My Blog List

Showing posts with label ಶಂಭು. Show all posts
Showing posts with label ಶಂಭು. Show all posts

Thursday, June 24, 2010

ಶಿವಲಿಂಗದ ಮಹತ್ವ.

ಶಿವಲಿಂಗದ ಮಹತ್ವ.
ಶಿವನ ಸ್ವರೂಪವು ಅತ್ಯಂತ ಗಹನವಾದದ್ದು. ವಿಸ್ತರಿಸಿ ಹೇಳುವುದಾದರೆ, ಅವನು ರೂಪಗಳಿಗೆ ಅತೀತನು. ಅಮೂರ್ತ ತತ್ತ್ವವನ್ನು ಆರಾಧಿಸುವುದು ಅಸಾಧ್ಯವಾದ್ದರಿಂದ ಶಿವನ ವಿಗ್ರಹವು ಎಂದೂ ಮೂಲಮೂರ್ತಿಯಾಗಿ ಪ್ರತಿಷ್ಠಾಪಿಸಲ್ಪಡುವುದಿಲ್ಲ ಮತ್ತು ಪೂಜಿಸಲ್ಪಡುವುದಿಲ್ಲ. ಶಿವಲಿಂಗದ ಸಂಕೇತದಲ್ಲೇ ಶಿವನಿಗೆ ಪೂಜೆ. ಲಿಂಗ ಎಂದರೆ ಸಂಕೇತ ಅಥವಾ ಗುರುತು. ಶಿವನು ಕಾಲಾತೀತನಾದ್ದರಿಂದ, ಅಂತಹ ಅವ್ಯಕ್ತರೂಪದ ವಿಶಾಲತೆಯನ್ನು ಶಿವಲಿಂಗವು ಸಂಕೇತಿಸುತ್ತದೆ. ವ್ಯಕ್ತರೂಪವು ಶಿವ ಮತ್ತು ಅವ್ಯಕ್ತರೂಪವು ಲಿಂಗ ಎಂಬುದೂ ಉಲ್ಲೇಖಿತವಾಗಿದೆ. ಶಿವಲಿಂಗಗಳಲ್ಲಿ 'ಚಲ' ಮತ್ತು 'ಅಚಲ' ಎಂಬ ಎರಡು ಬಗೆಗಳಿವೆ.

ಅಚಲ ಲಿಂಗಗಳು.
ಅಚಲ ಲಿಂಗಗಳು ದೇವಸ್ಥಾನಗಳಲ್ಲಿ ಸ್ಥಾಪಿತವಾಗುತ್ತವೆ. ಇವು ಸಾಮಾನ್ಯವಾಗಿ ಮೂರು ಭಾಗಗಳನ್ನು ಹೊಂದಿರುತ್ತದೆ. ಅತ್ಯಂತ ಕೆಳಗಿನ ಭಾಗವು ಚೌಕಾಕಾರವಾಗಿರುತ್ತದೆ. ಇದು 'ಬ್ರಹ್ಮ ಭಾಗ'. ಇದು ಸಹಜವಾಗಿ ಸೃಷ್ಟಿಯ ಸಂಕೇತ. ಮಧ್ಯ ಭಾಗವು ಅಷ್ಟಕೋನಾಕಾರದಲ್ಲಿದ್ದು 'ವಿಷ್ಣು ಭಾಗ' ಎಂದು ಕರೆಯಲ್ಪಡುತ್ತದೆ. ಇದು ಸ್ಥಿತಿಗೆ ಸಂಕೇತ. ದುಂಡನೆಯ ಕುಂಭದೋಪಾದಿಯ 'ರುದ್ರ ಭಾಗ'ವು ಪೀಠದಿಂದ ಹೊರಬರುವಂತಿದ್ದು ಇದು ಅವ್ಯಕ್ತದಿಂದ ಮೂಡಿದ ವ್ಯಕ್ತ ರೂಪದ ಸಂಕೇತ. ಇದನ್ನೇ ಶಿವ ಸ್ವರೂಪವಾಗಿ ಪೂಜಿಸಲಾಗುತ್ತದೆ. ಈ ಪೂಜಾಭಾಗದ ಮೇಲೆ ತ್ರಿಗುಣ ಸಂಕೇತವಾದ ಮೂರು ಗೆರೆಗಳಿರುತ್ತದೆ. ಇದಕ್ಕೆ 'ಬ್ರಹ್ಮಸೂತ್ರ' ಎಂದು ಹೆಸರು. ಇದರಿಂದ ಲಿಂಗವು ಪೂಜೆಗೆ ಅರ್‌ಹವಾಗುತ್ತದೆ. ಅಷ್ಟೇ ಅಲ್ಲ, ಶಿವಲಿಂಗದ ಎದುರು ಬಸವನ ಮೂರ್ತಿ ಇರಲೇಬೇಕು ಎಂಬ ಪ್ರತೀತಿ ಇದೆ. ಇದನ್ನು ಅವ್ಯಕ್ತದ ಅಗಾಧತೆಯನ್ನು ವ್ಯಕ್ತದ ಮೂಲಕ ಸರಿದೂಗಿಸುವ ಯತ್ನವನ್ನಾಗಿ ನೋಡಬಹುದು. ಗಮನಿಸ ಬೇಕಾದ ಅಂಶವೆಂದರೆ, ಶಿವನು ನಂದಿವಾಹನನೂ ಹೌದು. ಈ ನಂದಿಯ ಭುಜದಲ್ಲೂ ಶಿವಲಿಂಗ ಸ್ವರೂಪದ ಡುಬ್ಬ ಇರುವುದನ್ನು ನೋಡಬಹುದು.

ಚಲ ಲಿಂಗಗಳು.
ಚಲ ಲಿಂಗಗಳೆಂದರೆ ಮೈಮೇಲೆ ಧರಿಸುವ ಲಿಂಗಗಳು, ಕೊರಳಲ್ಲಿ, ತಲೆಯ ಮೇಲೆ, ಭುಜದಲ್ಲಿ ಲಿಂಗಗಳನ್ನು, ಬಟ್ಟೆಯಲ್ಲಿ ಸುತ್ತಿ ಅಥವಾ ಸಂಪುಟಗಳಲ್ಲಿಟ್ಟು ಮೈಮೇಲೆ ಇರಿಸಿಕೊಳ್ಳುವ ಸಂಪ್ರದಾಯ ಶೈವ ಪರಂಪರೆಯಲ್ಲಿದೆ. ಇದನ್ನು 'ಶಿವಯೋಗ' ಎಂದೂ ಕರೆಯಲಾಗುತ್ತದೆ. ಶಿವನು ತಾನೇ ಲಿಂಗವನ್ನು ಸದಾ ತನ್ನ ಕೊರಳಲ್ಲಿ ಧರಿಸಿರುತ್ತಾನೆಂದೂ, ಅದಕ್ಕೆ 'ಆತ್ಮಲಿಂಗ'ವೆಂಬ ಹೆಸರಿದೆ ಎಂದು ಪ್ರತೀತಿ ಇದೆ. ಹೀಗೆ ಶಿವಲಿಂಗ ಧರಿಸುವುದರ ಹಿಂದೆ ಅಮೂರ್ತವನ್ನು ಹಿಡಿಯುವ ಮಹತ್ವಾಕಾಂಕ್ಷೆ ಮತ್ತು ಅದಕ್ಕೆ ಬೇಕಾಗುವ ಏಕಾಗ್ರತೆ ಎರಡರ ತಾತ್ತ್ವಿಕತೆಯೂ ಇದೆ. ಶಿವನು ನಿರಾಕಾರನು, ಅವನು ನಮ್ಮ ಅಭಿರುಚಿ ಮತ್ತು ಆಕಾರಗಳಿಗೆ ತಕ್ಕಂತೆ ಪರಿಭಾವಿಸಬೇಕು. ಈ ಉಪಾಸನೆಗೆ ಲಿಂಗಧಾರಣೆಯು ಸಂಕೇತ ಎಂದು ಹೇಳಬಹುದು.

Wednesday, April 07, 2010

ಯೋಗಮೂರ್ತಿ ಪರಶಿವ.

ಯೋಗಮೂರ್ತಿ ಪರಶಿವ. 



ಪರಶಿವನು ಯೋಗ ಮತ್ತು ಯೋಗಿಗಳ ಒಡೆಯನು. ಗಾಢ ಧ್ಯಾನದಲ್ಲಿರುವ, ಅಂತರ್ಮುಖಿಯಾಗಿ ಆನಂದದಿಂದಿರುವ ಶಿವನ ಚಿತ್ರಣವು ಬಹಳ ಪ್ರಖ್ಯಾತವಾದದ್ದು. ಶಿವನ ಜಟೆಯಿಂದ ಹರಿದು ಬರುತ್ತಿರುವ ಗಂಗೆಯ ಧಾರೆ ಈ ಪೂರ್ಣತೆಯಿಂದ ಬಂದ ಪಾವಿತ್ರ್ಯದ ಸಂಕೇತ. ಅದು ನಿರಂತರ ಜ್ಞಾನ ಪ್ರವಾಹವನ್ನು ಸೂಚಿಸುತ್ತದೆ. ಈಶನ ಶಿರದಲ್ಲಿರುವ ಚಂದ್ರ, ಕಾಲ ಲೆಕ್ಕಾಚಾರದ ಸಂಕೇತ. ಭಾರತೀಯ ಪಂಚಾಂಗಕ್ಕೆ ಚಂದ್ರನ ಚಲನೆಯಿಂದ ಉಂಟಾಗುವ ಶುಕ್ಲ ಮತ್ತು ಕೃಷ್ಣ ಪಕ್ಷಗಳೇ ಆಧಾರವಾಗಿರಿವ ಎಣಿಕೆಯ ಕ್ರಮ. ಇಂತಹ ಚಂದ್ರನನ್ನೇ ಶಿರದಲ್ಲಿ ಧರಿಸಿ ಶಿವನು, ಕಾಲವು ತನಗೆ ಆಭರಣವೇ ಹೊರತು ಅದಕ್ಕಿಂತ ಹೆಚ್ಚಿನದಲ್ಲ ಎಂದು ಧ್ವನಿಸುತ್ತಾನೆ. ಸಾವಿನ ರೂಪವೇ ಆಗಿರುವ ಘಟ ಸರ್ಪವೂ ಅವನ ಅಲಂಕಾರವೇ. ಶಿವನು ಹಾಲಾಹಲದಂತಹ ಘೋರ ವಿಷವನ್ನೇ ಕುಡಿದು ಜಗವನ್ನು ರಕ್ಷಿಸಿದವನು. ರೂಪವಿರುವುದಕ್ಕೆಲ್ಲ ಅಂತ್ಯವಿರುತ್ತದೆ. ಆದರೆ, ರೂಪವನ್ನು ಮೀರಿದ ಶಿವನಿಗೆ ಅಂತ್ಯದ ಪ್ರಶ್ನೆಯೇ ಇಲ್ಲ. ಇವೆಲ್ಲದರ ಮೂಲಕವೇ ಶಿವನು ಸಾವನ್ನು ಶಾಶ್ವತವಾಗಿ ಜಯಿಸಿದವನಾಗಿ ಮೃತ್ಯುಂಜಯ ಎಂಬ ಹೆಸರನ್ನು ಪಡೆದಿದ್ದಾನೆ. ಶಿವನಿಗೆ ಆಭರಣವಾಗಿರುವ ಮಂಡಲಾಕಾರದ ಸರ್ಪಗಳು ಜೀವ ಜಗತ್ತಿನಲ್ಲಿ ಸೂಕ್ಷ್ಮವಾಗಿರುವ ಲೈಂಗಿಕತೆಯ ಸಂಕೇತ. ಇವುಗಳ ನಿಯಂತ್ರಣವನ್ನು ಬಿಂಬಿಸುವ ಶಿವನ ರೂಪ ಆತ ಶಕ್ತಿಯ ಒಡೆಯ ಕೂಡ ಹೌದು ಎನ್ನುವುದಕ್ಕೆ ನಿದರ್ಶನವಾಗಿದೆ.

ತ್ರಿಶೂಲ ಮತ್ತು ಡಮರುಗ.
ತ್ರಿಶೂಲವು ಶಿವನ ಪ್ರಮುಖವಾದ ಆಯುಧ. ಇದರಲ್ಲಿ ರಕ್ಷಣೆ ಮತ್ತು ಆಕ್ರಮಣ ಎರಡೂ ಗುಣಗಳಿವೆ. ಇವೆರಡನ್ನು ಏಕ ಕಾಲದಲ್ಲಿ ಸಾಧಿಸುವ ಈ ತ್ರಿಶೂಲದಲ್ಲಿರುವ ಮೂರು ಮೊನೆಗಳು ತತ್ತ್ವಶಾಸ್ತ್ರದ ತ್ರಿಗುಣಗಳನ್ನು ಬಿಂಬಿಸುತ್ತವೆ. ಸೃಷ್ಟಿ - ಸ್ಥಿತಿ - ಲಯಗಳು ಜಗತ್ತಿನ ಸ್ಥಾಯಿ ಗುಣಗಳು. ಇವುಗಳನ್ನು ಅರಿತರೆ ರಕ್ಷಣೆ ಮತ್ತು ಮರೆತರೆ ಆಕ್ರಮಣ ಎಂಬ ವೇದಾಂತವನ್ನು ತ್ರಿಶೂಲ ಪ್ರತಿನಿಧಿಸುತ್ತದೆ.

ಶಿವನ ಆಕಾರಗಳಲ್ಲಿ ಬಹಳ ಮುಖ್ಯವಾದದ್ದು ತಾಂಡವ ನೃತ್ಯ ಭಂಗಿ ಅಥವಾ ನಟರಾಜನ ಸ್ವರೂಪ. ಈ ಸ್ವರೂಪವು ನಿರಂತರವಾದ ಕಾಲಕ್ಕೆ ಸಂಕೇತವಾಗಿದೆ. ಶಿವನ ತಾಂಡವ ನೃತ್ಯ ಮಾಡುತ್ತಿರುವಾಗ ತನ್ನ ಡಮರುಗಗಳನ್ನು ಹದಿನಾಲ್ಕು ಬಾರಿ ನುಡಿಸಿದನೆಂದೂ, ಅದು ಆ - ಇ - ಉಣ್ - ಋ - ಲೃ - ಕ್ ಮೊದಲಾದ ಬೀಜಾಕ್ಷರಗಳು ಮೂಡಿದವೆಂದು ಪ್ರತೀತಿ. ಇದಕ್ಕೆ ಮಾಹೇಶ್ವರ ಸೂತ್ರಗಳು ಎಂದು ಹೆಸರು. ಈ ಬೀಜಾಕ್ಷರಗಳಿಂದ ಜಗತ್ತಿನ ಎಲ್ಲಾ ಭಾಷೆ ಮತ್ತು ಅವುಗಳ ವ್ಯಾಕರಣ ರೂಪಗೊಳ್ಳುವುದರಿಂದ ಡಮರುಗವನ್ನು ಭಾಷೆಯ ಪ್ರತಿನಿಧಿ ಎಂದು ಕರೆಯಬಹುದು ಅಥವಾ ಬರಹರೂಪದಲ್ಲಿ ಜ್ಞಾನವನ್ನು ಹಿಡಿದಿಡುವ ಕಾರ್ಯಕ್ಕೆ ಇದನ್ನು ರೂಪಕವಾಗಿ ನೋಡಬಹುದು. 

ಒಂದೆಡೆ ಹೀಗೆ ನಾಗರೀಕವಾದ ಕಲೆ-ವಿಜ್ಞಾನಗಳ ನೆಲೆಯಾದ ಭಾಷೆಯನ್ನು ಡಮರುಗ ಸೂಚಿಸುತ್ತಿದ್ದರೆ, ಇನ್ನೊಂದು ಹಸ್ತದಲ್ಲಿರುವ ಖಟ್ಟಾಂಗ (ಒಂದು ತುದಿಯಲ್ಲಿ ತಲೆ ಬುರುಡೆಯನ್ನು ಹೊಂದಿರುವ ಮಂತ್ರದಂಡ) ಪ್ರಕೃತಿ ಸಹಜವಾದ ಮೂಲ ಸ್ವರೂಪಿ ಜ್ಞಾನವನ್ನು ಪ್ರಧಾನವಾಹಿನಿಗೆ ತರಬಲ್ಲ ಸಾಮರ್ಥ್ಯವನ್ನು ಸೂಚಿಸುತ್ತದೆ. ಹೀಗೆ ಶಿವ ಸಹಜತೆ ಮತ್ತು ನಾಗರೀಕತೆ ಎರಡರ ಸಮನ್ವಯ ಮೂರ್ತಿಯಾಗಿದ್ದಾನೆ. ಶಿವನ ಕೈಯಲ್ಲಿರುವ ದರ್ಪಣ, ಇಡೀ ಸೃಷ್ಟಿಯೇ ಅದರಲ್ಲಿ ಅಡಕವಾಗಿ ಎಲ್ಲವೂ ಶಿವಮಯವಾಗಿರುವುದನ್ನು ಸೂಚಿಸುತ್ತದೆ. ಶಿವನು ಕೇವಲ ಜ್ಞಾನದ ಸಂಕೇತ ಮಾತ್ರವಲ್ಲ, ಕಲಿಕೆಗೆ ಹೆಗ್ಗುರುತು ಕೂಡ ಹೌದು. ಜಗತ್ತಿನೆಲ್ಲೆಡೆ ಜ್ಞಾನವನ್ನು ಹರಡಿದ ಋಷಿಗಳಿಗೆ ಜ್ಞಾನದ ಪ್ರಾಥಮಿಕ ಪಾಠ ಕಲಿಸಿದವನು ಶಿವನೇ! ಅವನು ದಕ್ಷಿಣ ದಿಕ್ಕಿನಲ್ಲಿ ಕುಳಿತು ವಿದ್ಯೆ ಕಲಿಸಿದ್ದರಿಂದ 'ದಕ್ಷಿಣಾಮೂರ್ತಿ' ಎಂಬ ಹೆಸರೂ ಇದೆ.


ಚಿತ್ರ ಕೃಪೆ: ಶ್ರೀನಿವಾಸ್

Friday, February 12, 2010

ನಿರಾಕಾರ ಸ್ವರೂಪ ಪರಶಿವ.

ಮಂಜುನಾಥ.
ವೇದಕಾಲಗಳಿಂದಲೂ ಶಿವನು 'ಪಶುಪತಿ' ಆಗಿ ಆರಾಧನೆಗೊಳ್ಳುತ್ತಾ ಬಂದಿದ್ದಾನೆ. ಪ್ರಳಯದ ನಂತರ ಮತ್ತೆ ಸೃಷ್ಟಿರಚನೆಗೆ ಮೊದಲು ಯಾರಲ್ಲಿ ವಿಶ್ವವು ನಿದ್ದೆ ಮಾಡುತ್ತದೆಯೋ (शॆतॆ अस्मिन्निति शिवः) ಆತನೇ ಶಿವ ಎಂಬುದು ವಾಚ್ಯಾರ್ಥ. ಜನಿಸಿದೆಲ್ಲವೂ ಮರಣ ಹೊಂದಲೇಬೇಕು, ನಾಶವಾಗಲೇಬೇಕು. ಇದು ಸೃಷ್ಟಿಯ ನಿಯಮ. ಇದನ್ನು ಸಂಕೇತಿಸುವ ಶಕ್ತಿಯೇ ಶಿವ. ಶಿವ ಎಂಬ ಪರಿಕಲ್ಪನೆಯ ಅರ್ಥ ಇಷ್ಟಕ್ಕೇ ಸೀಮಿತವಾದದ್ದಲ್ಲ. ಅಂತ್ಯವಿಲ್ಲದ ಶೂನ್ಯದೊಳಗೆ ವಿಲೀನಗೊಳ್ಳುವುದೇ ಜಗತ್ತಿನ ಅವಸಾನ, ಅದುವೇ ಲಯ. ಈ ಮಹಾಶೂನ್ಯವನ್ನು ವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಇದರ ಸ್ವರೂಪವೇ ಪರಶಿವ. ತಮಿಳುನಾಡಿನ ಚಿದಂಬರಂ ಕ್ಷೇತ್ರ ಬಹಳ ಪ್ರಖ್ಯಾತವಾದದ್ದು. ಅಲ್ಲಿನ ದೇಗುಲದ ಗರ್ಭಗುಡಿಯಲ್ಲಿ ಉಳಿದ ಶಿವಾಲಯಗಳಂತೆ ಶಿವಲಿಂಗವಿಲ್ಲ. ಗರ್ಭಗುಡಿ ಬರಿದಾಗಿದ್ದು ಗೋಡೆಯ ಮೇಲೆ ಚಕ್ರವೊಂದರ ನಿರೂಪಣೆ ಇದೆ. ಇಲ್ಲಿರುವುದು ಆಕಾಶ ಲಿಂಗ (ಆಕಾಶವನ್ನು ಶೂನ್ಯಕ್ಕೆ ಹೋಲಿಸಿದ್ದಾರೆ) ಎಂದು ಪ್ರತೀತಿ. ಅದರ ಮುಂದೆ ತೆರೆಯನ್ನೆಳೆದಿದ್ದಾರೆ. ಪೂಜೆಯ ಕೆಲವು ಸಂದರ್ಭಗಳಲ್ಲಿ ಮಾತ್ರ ಇದನ್ನು ಪಕ್ಕಕ್ಕೆ ಸರಿಸುತ್ತಾರೆ. ಇದೇ 'ಚಿದಂಬರ ರಹಸ್ಯ' ಎಂದು ಪ್ರಖ್ಯಾತವಾಗಿದೆ. ಆಕಾರವು ಮನುಷ್ಯನ ಗ್ರಹಿಕೆಗೆ ಎಟುಕಲು ಮಾತ್ರ ರೂಪುಗೊಂಡಿದೆ. ಪರಮಾತ್ಮನ ನಿಜಸ್ವರೂಪ ರೂಪ ರೂಪಗಳನ್ನು ಮೀರಿದ್ದು ಎಂಬ ಅರ್ಥ ಇಲ್ಲಿದೆ. ರೂಪಾತೀತ ಸ್ಥಿತಿಯೇ ಶಿವನ ನಿಜವಾದ ಸ್ವರೂಪ.

ಶಿವನ ಸ್ವರೂಪಗಳು.
ನಿರಾಕಾರಮಯನಾದ ಶಿವನ ಆರಾಧನೆಯಲ್ಲಿ ಶಾಂತ ಸ್ವರೂಪವನ್ನು ಕಾಣಬಹುದಾಗಿದ್ದು, ಪ್ರಳಯ ಸ್ವರೂಪವಾದ ರುದ್ರನೆಂಬ ಇನ್ನೊಂದು ಆಕಾರವೂ ಇದೆ. ಶಿವನು ಒಂದು ರೂಪದಲ್ಲಿ ಶ್ವೇತವರ್ಣನಾಗಿದ್ದರೆ, ಇನ್ನೊಂದು ರೂಪದಲ್ಲಿ ಕಡು ನೀಲಿಬಣ್ಣವನ್ನು ಹೊಂದಿದ್ದಾನೆ. ಪರಸ್ಪರ ವಿರುದ್ಧ ಎನಿಸಬಹುದಾದ ಈ ಗುಣಗಳು ಶಿವನಿಗಿರುವುದು ಆಶ್ಚರ್ಯಕರ ಎನಿಸಬಹುದು. ಆದರೆ, ಎಲ್ಲಾ ವರ್ಣಗಳನ್ನು ಬೇರ್ಪಡಿಸಲಾಗದಂತೆ ಪಡೆದಿರುವ ಇವನ ನಿರಾಕಾರವು ಅಸಂಖ್ಯ ಆಕಾರಗಳ ಪೂರ್ಣ ಸ್ವರೂಪವೂ ಆಗಿದೆ. ಹೀಗಾಗಿ ನೋಡುವವರ ಭಾವಕ್ಕೆ ತಕ್ಕ ಬಣ್ಣಗಳಲ್ಲಿ ಶಿವನು ಕಂಡಿದ್ದಾನೆ. ಮುಕ್ಕಣ್ಣನೆಂದು ಹೆಸರಾದ ಶಿವನಿಗಿರುವ ಮೂರು ಕಣ್ಣುಗಳು ಸೂರ್ಯ, ಚಂದ್ರ ಮತ್ತು ಅಗ್ನಿ ಇವುಗಳ ಸಂಕೇತ. ಇವು ಬೆಳಕು, ಜೀವ ಮತ್ತು ಶಾಖದ ಮೂಲ ಆಕಾರಗಳೂ ಹೌದು. ಹಾಗೇ‌ಸಾಮಾನ್ಯ ಕಣ್ಣುಗಳನ್ನು ಮೀರಿದ ಶಿವನ ಮೂರನೆಯ ಕಣ್ಣು, ಜ್ಞಾನ ನೇತ್ರ. ಅದು ವಿವೇಕದ ಸಂಕೇತ. ಅದು ಯಾವಾಗಲೂ ಮುಚ್ಚಿಕೊಂಡಿರುತ್ತದೆ. ತೆರೆದರೆ ಮಹಾ ಪ್ರಳಯವೇ ಆಗಿ ಬಿಡುತ್ತದೆ ಎಂಬಲ್ಲಿ ಜ್ಞಾನ ಮತ್ತು ವಿವೇಕಗಳು ಒಟ್ಟಾಗಿ ಇರಬೇಕಾದ ಸರ್ವ ವ್ಯಾಪಕತೆಯ ಗುಣವನ್ನು ಗಮನಿಸಬಹುದು.

ಸೂರ್ಯ-ಚಂದ್ರರೇ ಶಿವನ ಸಹಜ ಕಣ್ಣುಗಳಾದರೆ ಪ್ರಚಂಡವಾಗಿ ಬೀಸುತ್ತಿರುವ ಗಾಳಿಸಹಿತವಾದ ಇಡೀ ಆಕಾಶವು ಅವನ ತಲೆಗೂದಲಾಗುತ್ತದೆ. ಆದ್ದರಿಂದಲೇ ಅವನಿಗೆ 'ವ್ಯೋಮಕೇಶ' (ಆಕಾಶವನ್ನೇ ತಲೆಗೂದಲಾಗಿ ಉಳ್ಳವನು) ಎಂದು ಕರೆಯುತ್ತಾರೆ. ಹುಲಿಯು ಆಕ್ರಮಣಕಾರಿಯಾದ ಪ್ರಾಣಿ. ಅಸಹಾಯಕ ಬಲಿಪಶುಗಳನ್ನು ನಿರ್ದಾಕ್ಷಿಣ್ಯವಾಗಿ ಬಗೆದು ತಿನ್ನುವ ಕ್ರೂರಿ. ಇದನ್ನು ಎಂದಿಗೂ ತೃಪ್ತಿಗೊಳ್ಳದೆ ಮಾನವರನ್ನು ಸದಾ ಬಲಿ ತೆಗೆದುಕೊಳ್ಳುತ್ತಿರುವ 'ಆಸೆ'ಗಳಿಗೆ ಹೋಲಿಸಬಹುದು. ಹುಲಿಯನ್ನು ಕೊಂದು ಅದರ ಚರ್ಮವನ್ನು ಧರಿಸಿರುವ ಶಿವನು ಆಸೆಯನ್ನು ಮೆಟ್ಟಿ ನಿಂತಿರುವ ಮನೋಸ್ಥಿತಿಯ ಸಂಕೇತ.

ಆನೆ, ಪ್ರಾಣಿಗಳಲ್ಲೇ ಅತ್ಯಂತ ಬಲಿಷ್ಠವಾದದ್ದು. ಶಿವನು ಅದರ ಚರ್ಮವನ್ನು ಧರಿಸಿ ಎಲ್ಲಾ ಬಗೆಯ ಪಶುಭಾವಗಳನ್ನು ಜಯಿಸಿರುವ ಸ್ಥಿತಿಯನ್ನು ಪ್ರತಿಬಿಂಬಿಸುತ್ತಾನೆ. ಶಿವನು ಧರಿಸಿರುವ ತಲೆಬುರುಡೆಗಳ ಹಾರ ಮತ್ತು ಚಿತಾಭಸ್ಮಧಾರಣೇ ಅವನು ವಿನಾಶದ ಪ್ರಭು ಎಂದು ಸೂಚಿಸುತ್ತದೆ. ತಲೆಬುರುಡೆಗಳ ಮೂಳೆಯು ಕಾಲಪ್ರವಾಹದ ಆವರ್ತಗಳನ್ನು, ಸೃಷ್ಟಿ-ಸ್ಥಿತಿ-ಲಯಗಳ ನಿರಂತರವಾದ ಕಾಲಚಕ್ರವನ್ನು ಸೂಚಿಸುತ್ತದೆ. ಹೀಗೆ ಶಿವನ ಸ್ವರೂಪದಲ್ಲಿ ತಾತ್ತ್ವಿಕತೆಯನ್ನು ಕಾಣಬಹುದು. 
(ಇನ್ನೂ ಇದೆ)