾವುದನು ನಾನರಿಯೆ|
ಬದುಕಿನಲಿ ನಡವಳಿಕೆ ರೀತಿಯದನರಿಯೆ||
ಬದುಕುವುದು ಬೆದಕುವುದು ಸಾಕೆನಗೆ ನೆಮ್ಮದಿಗೆ|
ಮೊದಲ ಚೌಪದಿಯಿದುವೆ - ಅನಿಕೇತನ|| 1 ||